ಚಿತ್ರ ಸಂಪುಟ: ಗಮನಕ್ಕೆ ಬಾರದ 5 ಸುದ್ದಿಗಳು
ಮಂಗಳವಾರ ಪೂರ್ತಿ ಸುದ್ದಿಯೋ ಸುದ್ದಿ. ನೆಲಮಂಗಲದ ಟೋಲ್ ಗೇಟ್ ನಲ್ಲಿ ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಿಂದ ಶುರುವಾದ ಸುದ್ದಿ ಸದ್ದು, ಮಧ್ಯಾಹ್ನದ ಹೊತ್ತಿಗೆ ಜಿಯೋ ಸಂಸ್ಥೆಯ ದರ ಪಟ್ಟಿಯಲ್ಲಿ ಹರಿದಾಡಿ, ಸಂಜೆ ವೇಳೆಗೆ ಕೊಟ್ಟೂರಿನ ರಥ ಉರುಳುವವರೆಗೆ ಗುಡುಗುತ್ತಲೇ ಇತ್ತು.
ಅಂದಹಾಗೆ, ಮಂಗಳವಾರ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ. ಇದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ, ಕೋಲ್ಕತಾದಲ್ಲಿ ಈ ಬಗ್ಗೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದರಲ್ಲಿ ಪಾಲ್ಗೊಂಡಿದ್ದರು.
ಮಾತೃಭಾಷೆಗಾಗಿಯೇ ಮತ್ತೊಂದು ದಿನಾಚರಣೆ ಇದೆ ಎಂಬುದು ಮತ್ತಷ್ಟು ಪ್ರಚಲಿತಗೊಂಡರೆ ಕನ್ನಡ ರಾಜ್ಯೋತ್ಸವವನ್ನು ಯಾವಾಗೆಂದರೆ ಆವಾಗ ಆಚರಿಸುವ ಕೆಲವಾರು ಸಂಘ ಸಂಸ್ಥೆಗಳಿಗೆ ಇದು ಮತ್ತೊಂದು ವರದಾನವಾಗಬಹುದು.
ಹೀಗೆ, ಮಂಗಳವಾರದ ಸುದ್ದಿ ಪ್ರವಾಹದಲ್ಲಿ ಭಿನ್ನ ಎನಿಸಿದ ಕೆಲವಾರು ಆಯ್ದ ಚಿತ್ರಗಳ ಪಟ್ಟಿಯಲ್ಲಿ ಇಲ್ಲಿ ನೀಡಲಾಗಿದೆ. ಆಸಕ್ತರು ಗಮನಿಸಬಹುದು.
ತಪ್ಸಿ ಮೋಹಕ ನಗೆ
ತಮ್ಮ 'ನಾಮ್ ಶಬಾನಾ' ಚಿತ್ರದ ಪ್ರಚಾರಕ್ಕಾಗಿ ನೋಯ್ಡಾದ ಜೆಪಿ ಆಸ್ಪತ್ರೆಯ ಬಳಿ ನಡೆದ ಸಮಾರಂಭಕ್ಕೆ ಆಗಮಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ತಪ್ಸಿ ಪಣ್ಣು.
ಪರೇಶ್ ನಿರಾಸೆಯ ಹೆಜ್ಜೆ
ಮಂಗಳವಾರ ದೇಶದ ಅತಿ ದೊಡ್ಡ ಸ್ಥಳೀಯ ಸಂಸ್ಥೆಯಾದ ಮುಂಬೈ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಿತು. ಆದರೆ, ಬಾಲಿವುಡ್ ನಟ ಪರೇಶ್ರಾವಲ್ ಅವರ ಹೆಸರು ಮತಪಟ್ಟಿಯಲ್ಲಿರದ ಕಾರಣ ಅವರು, ಮತ ಚಲಾಯಿಸದೇ ನಿರಾಸೆಗೊಂಡು ಮನೆ ಕಡೆ ಹೆಜ್ಜೆ ಹಾಕಿದರು.
ಹ್ಯಾರಿ, ಜೊನಾಥನ್ ಮಾತುಕತೆ
2017 ಮನಿ ಲಂಡನ್ ಎಂಬ ವಿಶೇಷವಾದ ಮ್ಯಾರಥಾನ್ ಓಟಕ್ಕಾಗಿ ಸಿದ್ಧಗೊಳ್ಳುತ್ತಿರುವ ಅಥ್ಲೀಟ್ ಗಳ ತರಬೇತಿ ಶಿಬಿರಕ್ಕೆ ಮಂಗಳವಾರ ಭೇಟಿ ನೀಡಿದ್ದ ಬ್ರಿಟನ್ ನ ರಾಜಕುಮಾರ ಹ್ಯಾರಿ ಹಾಗೂ ಮಾಜಿ ಟ್ರಿಪಲ್ ಜಂಪರ್ ಜೊನಾಥನ್ ಎಡ್ವರ್ಡ್ಸ್ ಪರಸ್ಪರ ಮಾತುಕತೆಯಲ್ಲಿ.
ದೀದಿ ಪುಷ್ಪ ನಮನ
ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಾಹಿದ್ ಬೇಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವಸ್ತು ಸಂಗ್ರಹಾಲಯಕ್ಕೆ ಟ್ರಂಪ್
ವಾಷಿಂಗ್ಟನ್ ನಲ್ಲಿರುವ ಆಫ್ರಿಕನ್ ಅಮೆರಿಕನ್ ಚರಿತ್ರೆ ಹಾಗೂ ಸಂಸ್ಕೃತಿ ನೆನಪಿಸುವ ವಸ್ತುಸಂಗ್ರಹಾಲಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.