ಐಐಟಿ ಪದವೀಧರರಿಂದ ಹೊಸ ರಾಜಕೀಯ ಪಕ್ಷ
ಬೆಂಗಳೂರು, ಏಪ್ರಿಲ್ 23: ಪ್ರತಿಷ್ಠಿತ ಐಐಟಿಯ ಪದವೀಧರರು ಸೇರಿಕೊಂಡು ಹೊಸ ರಾಜಕೀಯ ಪಕ್ಷವನ್ನು ಕಟ್ಟಿದ್ದಾರೆ. ಕೈತುಂಬಾ ಸಂಬಳ ನೀಡುತ್ತಿದ್ದ ಸಂಸ್ಥೆಯನ್ನು ತೊರೆದ 50 ಮಂದಿ, ಬಹುಜನ ಆಜಾದ್ ಪಾರ್ಟಿ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಹೋರಾಟ ನಮ್ಮ ಪಕ್ಷದ ಮುಖ್ಯ ಗುರಿ ಎಂದು ಐಐಟಿ ದೆಹಲಿಯಲ್ಲಿ ಪದವಿ ಪಡೆದಿದ್ದ ನವೀನ್ ಕುಮಾರ್ ಹೇಳಿದ್ದಾರೆ. ನವೀನ್ ಅವರು ಸದ್ಯ ಪಕ್ಷದ ಮುಖ್ಯಸ್ಥರಾಗಿದ್ದು, ಪಕ್ಷಕ್ಕೆ ಮಾನ್ಯತೆ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಪಕ್ಷದಲ್ಲಿರೋ 50 ಸದಸ್ಯರು ಬೇರೆ ಬೇರೆ ಐಐಟಿಯಲ್ಲಿ ಪದವಿ ಪಡೆದವರು. ಐಐಟಿ ದೆಹಲಿಯಲ್ಲಿ ಪದವಿ ಪಡೆದಿದ್ದ ನವೀನ್ ಕುಮಾರ್ ಈ ಪಕ್ಷದ ನೇತೃತ್ವ ವಹಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಉದ್ದೇಶವನ್ನು ಇವರು ಹೊಂದಿಲ್ಲ.
2020ರ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಎಲೆಕ್ಷನ್ ಮೇಲೆ ಬಹುಜನ ಆಜಾದ್ ಪಕ್ಷ ಕಣ್ಣಿಟ್ಟಿದೆ. ಈ ಪಕ್ಷದಲ್ಲಿರುವವರೆಲ್ಲ ಬಹುತೇಕ ಎಸ್ ಸಿ, ಎಸ್ಟಿ ಹಾಗೂ ಓಬಿಸಿ ವರ್ಗಕ್ಕೆ ಸೇರಿದವರು. ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಅನ್ನೋದು ಇವರ ಅಭಿಪ್ರಾಯ.(ಪಿಟಿಐ)