ಬಾಲಾಕೋಟ್ ದಾಳಿಯಲ್ಲಿ ಪಾಲ್ಗೊಂಡಿದ್ದ ಐವರು ಪೈಲಟ್ ಗಳಿಗೆ ಗ್ಯಾಲಂಟ್ರಿ ಪದಕ
ನವದೆಹಲಿ, ಆಗಸ್ಟ್ 14: ಪಾಕಿಸ್ತಾನದಲ್ಲಿ ಇದ್ದ ಜೈಷ್- ಇ- ಮೊಹ್ಮದ್ ನ ಉಗ್ರ ನೆಲೆಗಳ ಮೇಲೆ ಬಾಂಬ್ ಹಾಕಿದ್ದ ಭಾರತೀಯ ವಾಯು ಸೇನೆಯ ಮಿರಾಜ್ 2000 ಐದು ಯುದ್ಧ ವಿಮಾನಗಳ ಪೈಲಟ್ ಗಳನ್ನು ವಾಯು ಸೇನೆಯ ಗ್ಯಾಲಂಟ್ರಿ ಪದಕಕ್ಕೆ ಹೆಸರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗುವುದು.
ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ
ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ಮೇಲೆ ಭಾರತೀಯ ವಾಯು ಸೇನೆಯು ಪಾಕಿಸ್ತಾನದ ಖೈಬರ್ ಪಂಖ್ತುವಾ ಪ್ರಾಂತ್ಯದೊಳಗೆ ನುಗ್ಗಿ, ಜೈಷ್-ಇ-ಮೊಹ್ಮದ್ ನ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಈಗ ಗೌರವಕ್ಕೆ ಪಾತ್ರವಾಗಲಿರುವ ಪೈಲಟ್ ಗಳೆಂದರೆ, ವಿಂಗ್ ಕಮ್ಯಾಂಡರ್ ಅಮಿತ್ ರಂಜನ್, ಸ್ಕ್ವಾಡ್ರನ್ ಲೀಡರ್ ಗಳಾದ ರಾಹುಲ್ ಬಸೋಯಾ, ಪಂಕಜ್ ಭುಜದೆ, ಶಶಾಂಕ್ ಸಿಂಗ್ ಹಾಗೂ ಬಿ.ಕೆ.ಎನ್. ರೆಡ್ಡಿ.
ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮುನ್ನ ದಿನಗಟ್ಟಲೆ ಯೋಜನೆ ಮಾಡಲಾಗಿತ್ತು. ವಾಯು ದಾಳಿಯನ್ನು ತೊಂಬತ್ತು ಸೆಕೆಂಡ್ ಗಳಲ್ಲಿ ಹೇಗೆ ಪೂರ್ಣಗೊಳಿಸಲಾಯಿತು ಎಂಬ ಬಗ್ಗೆ ಐವರ ಪೈಕಿ ಒಬ್ಬ ಪೈಲಟ್ ವಿವರಿಸಿದ್ದರು. ಪಾಕಿಸ್ತಾನದೊಳಗೆ ನುಗ್ಗಿ ದಾಳಿ ನಡೆಸುವ ವೇಳೆಯಲ್ಲಿ ಭಾರತೀಯ ವಾಯುಸೇನೆಯು ಗಡಿ ನಿಯಂತ್ರಣ ರೇಖೆಯ ಬಳಿ ಪಹರೆಯನ್ನು ಹೆಚ್ಚಿಸಿತ್ತು.