ಕೊರೊನಾ ವೈರಸ್ ನಿಂದ 406 ಮಂದಿ ಭಾರತೀಯರು ಬಚಾವ್
ನವದೆಹಲಿ, ಫೆಬ್ರವರಿ.16: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿದೆ. ಇದರ ಮಧ್ಯೆ ಚೀನಾದಿಂದಲೇ ಸ್ವದೇಶಕ್ಕೆ ಆಗಮಿಸಿದ 406 ಮಂದಿ ಭಾರತೀಯರು ಮಾರಕ ಸೋಂಕಿನಿಂದ ಬಚಾವ್ ಆಗಿದ್ದಾರೆ.
ನವದೆಹಲಿಯ ಹೊರಭಾಗದ ಚೌಲ್ವಾ ಪ್ರದೇಶದಲ್ಲಿ ಇಂಡೋ-ಟಿಬೆಟ್ ಗಡಿ ಭದ್ರತಾ ಸಿಬ್ಬಂದಿಯ ದಿಗ್ಬಂಧನದಲ್ಲಿ ಇರಿಸಿದ್ದ ಭಾರತೀಯರ ರಕ್ತ ಪರೀಕ್ಷೆ ವೇಳೆ 406 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
Coronavirus: ಹಡಗಿನಲ್ಲಿರುವ ಪ್ರಜೆಗಳ ಕರೆಸಿಕೊಳ್ಳಲು ವಿಶೇಷ ವಿಮಾನ
ಕಳೆದ ಫೆಬ್ರವರಿ ಮೊದಲ ವಾರ ಚೀನಾದಲ್ಲಿದ್ದ ಭಾರತೀಯರನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ ಕರೆ ತರಲಾಗಿತ್ತು. ನಂತರ ನುರಿತ ವೈದ್ಯರ ತಂಡ ಚೌಲ್ವಾದಲ್ಲಿ ಇರುವ ಭಾರತೀಯರ ರಕ್ತ ಪರೀಕ್ಷೆಯನ್ನು ಮಾಡಲಾಯಿತು.
ದಿಗ್ಬಂಧನದಿಂದ ಫೆಬ್ರವರಿ.17ರಂದು ಬಿಡುಗಡೆ:
ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ ಸೂಚನೆಗಳ ಮೇರೆಗೆ ದಿಗ್ಬಂಧನದಲ್ಲಿ ಇರಿಸಿರುವ 406 ಮಂದಿ ಭಾರತೀಯರನ್ನು ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅನಂತರದಲ್ಲಿ ಫೆಬ್ರವರಿ.17ರೇ ಸೋಮವಾರ ವೈದ್ಯಕೀಯ ಪ್ರಕ್ರಿಯೆಗಳನ್ನು ಮುಗಿಸಿ ಎಲ್ಲರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.