ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯ: ಒಟ್ಟು ಸಂಗ್ರಹವಾಗಿದ್ದು ಎಷ್ಟು?
ಬೆಂಗಳೂರು, ಮಾರ್ಚ್ 1: ಹಲವು ಚರ್ಚೆ, ವಿವಾದಗಳಿಗೆ ಕಾರಣವಾಗಿದ್ದ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧಿಸಿದಂತೆ ನಡೆಯುತ್ತಿದ್ದ ನಿಧಿ ಅಭಿಯಾನ ಮುಕ್ತಾಯಗೊಂಡಿದೆ.
"ಕಳೆದ ಮಕರ ಸಂಕ್ರಾಂತಿ ದಿನದಂದು ಪ್ರಾರಂಭವಾದ 45 ದಿನಗಳ ಸುದೀರ್ಘ ರಾಷ್ಟ್ರವ್ಯಾಪಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯಗೊಂಡಿತು" ಎಂದು ವಿಶ್ವಹಿಂದೂ ಪರಿಷತ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಮರೆಯಲಾಗದ, ಬೆರಗುಗೊಳಿಸುವ ಮತ್ತು ಹೃದಯವನ್ನು ಬೆಚ್ಚಗಾಗಿಸುವ ನೆನಪುಗಳನ್ನು ಈ ಅಭಿಯಾನ ದಾಖಲಿಸಿದೆ. ವಿಶ್ವದ ಈ ದೊಡ್ಡ ಅಭಿಯಾನದ ಮೂಲಕ 1 ಮಿಲಿಯನ್ ತಂಡಗಳ ಭಾಗವಾಗಿರುವ 4 ಮಿಲಿಯನ್ ಸಮರ್ಪಿತ ಕಾರ್ಯಕರ್ತರು ಮನೆ ಮನೆಗೆ ತೆರಳಿದ್ದಾರೆ".
"ಶ್ರೀರಾಮನಿಗೆ ಮೀಸಲಾದ ಹಣವನ್ನು ಸ್ವೀಕರಿಸಲು ರಾಜ್ಯಗಳು, ನಗರಗಳು, ಪಟ್ಟಣಗಳು, ಜಿಲ್ಲೆಗಳು, ಹೋಬಳಿ ಮತ್ತು ಹಳ್ಳಿಗಳುನ್ನು ಮುಟ್ಟಿದ್ದಾರೆ. ಶ್ರೀರಾಮ ದೇವರ ಬಗ್ಗೆ ಕೊಡುಗೆದಾರರು ತೋರಿಸಿದ ಭಕ್ತಿ, ನಂಬಿಕೆ ಮತ್ತು ಸಮರ್ಪಣೆ ಉನ್ನತಿಗೇರಿಸುವ ಮತ್ತು ಆತ್ಮವನ್ನು ಕಲಕುವಂತಿತ್ತು" ಎಂದು ವಿಎಚ್ಪಿ ರಾಷ್ಟ್ರೀಯ ಕನ್ವೀನರ್ ವಕೀಲ ಅಲೋಕ್ ಕುಮಾರ್ ಹೇಳಿದ್ದಾರೆ.
ರಾಮಜನ್ಮಭೂಮಿ
ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯಗೊಂಡ ಒಂದು ದಿನದ ಮುನ್ನ ಅಂದರೆ, ಫೆಬ್ರವರಿ 26ರವರೆಗೆ ಎಷ್ಟು ನಿಧಿ ಸಂಗ್ರಹವಾಗಿತ್ತು ಎನ್ನುವುದರ ಬಗ್ಗೆ ಉಡುಪಿ ಪೇಜಾವರ ಮಠದ ಮತ್ತು ರಾಮಜನ್ಮಭೂಮಿ ಟ್ರಸ್ಟಿನ ಸದಸ್ಯರೂ ಆಗಿರುವ ವಿಶ್ವಪ್ರಸನ್ನ ತೀರ್ಥರು ಮಾಹಿತಿಯನ್ನು ಹೊರಹಾಕಿದ್ದರು. ದೇವಾಲಯ ನಿರ್ಮಾಣ ಮತ್ತು ಇತರ ಕೆಲಸಕ್ಕೆ 1,100 ಕೋಟಿ ರೂಪಾಯಿ ಖರ್ಚಾಗಬಹುದು ಎನ್ನುವ ಅಂದಾಜು ಹಾಕಲಾಗಿದೆ.
ಪೇಜಾವರ ಶ್ರೀಗಳ ಪ್ರಕಾರ ಇದುವರೆಗೆ ಸುಮಾರು 2,100 ಕೋಟಿ ನಿಧಿ ಸಂಗ್ರಹ
ಪೇಜಾವರ ಶ್ರೀಗಳ ಪ್ರಕಾರ ಇದುವರೆಗೆ ಸುಮಾರು 2,100 ಕೋಟಿ ನಿಧಿ ಸಂಗ್ರಹವಾಗಿದೆ ಮತ್ತು ಕರ್ನಾಟಕದಿಂದಲೇ ಸುಮಾರು 150 ಕೋಟಿ ಸಂಗ್ರಹವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ. ನಿಧಿ ಸಮರ್ಪಣಾ ಅಭಿಯಾನ ಈಗ ಸಂಪೂರ್ಣ ಮುಕ್ತಾಯಗೊಂಡಿರುವುದರಿಂದ, ಎಷ್ಟು ನಿಧಿ ಒಟ್ಟಾರೆಯಾಗಿ ಸಂಗ್ರಹವಾಗಿದೆ ಎನ್ನುವ ಮಾಹಿತಿಯನ್ನು ವಿಎಚ್ಪಿ ಇನ್ನಷ್ಟು ನೀಡಬೇಕಷ್ಟೇ..
ಸಂತೋಷ ಮತ್ತು ನಮ್ರತೆಯ ಕಣ್ಣೀರು
"ಈ ಅಭಿಯಾನದ ಸಮಯದಲ್ಲಿ, ಕಾರ್ಯಕರ್ತರು ಅನೇಕ ಭಾವನಾತ್ಮಕ ಕ್ಷಣಗಳು ಮತ್ತು ಸನ್ನಿವೇಶಗಳೊಂದಿಗೆ ಸಂಧಿಸುತ್ತಿದ್ದರು ಮತ್ತು ಅನೇಕ ಜನರು ತಮ್ಮ ಸಾಮರ್ಥ್ಯವನ್ನು ಮೀರಿ ಕೊಡುಗೆ ನೀಡಿದ್ದಾರೆ. ಅನೇಕ ಜನರು, ಸಂತೋಷ ಮತ್ತು ನಮ್ರತೆಯ ಕಣ್ಣೀರಿನೊಂದಿಗೆ, ತಮ್ಮ ಅರ್ಪಣೆಗಳನ್ನು ಶ್ರೀರಾಮರಿಗೆ ಅರ್ಪಿಸಿದರು" ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಶ್ರೀರಾಮನ ರಾಯಭಾರಿ
"ಅನೇಕ ಸ್ಥಳಗಳಲ್ಲಿ, ನಿಧಿ ಸಮರ್ಪಣಾ ತಂಡಗಳನ್ನು ಸ್ವಾಗತಿಸಲಾಯಿತು ಮತ್ತು ಶ್ರೀರಾಮನ ರಾಯಭಾರಿಯೆಂದೇ ನೋಡಲಾಯಿತು ಮತ್ತು ಅದಕ್ಕೆ ಅನುಗುಣವಾಗಿ ಗೌರವ ಮತ್ತು ಆರೈಕೆ ಮಾಡಲಾಯಿತು"ಎಂದು ವಿಎಚ್ಪಿಯ ಅಲೋಕ್ ಕುಮಾರ್ ಹೇಳಿದ್ದಾರೆ.