ನೆರೆ ಪರಿಹಾರ ಹಣದಲ್ಲಿ ಕೊಹ್ಲಿಗೆ 47 ಲಕ್ಷ ಕೊಟ್ಟಿತಾ ಉತ್ತರಾಖಂಡ?
2013ರ ಕೇದರನಾಥ ಭೀಕರ ನೆರೆ ಪರಿಹಾರ ಹಣದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 47.19 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂಬ ಆರೋಪ ಉತ್ತರಾಖಂಡದ ಹರೀಶ್ ರಾವತ್ ಸರಕಾರದ ವಿರುದ್ದ ಕೇಳಿ ಬಂದಿದೆ.
ಬೆಂಗಳೂರು, ಫೆಬ್ರವರಿ 25: 2013ರ ಕೇದರನಾಥ ಭೀಕರ ನೆರೆ ಪರಿಹಾರ ಹಣದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 47.19 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂಬ ಆರೋಪ ಉತ್ತರಾಖಂಡದ ಹರೀಶ್ ರಾವತ್ ಸರಕಾರದ ವಿರುದ್ದ ಕೇಳಿ ಬಂದಿದೆ. ಇದಕ್ಕೆ ಆರ್ಟಿಐ ದಾಖಲೆಯೂ ಸಿಕ್ಕಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಉತ್ತರಾಖಂಡ ಪ್ರವಾಸೋದ್ಯಮದ ರಾಯಭಾರಿಯಾಗಿದ್ದ ವೇಳೆ ವಿರಾಟ್ ಕೊಹ್ಲಿ 60 ಸೆಕೆಂಡುಗಳ ಜಾಹೀರಾತೊಂದರಲ್ಲಿ ಭಾಗವಹಿಸಿದ್ದರು. ಈ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದಕ್ಕೆ 47.19 ಲಕ್ಷವನ್ನು ಜೂನ್ 2015ರಲ್ಲಿ ಕೊಹ್ಲಿಗೆ ಪಾವತಿ ಮಾಡಲಾಗಿತ್ತು. ಈ ಕುರಿತು ಆರ್ಟಿಐ ಮಾಹಿತಿ ಪಡೆದುಕೊಂಡಿರುವ ಬಿಜೆಪಿ ಕಾರ್ಯಕರ್ತ ಅಜೇಂದ್ರ ಅಜಯ್ 2013ರ ಕೇದರನಾಥ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ನಿಧಿಯಲ್ಲೇ ಕೊಹ್ಲಿಯವರಿಗೆ ಈ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[ಪುಣೆ ಟೆಸ್ಟ್: ಕೊಹ್ಲಿ ಪಡೆಗೆ 333 ರನ್ ಗಳ ಹೀನಾಯ ಸೋಲು]
ತಳ್ಳಿ ಹಾಕಿದ ಕೊಹ್ಲಿ
ಆದರೆ ಇದನ್ನು ವಿರಾಟ್ ಕೊಹ್ಲಿಯ ಏಜೆಂಟ್ ಬಂಟಿ ಸಚ್ದೇವ್ ತಳ್ಳಿ ಹಾಕಿದ್ದು, ಆ ರೀತಿಯ ಯಾವುದೇ ಹಣ ವರ್ಗಾವಣೆ ನಡೆದೇ ಇಲ್ಲ ಎಂದಿದ್ದಾರೆ.[ಕೊಹ್ಲಿ ಶೂನ್ಯ ಸುತ್ತಿದರೂ ಅಪರೂಪದ ದಾಖಲೆ!]
ಕೊಟ್ಟರೆ ತಪ್ಪೇನು?
ಆದರೆ ಪಾವತಿಯಾಗಿದ್ದನ್ನು ಉತ್ತರಖಂಡ ಸರಕಾರ ಒಪ್ಪಿಕೊಂಡಿದ್ದೂ ಅಲ್ಲದೆ, ಸಮರ್ಥನೆ ಮಾಡಿಕೊಂಡಿದೆ. ಪ್ರವಾಸೋದ್ಯಮ ರಾಜ್ಯದ ಆರ್ಥಿಕತೆಯ ಪ್ರಮುಖ ಭಾಗವಾಗಿರುವಾಗ ಪ್ರವಾಸಿ ಸ್ಥಳಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಪ್ರಮುಖ ವ್ಯಕ್ತಿಯೊಬ್ಬರಿಗೆ ಹಣ ನೀಡಿದರೆ ಏನು ತಪ್ಪು ಎಂದು ಪ್ರಶ್ನಿಸಿದೆ. ಮಾತ್ರವಲ್ಲ ಎಲ್ಲವೂ ಕಾನೂನಾತ್ಮಕವಾಗಿ ನಡೆದಿದೆ. ಆರೋಪಗಳು ಆಧಾರ ರಹಿತ ಎಂದು ಹೇಳಿದೆ.
ಪರಿಹಾರ ಹಣ ಯಾಕೆ?
ಆದರೆ ಇದನ್ನು ಮಾಹಿತಿ ಹಕ್ಕು ಕಾರ್ಯಕರ್ತ ಅಜೇಂದ್ರ ಅಜಯ್ ವಿರೋಧಿಸುತ್ತಾರೆ. "ಆರ್ಟಿಐ ಮಾಹಿತಿಗಳ ಪ್ರಕಾರ ರುದ್ರಪ್ರಯಾಗ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಿ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಪಡೆದ ನಂತರ ಈ ಹಣವನ್ನು ಕೊಹ್ಲಿಗೆ ಪಾವತಿ ಮಾಡಿದೆ. ವಿಕೋಪ ನಿರ್ವಹಣಾ ಪ್ರಾಧಿಕಾರ ಯಾಕೆ ಬ್ರಾಂಡ್ ಅಂಬಾಸಿಡರ್ ಗೆ ಹಣ ನೀಡಬೇಕು? ಎಂದು ಪ್ರಶ್ನಿಸಿದ್ದಾರೆ.
ಮಾಹಿತಿ ಏನು ಹೇಳುತ್ತದೆ
ಆರ್ಟಿಐನಲ್ಲಿರುವ ಮಾಹಿತಿಗಳ ಪ್ರಕಾರ ಜನಪ್ರಿಯ ಹಾಡುಗಾರ ಕೈಲಾಶ್ ಖೇರ್ ಸಂಸ್ಥೆಯ ಮೂಲಕ ಕೊಹ್ಲಿಗೆ ಹಣ ಪಾವತಿ ಮಾಡಲಾಗಿದೆ. 2015ರಲ್ಲಿ ಕೇದರನಾಥ ದೇವಸ್ಥಾನವನ್ನು ಆಧಾರವಾಗಿಟ್ಟುಕೊಂಡು ಟಿವಿ ಧಾರವಾಹಿ ಮಾಡಲು ಕೈಲಾಶ್ ಖೇರ್ ಸಂಸ್ಥೆಗೆ 3.66 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲೇ ಬಿಜೆಪಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ರುದ್ರಪ್ರಯಾಗ ಜಿಲ್ಲಾಡಳಿತದ ವಿಕೋಪ ಪರಿಹಾರ ನಿಧಿಯಿಂದ ಹಣ ನೀಡಿದ್ದು ಸರಿಯಲ್ಲ ಎಂದಿತ್ತು.
ಚುನಾವಣೆ ಮುಗಿದ ನಂತರ ಆರೋಪ
ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರಕ್ಕಾಗಿ ಮತ್ತು ಪ್ರವಾಹದಿಂದ ನಾಶವಾದ ಸ್ಥಳಗಳ ಪುನರ್ ನಿರ್ಮಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸರಕಾರ ದುರುಪಯೋಗ ಮಾಡಿದೆ ಎಂಬ ಆರೋಪ ಉತ್ತರಾಖಂಡ ವಿಧಾನಸಭೆ ಚುನಾವಣೆ ಮುಗಿದ ನಂತರ ಕೇಳಿ ಬಂದಿದೆ. ಫೆಬ್ರವರಿ 15ರಂದು ಉತ್ತರಾಖಂಡದಲ್ಲಿ ಚುನಾವಣೆ ನಡೆದಿತ್ತು.