ಸಕ್ಕರೆ ಕಾಯಿಲೆ + 40ಕ್ಕಿಂತ ಹೆಚ್ಚು ವಯಸ್ಸು = ಕೊರೊನಾವೈರಸ್ ಅಪಾಯ 7 ಪಟ್ಟು!
ನವದೆಹಲಿ, ಸಪ್ಟೆಂಬರ್ 25: ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಇತ್ತೀಚಿಗೆ ಮಕ್ಕಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಕೊವಿಡ್-19 ಸೋಂಕು ತಗುಲಿದ ಹಾಗೂ ಸಕ್ಕರೆ ಕಾಯಿಲೆಯನ್ನು ಹೊಂದಿರುವ 40 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಪ್ರಮಾಣ ಮಕ್ಕಳಿಗಿಂತ ಏಳು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಕೊರೊನಾವೈರಸ್ ಸೋಂಕು ತಗುಲಿದ ಒಂದು ಮಗು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರೆ, 40 ವರ್ಷ ಮೇಲ್ಪಟ್ಟ ಸಕ್ಕರೆ ಕಾಯಿಲೆಯಿರುವ ಏಳು ಮಂದಿ ವಯಸ್ಕರು ಅದೇ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ 84 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ವಿತರಣೆ
ಸಕ್ಕರೆ ಕಾಯಿಲೆ ಹೊಂದಿರುವ ವ್ಯಕ್ತಿಗಳು ಕೊರೊನಾವೈರಸ್ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿದ್ದಾರೆ, ವಿಶೇಷವಾಗಿ 40 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಎಂಡೋಕ್ರೈನ್ ಸೊಸೈಟಿಯ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ವರದಿಯಲ್ಲಿ ಪ್ರಕಟಿಸಲಾಗಿದೆ.
ಕೊವಿಡ್-19 ಸೋಂಕಿತ ಮಕ್ಕಳಲ್ಲಿ ಉಸಿರಾಟ ಸಮಸ್ಯೆ
ಕೊರೊನಾವೈರಸ್ ಸೋಂಕು ತಗುಲಿದ ಮಕ್ಕಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುವುದು ಬಲು ಅಪರೂಪವಾಗಿರುತ್ತದೆ. ಬಹುಪಾಲು ಮಕ್ಕಳಿಗೆ ಕೊವಿಡ್-19 ಸೋಂಕಿನ ಲಕ್ಷಣಗಳೇ ಗೋಚರಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ವಯಸ್ಕರು ತೀವ್ರತರವಾದ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿರಿಯ ವಯಸ್ಸಿನವರು ಹಾಗೂ ಮದುಮೇಹದ ಕಾಯಿಲೆ ಹೊಂದಿರುವವರು ತೀವ್ರ ಉಸಿರಾಟದ ತೊಂದರೆ ಮತ್ತು ಸಾವಿನ ಅಪಾಯವನ್ನೂ ಸಹ ಹೊಂದಿರುತ್ತಾರೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಮದುಮೇಹ ಹೊಂದಿರುವ ವಯಸ್ಕರಿಗೆ ಹೆಚ್ಚು ಅಪಾಯ
"ನಮ್ಮ ಅಧ್ಯಯನದ ಪ್ರಕಾರ, ಕೊವಿಡ್-19 ಸೋಂಕು ತಗುಲಿದ ಹಾಗೂ ಸಕ್ಕರೆ ಕಾಯಿಲೆಯನ್ನು ಹೊಂದಿರುವ 40 ವರ್ಷ ಮೇಲ್ಪಟ್ಟವರು ಸೋಂಕಿತ ಮಕ್ಕಳು ಹಾಗೂ ಯುವಕರಿಗಿಂತ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ. ಮಕ್ಕಳು ಮತ್ತು ಯುವಕರು ರೋಗದ ಸೌಮ್ಯ ಲಕ್ಷಣಗಳು ಮತ್ತು ಉತ್ತಮ ಮುನ್ಸೂಚನೆಗಳನ್ನು ಅನುಭವಿಸುತ್ತಾರೆ," ಎಂದು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಡಾ ಕಾರ್ಲಾ ಡಿಮೆಟರ್ಕೊ-ಬರ್ಗ್ಗ್ರೆನ್ ಹೇಳಿದ್ದಾರೆ.
ಯಾವ ವಯಸ್ಸಿನ ಸೋಂಕಿತರಿಗೆ ಹೇಗೆ ಚಿಕಿತ್ಸೆ?
"ಮಧುಮೇಹ ಮತ್ತು ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವಯಸ್ಸಿನ ಆಧಾರದ ಮೇಲೆ ಯಾವ ರೀತಿ ಚಿಕಿತ್ಸೆಗಳನ್ನು ನೀಡಬೇಕು, ರೋಗನಿರೋಧಕ ಮತ್ತು ವೈದ್ಯಕೀಯ ನಿರ್ವಹಣೆ ಅಗತ್ಯದ ಬಗ್ಗೆ ಈ ಸಂಶೋಧನೆಯು ಸೂಚಿಸುತ್ತವೆ. ಕೊರೊನಾವೈರಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮಾಸ್ಕ್ ಧರಿಸುವುದು ಮತ್ತು ಲಸಿಕೆ ಹಾಕುವುದು ಸೇರಿದಂತೆ ಸಾರ್ವಜನಿಕ ಆರೋಗ್ಯ ಶಿಫಾರಸುಗಳನ್ನು ಎಲ್ಲರೂ ಅನುಸರಿಸಬೇಕು, "ಎಂದು ಅವರು ಹೇಳಿದ್ದಾರೆ.
ಅಧ್ಯಯನದ ಬಗ್ಗೆ ಮಾಹಿತಿ
ಸಕ್ಕರೆ ಕಾಯಿಲೆ ಹೊಂದಿರುವವರಿಗೆ ಕೊರೊನಾವೈರಸ್ ಸೋಂಕಿನಿಂದ ಆಗುವ ಅಪಾಯದ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಸಂಶೋಧಕರು, "ಯುಎಸ್ 56 ಡಯಾಬಿಟಿಸ್ ಕ್ಲಿನಿಕ್ ನಿಂದ ಕೊರೊನಾವೈರಸ್ ಸೋಂಕಿನ ಜೊತೆಗೆ ಟೈಪ್-1 ಡಯಾಬಿಟಿಸ್ ಹೊಂದಿರುವ ರೋಗಿಗಳ ದತ್ತಾಂಶವನ್ನು ಸಂಗ್ರಹಿಸಲಾಗಿತ್ತು. ಶೇ,.54ರಷ್ಟು ಮಂದಿ 18 ವರ್ಷ ಅಥವಾ ಯುವಕರೇ ಆಗಿದ್ದರು, ಶೇ.32ರಷ್ಟು ಮಂದಿ 19 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಶೇ.14ರಷ್ಟು ಮಂದಿ 40 ವರ್ಷ ಮೇಲ್ಪಟ್ಟವರಾಗಿದ್ದರು.
40 ವರ್ಷ ಮೇಲ್ಪಟ್ಟವರಿಗೆ ಏಳು ಪಟ್ಟು ಅಪಾಯ
ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಯವಕರು ಮತ್ತು ವಯಸ್ಕರಿಗಿಂತ 40 ವರ್ಷ ಮೇಲ್ಪಟ್ಟವರ ಸಂಖ್ಯೆ ಏಳು ಪಟ್ಟು ಹೆಚ್ಚಾಗಿತ್ತು ಎಂದು ಅಧ್ಯಯನದಿಂದ ಗೊತ್ತಾಗಿದೆ. 18 ವರ್ಷದೊಳಗಿನವರಲ್ಲಿ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿಲ್ಲ, 40 ವರ್ಷ ಮೇಲ್ಪಟ್ಟವರಲ್ಲಿ ಮೂವರು ಮೃತಪಟ್ಟಿದ್ದರೆ, 19 ರಿಂದ 39 ವರ್ಷದೊಳಗಿನವರಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಈ ಗುಂಪು ಯುವ ಗುಂಪುಗಳಿಗೆ ಹೋಲಿಸಿದರೆ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಅಥವಾ ಹೃದಯರಕ್ತನಾಳದ ಕಾಯಿಲೆ ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗಿ ಕಂಡು ಬಂದಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ ಸಂಖ್ಯೆ
ಕೊರೊನಾವೈರಸ್ ಸೋಂಕಿನ ಪರೀಕ್ಷೆ ಪ್ರಮಾಣ ಕಡಿಮೆಯಾಗಿದ್ದರೂ ಹೊಸ ಪ್ರಕರಣಗಳ ಸಂಖ್ಯೆ ಯಥಾವತ್ತಾಗಿ ಏರಿಕೆಯಾಗುತ್ತಿದೆ. ಕಳೆದ ಒಂದು ದಿನದಲ್ಲಿ 29,616 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಇದೇ ಅವಧಿಯಲ್ಲಿ 290 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 28,046 ಸೋಂಕಿತರು ಗುಣಮುಖರಾಗಿದ್ದಾರೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 3,01,442 ಆಗಿದೆ. ಇದರ ಹೊರತಾಗಿ ದೇಶದಲ್ಲಿ 3,28,76,319 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,46,658 ಜನರು ಮಹಾಮಾರಿಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
84.89 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ 84.89 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 252 ದಿನಗಳಾಗಿದೆ. ಕಳೆದ 24 ಗಂಟೆಗಳಲ್ಲಿ 71,04,051 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದ್ದು, ಈವರೆಗೂ 84,89,29,160 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 82,57,88,115 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.