43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ
ನವದೆಹಲಿ, ಮೇ 28: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸದ ನಡುವೆ ವೈದ್ಯಕೀಯ ಉಪಕರಣ, ಪಿಪಿಇ ಕಿಟ್, ಆಮ್ಲಜನಕ ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ಸರಕು ಸೇವಾ ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ 43ನೇ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ.
ಏಳು ತಿಂಗಳ ನಂತರ ಮೊದಲ ಬಾರಿಗೆ 43ನೇ ಸರಕು ಸೇವಾ ತೆರಿಗೆ ಮಂಡಳಿ ಸಭೆ ನಡೆಸಲಾಯಿತು. ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಯಿತು.
GST Meet: 11,000 ಕೋಟಿ ಹಣ ಬಿಡುಗಡೆಗೆ ಕರ್ನಾಟಕದ ಮನವಿ
ಕೊರೊನಾವೈರಸ್ ಸಂದರ್ಭದಲ್ಲಿ ನೀಡಿರುವ ವಿನಾಯಿತಿ ಮತ್ತು ರಿಯಾಯತಿ ಮುಂದುವರಿಸಬೇಕು. ಈಗಾಗಲೇ ನೀಡಿರುವ ವಿನಾಯತಿಗಳ ಗಡುವು ವಿಸ್ತರಣೆ ಜೊತೆಗೆ ವ್ಯಾಪ್ತಿಯನ್ನು ಹೆಚ್ಚಿಸಬೇಕು. ಈ ಮೊದಲೇ ಶಿಫಾರಸ್ಸು ಮಾಡಿರುವ ಉಪಕರಣಗಳ ಜೊತೆಗೆ ಆಮ್ಲಜನಕ ಉಪಕರಣ, ಪಿಪಿಇ ಕಿಟ್ ಮತ್ತು ಬ್ಲ್ಯಾಕ್ ಫಂಗಸ್ ಔಷಧಿಗಳನ್ನು ರಿಯಾಯತಿ ದರಕ್ಕೊಳಪಡಿಸಬೇಕು ಹಾಗೂ ಕೊವಿಡ್-19 ಸಂಬಂಧಿತ ಸರಕು-ಸೇವೆಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂಬುದಾಗಿ ಮಂಡಳಿ ಸದಸ್ಯರು ಮನವಿ ಸಲ್ಲಿಸಿದರು.
43ನೇ ಜಿಎಸ್ ಟಿ ಸಭೆಯ ನಿರ್ಧಾರಗಳು:
* ಕೊರೊನಾವೈರಸ್ ಸಂಬಂಧಿತ ಸರಕುಗಳ ಆಮದಿನ ಮೇಲೆ ವಿಧಿಸುತ್ತಿದ್ದ ಐಜಿಎಸ್ ಟಿ ತೆರಿಗೆ ವಿನಾಯಿತಿ ಗಡುವನ್ನು ಆಗಸ್ಟ್ 30ರವರೆಗೂ ವಿಸ್ತರಿಸಲಾಗುವುದು.
* ಮಾರ್ಚ್ 2021 ಮತ್ತು ಏಪ್ರಿಲ್ 2021 ತಿಂಗಳುಗಳ ರಿಟರ್ನ್ಸ್ ಸಲ್ಲಿಸುವಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ನೀಡಿರುವ ರಿಯಾಯತಿಗಳಾದ ಕಡಿಮೆ ದರದ ಬಡ್ಡಿ, ಲೇಟ್ ಫೀ ಮನ್ನಾ ಮಾಡಿರುವುದು, ರಿಟರ್ನ್ ಸಲ್ಲಿಸುವಿಕೆ ಗಡುವಿನ ದಿನಾಂಕವನ್ನು ವಿಸ್ತರಿಸುವುದು ಮುಂತಾದವುಗಳನ್ನು ಮೇ 2021ರ ತಿಂಗಳಿನ ರಿಟರ್ನ್ಸ್ ಸಲ್ಲಿಸುವಿಕೆವರೆಗೂ ವಿಸ್ತರಿಸಲಾಗಿದೆ.
* 2021ರ ಮೇ ವೇಳೆಗೆ 5 ಕೋಟಿಗಿಂತ ಹೆಚ್ಚು ವಹಿವಾಟು ಹೊಂದಿರುವ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ಜುಲೈ 5ರವರೆಗೂ ಹಾಗೂ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವವರಿಗೆ ಜುಲೈ 15ರವರೆಗೂ ವಿಸ್ತರಿಸಲಾಗಿದೆ.
ಕೊವಿಡ್-19 ಸರಕುಗಳ ಮೇಲಿನ ತೆರಿಗೆ ಬಗ್ಗೆ ಮನವಿ:
ಕೊರೊನಾವೈರಸ್ ಸಂಬಂಧಿಕ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸುವಂತೆ ಸಚಿವರು ಮಾಡಿರುವ ಮನವಿಯ ಪ್ರಮುಖ ಅಂಶಗಳು ಇಲ್ಲಿವೆ.
* ಮೆಡಿಕಲ್ ಗ್ರೇಡ್ ಆಕ್ಸಿಜನ್ - ಆಗಸ್ಟ್ 31ರವರೆಗೂ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಕಡಿತಗೊಳಿಸಬೇಕು
* ಆಕ್ಸಿಜನ್ ಕಾನ್ಸಟ್ರೇಟರ್/ಜನರೇಟರ್ - ಆಗಸ್ಟ್ 31ರವರೆಗೂ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಕಡಿತಗೊಳಿಸಬೇಕು
* ವೈಯಕ್ತಿಕ ಆಮದುಗಳು ಸೇರಿದಂತೆ ಪಲ್ಸ್ ಆಕ್ಸಿಮೀಟರ್ - ಆಗಸ್ಟ್ 31ರವರೆಗೂ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಕಡಿತಗೊಳಿಸಬೇಕು
* ಕೊವಿಡ್-19 ಟೆಸ್ಟಿಂಗ್ ಕಿಟ್ - ಆಗಸ್ಟ್ 31ರವರೆಗೂ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಕಡಿತಗೊಳಿಸಬೇಕು
* ತೆರಿಗೆ ದರಗಳನ್ನು ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಂತ್ರಿಗಳ ಸಮಿತಿಯನ್ನು ರಚಿಸಲಾಗಿದ್ದು, ಅವರ ಶಿಫಾರಸ್ಸಿನ ಮೇಲೆ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು.
* 2021-22ನೇ ಸಾಲಿನ ಜಿಎಸ್ ಟಿ ಪರಿಹಾರ ಹಣವನ್ನು ಕೇಂದ್ರ ಸರ್ಕಾರವೇ ಸಾಲ ಪಡೆದು ಕರ್ನಾಟಕಕ್ಕೆ ನೀಡಬೇಕು.