ಭಾರತದಲ್ಲಿ ರೈಲ್ವೆ ಸ್ಟಾಪ್ ಚೈನ್ ಎಳೆದಿದ್ದಕ್ಕೆ 45,000 ಮಂದಿ ಬಂಧನ!
ನವದೆಹಲಿ, ಜನವರಿ.08: ಭಾರತೀಯರ ಪಾಲಿಗೆ ರೈಲ್ವೆ ಸಂಚಾರ ಚೀಪ್ ಆಂಡ್ ಬೆಸ್ಟ್ ಸಾರಿಗೆ ವ್ಯವಸ್ಥೆ ಆಗಿದೆ. ಸುಗಮ ಸಂಚಾರಕ್ಕೆ ಹೇಳಿ ಮಾಡಿಸಿದಂತಿರುವ ರೈಲು ಪ್ರಯಾಣ ಮಾಡುವಾಗ ಪ್ರಯಾಣಿಕರು ಸ್ವಲ್ಪ ಎಚ್ಚರಿಕೆ ವಹಿಸಬೇಕು.
ತುರ್ತು ಸಂದರ್ಭದಲ್ಲಿ ರೈಲ್ವೆ ನಿಲುಗಡೆಗೆ ಸ್ಟಾಪ್ ಚೈನ್ ಅಳವಡಿಕೆ ಮಾಡಲಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಇಷ್ಟ ಬಂದಾಗಲೆಲ್ಲ ಪ್ರಯಾಣಿಕರು ರೈಲ್ವೆ ತುರ್ತು ನಿಲುಗಡೆಯ ಸರಪಳಿಯನ್ನು ಎಳೆಯುವಂತಿಲ್ಲ. ಹಾಗೆ ಮಾಡಿದ್ದಕ್ಕಾಗಿ 2019ರಲ್ಲಿ ಬರೋಬ್ಬರಿ 45 ಸಾವಿರ ಮಂದಿಯನ್ನು ಬಂಧಿಸಲಾಗಿದೆ.
ಭಾರತೀಯ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿಗಾಗಿ 139ನ್ನು ಒತ್ತಿ
ಅಚ್ಚರಿ ಎನಿಸಿದರೂ ಇದು ಸತ್ಯ. 2019ರಲ್ಲಿ ಸಂಭವಿಸಿದ ಪ್ರಕರಣಗಳ ಬಗ್ಗೆ ರೈಲ್ವೆ ಇಲಾಖೆಯು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ 55,373 ರೈಲ್ವೆ ಸ್ಟಾಪ್ ಚೈನ್ ಎಳೆದ ಪ್ರಕರಣಗಳು ಸಂಭವಿಸಿದ್ದು, ಈ ಸಂಬಂಧ 45,784 ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಡಿಜಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ರೈಲ್ವೆ ಚೈನ್ ಎಳೆಯುವುದಕ್ಕೂ ಮುನ್ನ ಎಚ್ಚರ ಎಚ್ಚರ!
2019ರಲ್ಲಿ ನಡೆದ ಪ್ರಕರಣಗಳ ಬಗ್ಗೆ ರೈಲ್ವೆ ರಕ್ಷಣಾ ಪಡೆಯ ಡಿಜಿ ಮಾಹಿತಿ ನೀಡಿದ್ದಾರೆ. ಒಂದೇ ವರ್ಷದಲ್ಲಿ 55,373 ಬಾರಿ ರೈಲಿನ ತುರ್ತು ನಿಲುಗಡೆಯ ಸರಪಳಿಯನ್ನು ಎಳೆದ ಪ್ರಕರಣಗಳು ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 45 ಸಾವಿರ ಮಂದಿಯನ್ನು ಬಂಧಿಸಲಾಗಿದೆ. ಅಂತಿಮವಾಗಿ 43,951 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಉಳಿದಂತೆ ಕೆಲವಡೆ ರೈಲ್ವೆ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 400 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಿಕೆಟ್ ತೆಗೆದುಕೊಳ್ಳದ್ದಕ್ಕೆ 215 ಕೋಟಿ ರೂಪಾಯಿ ದಂಡ!
ಟಿಕೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ ಅಂತಾ ಬಾರಿ ಬಾರಿ ಹೇಳಿದರೂ ಜನರು ಪಾಠ ಕಲಿಯುವುದಿಲ್ಲ. ಇದಕ್ಕೆ ಕಳೆದ ಒಂದು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳೇ ಸಾಕ್ಷಿಯಾಗುತ್ತದೆ. ಏಕೆಂದರೆ ಕಳೆದ ಒಂದು ವರ್ಷದಲ್ಲಿ ಟಿಕೆಟ್ ಇಲ್ಲದ ಪ್ರಯಾಣಕ್ಕಾಗಿ ಬರೋಬ್ಬರಿ 54 ಲಕ್ಷ 15 ಸಾವಿರ 739 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 215 ಕೋಟಿ 65 ಲಕ್ಷ 53 ಸಾವಿರದ 964 ರುಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ.
ಟ್ವಿಟರ್ ನಲ್ಲಿ 31 ಸಾವಿರ ದೂರು ದಾಖಲು
ರಕ್ಷಣೆಗೆ ಸಂಬಂಧಿಸಿದಂತೆ 365 ದಿನಗಳಲ್ಲಿ ಭಾರತೀಯ ರೈಲ್ವೆ ರಕ್ಷಣಾ ಪಡೆಯ ಸಹಾಯವಾಣಿ ಸಂಖ್ಯೆ 182ಕ್ಕೆ ಸಾವಿರಾರು ಪ್ರಯಾಣಿಕರು ಕರೆ ಮಾಡಿದ್ದರು. ಈ ಪೈಕಿ 60,453 ದೂರವಾಣಿ ಕರೆಗಳನ್ನು ಸ್ವೀಕರಿಸಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಟ್ವಿಟರ್ ನಲ್ಲಿ 31,851 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಡಿಜಿ ಅರುಣ್ ಕುಮಾರ್ ತಿಳಿಸಿದರು.
446 ಮಕ್ಕಳ ರಕ್ಷಣೆ, 68 ಕಳ್ಳಸಾಗಾಣಿಕೆದಾರರ ಬಂಧನ
ಇನ್ನು, ರೈಲ್ವೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಕಳೆದ ವರ್ಷ ರೈಲ್ವೆ ಭದ್ರತಾ ಪಡೆಯು 446 ಮಕ್ಕಳನ್ನು ರಕ್ಷಣೆ ಮಾಡಿದೆ. 68 ಮಂದಿ ಮಕ್ಕಳ ಸಾಗಾಣಿಕೆದಾರರನ್ನು ಬಂಧಿಸಲಾಗಿದೆ. ಇದರ ಜೊತೆಗೆ ಮನೆ ಬಿಟ್ಟು ಬಂದ, ಪೋಷಕರಿಂದ ತಪ್ಪಿಸಿಕೊಂಡ ಹಾಗೂ ಮಾದಕ ದ್ರವ್ಯಗಳ ದಾಸರಾಗಿ ಹೆತ್ತವರಿಂದ ದೂರವಾದ 16,011 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ರೈಲ್ವೆಯಲ್ಲೇ ಬಿಟ್ಟು ಹೋಗಿದ್ದ ಸರಕುಗಳು ಮನೆ ಬಾಗಿಲಿಗೆ
ರೈಲ್ವೆಯಲ್ಲಿ ಸರಕು ಸಾಗಾಣಿಕೆ ಮೇಲೂ ಹೆಚ್ಚಿನ ಲಕ್ಷ್ಯ ವಹಿಸಲಾಗಿರುತ್ತದೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ರೈಲ್ವೆ ಅಥವಾ ನಿಲ್ದಾಣದಲ್ಲೇ ಕಳೆದುಕೊಂಡ ಲಗೇಜ್ ಗಳನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಲಾಗಿದೆ. ಕಳೆದ ವರ್ಷ 13,204 ಇಂಥ ಪ್ರಕರಣಗಳು ನಡೆದಿದ್ದು, 48 ಕೋಟಿ 58 ಲಕ್ಷ 18 ಸಾವಿರ 444 ರುಪಾಯಿ ಮೌಲ್ಯದ ಲಗೇಜ್ ನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ ಎಂದು ರೈಲ್ವೆ ಭದ್ರತಾ ಪಡೆಯ ಡಿಜಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.