ಓಖಿ: ಕೇರಳ, ಲಕ್ಷದ್ವೀಪದಲ್ಲಿ 531 ಮೀನುಗಾರರ ರಕ್ಷಣೆ
ತಿರುವನಂತಪುರಂ, ಡಿಸೆಂಬರ್ 2: ಓಖಿ ಚಂಡಮಾರುತದಿಂದಾಗಿ ಕೇರಳ ಮತ್ತು ಲಕ್ಷದ್ವೀಪದ ಕರಾವಳಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 531 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇಲ್ಲಿಯವರೆಗೆ ಕೇರಳದ 393 ಜನರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ವಿಜಯನ್ ತಿಳಿಸಿದ್ದಾರೆ.
ವಿಡಿಯೋ, ಚಿತ್ರಗಳಲ್ಲಿ ಲಕ್ಷದ್ವೀಪದ ಓಖಿ ಅಬ್ಬರ!
ರಕ್ಷಣೆ ಮಾಡಿದವರಲ್ಲಿ ತಿರುವನಂತಪುರಂನ 132, ಕೋಝಿಕ್ಕೋಡ್ ನ 66, ಕೊಲ್ಲಂನ 55, ತ್ರಿಶೂರ್ ನ 40 ಮತ್ತು ಕನ್ಯಾಕುಮಾರಿಯ 100 ಮೀನುಗಾರರು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಲಕ್ಷದ್ವೀಪದಲ್ಲಿ 138 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮೀನುಗಾರಿಕೆ ಇಲಾಖೆ ನೀಡುವ 4 ಲಕ್ಷ ರೂಪಾಯಿ ಪರಿಹಾರದ ಜತೆಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ 31 ರಿಲೀಫ್ ಕ್ಯಾಂಪ್ ಆರಂಭಿಸಲಾಗಿದ್ದು 1,047 ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಕಳೆದೆರಡು ದಿನಗಳಲ್ಲಿ ಓಖಿ ಅಬ್ಬರಕ್ಕೆ ಕೇರಳವೊಂದರಲ್ಲೇ 7 ಜನ ಸಾವನ್ನಪ್ಪಿದ್ದಾರೆ.