ಭಾರತದಲ್ಲಿ 100ರಲ್ಲಿ 50 ಮಂದಿಗೆ ಕೊರೊನಾವೈರಸ್ ಪಕ್ಕಾ!
ನವದೆಹಲಿ, ಅಕ್ಟೋಬರ್.18: ಭಾರತದ 135 ಕೋಟಿ ಜನರ ಪೈಕಿ ಶೇ.50ರಷ್ಟು ಮಂದಿಗೆ ಮಹಾಮಾರಿ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ತಜ್ಞರ ಸಮಿತಿಯು ಎಚ್ಚರಿಕೆ ಸಂದೇಶ ನೀಡಿದೆ.
2021ರ ಫೆಬ್ರವರಿ ವೇಳೆಗೆ ದೇಶದ ಅರ್ಧದಷ್ಟು ಜನರಿಗೆ ಕೊವಿಡ್-19 ಸೋಂಕು ಅಂಟಿಕೊಳ್ಳುವ ಅಪಾಯವಿದೆ. ಭಾರತದಲ್ಲಿ ಈಗಾಗಲೇ 75 ಲಕ್ಷ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಅತಿಹೆಚ್ಚು ಪ್ರಕರಣಗಳಿರುವ ಜಗತ್ತಿನ ಎರಡನೇ ರಾಷ್ಟ್ರ ಎಂದು ಭಾರತವು ಗುರುತಿಸಿಕೊಂಡಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಸಮುದಾಯ ಪ್ರಸರಣ
ಅಮೆರಿಕಾದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಸಪ್ಟೆಂಬರ್ ಮಧ್ಯಭಾಗದಲ್ಲಿ ಸರಾಸರಿ ದಿನಕ್ಕೆ 61390 ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿದು ಬಂದಿದೆ.
ದೇಶದ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ಸೋಂಕು
ಪ್ರಸ್ತುತ ಲೆಕ್ಕಾಚಾರ ಹಾಕಿರುವ ಮಾದರಿ ಪ್ರಕಾರ, ದೇಶದ ಶೇ.30ರಷ್ಟು ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂದಿನ ಫೆಬ್ರವರಿ ತಿಂಗಳ ವೇಳೆಗೆ ಶೇ.50ರಷ್ಟು ಜನರಿಗೆ ಕೊವಿಡ್-19 ಸೋಂಕು ತಗುಲುವ ಅಪಾಯವಿದೆ ಎಂದು ಕಾನ್ಪುರ್ ದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ಸಮಿತಿ ಸದಸ್ಯರೂ ಆಗಿರುವ ಮಣೀಂದ್ರ ಅಗರ್ವಾಲ್ ತಿಳಿಸಿದ್ದಾರೆ.
ಸಿರೋಲಾಜಿಕಲ್ ಸಮೀಕ್ಷೆ ಬಗ್ಗೆ ಸಮಿತಿ ಸದಸ್ಯರ ಉಲ್ಲೇಖ
ಸರ್ಕಾರದ ಸಿರೋಲಾಜಿಕಲ್ ಸಮೀಕ್ಷೆಗಿಂತ ಸಮಿತಿಯ ಅಂದಾಜಿನಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿವೆ. ಏಕೆಂದರೆ ಸಪ್ಟೆಂಬರ್ ವೇಳೆಗೆ ದೇಶದ ಜನಸಂಖ್ಯೆ ಶೇ.14ರಷ್ಟು ಜನರಿಗೆ ಕೊವಿಡ್-19 ಸೋಂಕು ತಗುಲುತ್ತದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಸಿರೋಲಾಜಿಕಲ್ ಸಮೀಕ್ಷೆಯಲ್ಲಿ ಸರಿಯಾದ ಅಂಕಿ-ಅಂಶಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಇದರ ಬದಲಿಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಇತರ ಸಂಶೋಧನಾ ತಜ್ಞರನ್ನೊಳಗೊಂಡ ಸಮಿತಿಯು ವರದಿಯೊಂದನ್ನು ನೀಡಿದೆ. ಇದು ಗಣಿತದ ಮಾದರಿಯನ್ನು ಅವಲಂಬಿಸಿದೆ ಎಂದು ಮಣೀಂದ್ರ ಅಗರ್ವಾಲ್ ತಿಳಿಸಿದ್ದಾರೆ.
ಶಿಷ್ಟಾಚಾರ ಪಾಲಿಸುವಂತೆ ತಜ್ಞರ ಸಮಿತಿಯ ಸಲಹೆ
ಕೊರೊನಾವೈರಸ್ ಸೋಂಕಿನ ಹಾವಳಿಯು ನಿಗದಿತ ಗಡಿಯನ್ನು ದಾಟಿದೆ ಎಂದು ಸರ್ಕಾರ ನೇಮಿಸಿದ ತಜ್ಞರ ಸಮಿತಿಯು ತಿಳಿಸಿದೆ. ಎಲ್ಲ ಮಾನದಂಡ ಮತ್ತು ಶಿಷ್ಟಾಚಾರ ಪಾಲಿಸಿದ್ದಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಕೊವಿಡ್-19 ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಮಿತಿಯು ಭವಿಷ್ಯ ನುಡಿದಿದೆ. ಚಳಿಗಾಲ ಮತ್ತು ಸಾಲು ಸಾಲು ಹಬ್ಬ ಹರಿದಿನಗಳ ಹಿನ್ನೆಲೆ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುವ ಆತಂಕವಂತೂ ಇದ್ದೇ ಇದೆ. ಕೊವಿಡ್-19 ನಿಯಮಗಳನ್ನು ಸಡಿಲಗೊಳಿಸಿದ್ದು, ಮುಂದಿನ ಒಂದು ತಿಂಗಳಿನಲ್ಲೇ ಕನಿಷ್ಠ 26 ಲಕ್ಷ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಸಮಿತಿಯು ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳೆಷ್ಟು?
ಭಾರತದಲ್ಲಿ ಒಂದೇ ದಿನ 55,722 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 75,50,273ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 579 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 1,14,610ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ 66,63,608 ಸೋಂಕಿತರು ಗುಣಮುಖರಾಗಿದ್ದು, 7,72,055 ಸಕ್ರಿಯ ಪ್ರಕರಣಗಳಿವೆ. ಅಕ್ಟೋಬರ್ 18ರವರೆಗೂ ದೇಶದಲ್ಲಿ 9,50,83,976 ಮಾದರಿಗಳನ್ನು ಪರೀಕ್ಷಿಸಲಾಗಿದೆ.
Recommended Video