ಸಂಸತ್ ಘೇರಾವ್: ಕೃಷಿ ಕಾಯ್ದೆ ವಿರುದ್ಧ 4 ಅಲ್ಲ 40 ಲಕ್ಷ ಟ್ರ್ಯಾಕ್ಟರ್ ಜಾಥಾ!
ಜೈಪುರ್, ಫೆಬ್ರವರಿ.24: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಘೇರಾವ್ ಹಾಕುತ್ತಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಾಜಸ್ಥಾನದ ಸಿಕಾರ್ ನಲ್ಲಿ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ರೈತರು ಯಾವುದೇ ಸಂದರ್ಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ "ದೆಹಲಿ ಚಲೋ" ನಡೆಸುವುದಕ್ಕೆ ಸಿದ್ಧರಿದ್ದಾರೆ ಎಂದಿದ್ದಾರೆ.
ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಘೇರಾವ್ ಎಚ್ಚರಿಕೆ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಇಲ್ಲದೇ ಹೋದಲ್ಲಿ ಸಂಸತ್ ವಿರುದ್ಧ ಘೇರಾವ್ ಹೋರಾಟ ಆರಂಭಿಸುವುದಾಗಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಉದ್ಯಾನವನಗಳಲ್ಲಿ ರೈತರು ಉಳುಮೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ. ಸಂಸತ್ ಘೇರಾವ್ ನಡೆಸುವ ದಿನಾಂಕದ ಬಗ್ಗೆ ಯುನೈಟೆಡ್ ಫ್ರೆಂಟ್ ತೀರ್ಮಾನಿಸಲಿದೆ ಎಂದಿದ್ದಾರೆ.
4ರ ಬದಲಿಗೆ 40 ಲಕ್ಷ ಟ್ರ್ಯಾಕ್ಟರ್ ಜಾಥಾ
ಮಾರ್ಚ್ ತಿಂಗಳ ಆರಂಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಘೇರಾವ್ ನಡೆಸುವುದಕ್ಕೆ ಚಿಂತಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಕ್ಕೆ ದೇಶಾದ್ಯಂತ ರೈತರು ಅಣಿ ಆಗಿದ್ದಾರೆ. ಈ ಬಾರಿ 4 ಲಕ್ಷದ ಬದಲಿಗೆ 40 ಲಕ್ಷ ಟ್ರ್ಯಾಕ್ಚರ್ ಗಳೊಂದಿಗೆ ಸಂಸತ್ ಘೇರಾವ್ ನಡೆಸಲಾಗುತ್ತದೆ. ಅಷ್ಟರಲ್ಲೇ ಕೇಂದ್ರ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಕೇಶ್ ತಿಕೈಟ್ ಎಚ್ಚರಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಹಿಂಸಾಚಾರದ ಹಿಂದಿನ ಪಿತೂರಿ
ದೆಹಲಿಯಲ್ಲಿ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನವೇ ನಡೆಸಿದ ಹಿಂಸಾಚಾರದ ಹಿಂದೆ ರೈತರನ್ನು ಕೆಣಕುವ ಹುನ್ನಾರ ಅಡಗಿದೆ ಎಂದು ರಾಕೇಶ್ ತಿಕೈಟ್ ಆರೋಪಿಸಿದ್ದಾರೆ. ಭಾರತದ ರೈತರಿಗೆ ತ್ರಿವರ್ಣ ಧ್ವಜದ ಬಗ್ಗೆ ಅಪಾರ ಗೌರವವಿದೆ, ಆದರೆ ದೇಶದ ನಾಯಕರ ಬಗ್ಗೆ ಯಾವುದೇ ರೀತಿ ಗೌರವವಿಲ್ಲ ಎಂದಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಮುಂದುವರಿದೆ ಪ್ರತಿಭಟನೆ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 92 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಹೋರಾಟಕ್ಕೆ ಬೆಂಬಲಿಸಿರುವ ಕಾಂಗ್ರೆಸ್, ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರ ಪ್ರತಿಭಟನೆಗೆ ಕೈಜೋಡಿಸುವುದಾಗಿ ಹೇಳುತ್ತಿದೆ.