ಜ್ಞಾನಪೀಠ ಪ್ರಶಸ್ತಿ ಪ್ರಕಟ: ಹಿರಿಯ ಕವಿಗೆ ಒಲಿದ ಸಾಹಿತ್ಯ ಮುಕುಟ
ನವದೆಹಲಿ, ನವೆಂಬರ್ 29: ಐವತ್ತೈದನೇ ಜ್ಞಾನಪೀಠ ಪ್ರಶಸ್ತಿ ಇಂದು ಪ್ರಕಟವಾಗಿದ್ದು, ಮಲೆಯಾಳ ಕವಿ ಅಕ್ಕಿತಂ ಅಚ್ಯುತ್ತನ್ ನಂಬೂದಿರಿ ಅವರು ಜ್ಞಾನಪೀಠಕ್ಕೆ ಭಾಜನರಾಗಿದ್ದಾರೆ.
ಮಲೆಯಾಳ ಭಾಷೆಯ ಹಿರಿಯ ಕವಿಗಳಾದ 93 ವರ್ಷದ ಅಕ್ಕಿತಂ ಅಚ್ಯುತ್ತನ್ ನಂಬೂದಿರಿ ಅವರು 'ಅಕ್ಕಿತಂ' ಕಾವ್ಯನಾಮದಿಂದ ಸಾಹಿತ್ಯಾಸಕ್ತರಿಗೆ ಪರಿಚಿತರು.
ಕೇರಳದ ಪಲಕ್ಕಾಡ್ ನಲ್ಲಿ ಜನಿಸಿದ ಅಕ್ಕಿತಂ ಅವರು ಹಲವಾರು ಕವನ, ನಾಟಕ, ಸಣ್ಣ ಕತೆಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಕೇರಳದ ಜನಮಾನಸ ತಲುಪಿದ್ದು, ಜ್ಞಾನಪೀಠಕ್ಕೂ ಮುನ್ನಾ ಹಲವು ಪ್ರಶಸ್ತಿಗಳು ಅವರ ಸಾಹಿತ್ಯದ ಗೌರವ ಹೆಚ್ಚಿಸಿದೆ.
ಸಾಹಿತ್ಯಕ್ಕೆ ಭಾರತದಲ್ಲಿ ನೀಡಲಾಗುವ ಪರಮೋಚ್ಛ ಪ್ರಶಸ್ತಿ ಜ್ಞಾನಪೀಠವನ್ನು ಪಡೆಯುವ ಮೂಲಕ ಈ ಗೌರವಕ್ಕೆ ಪಾತ್ರರಾದ ಕೇರಳದ ಆರನೇಯ ಕವಿ ಎಂಬ ಖ್ಯಾತಿಯನ್ನು ಅಕ್ಕಿತಂ ಪಡೆದಿದ್ದಾರೆ.
ಕೇರಳ ಸಾಹಿತ್ಯಕ್ಕೆ ಹೊಸಗಾಳಿ ತಂದುಕೊಟ್ಟ ಅಕ್ಕಿತಂ ಅವರ ಇರುಪತ್ತಂ ನೂತಂತಿತೆ ಇತಿಹಾಸಂ, ಬಲಿದರ್ಶನಂ, ಧರ್ಮ ಸೂರ್ಯನ್ ಇನ್ನೂ ಹಲವಾರು ಕೃತಿಗಳು ಭಾರಿ ಪ್ರಶಂಸೆ ಮತ್ತು ಖ್ಯಾತಿ ಗಳಿಸಿವೆ.
ಜ್ಞಾನಪೀಠ ಪ್ರಶಸ್ತಿಯ ಹೊರತಾಗಿ ಪದ್ಮಶ್ರೀ ಪ್ರಶಸ್ತಿ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.