ಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿ
Recommended Video
ಬೆಂಗಳೂರು, ಮೇ 24: ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೇ 26ರಂದು ನಾಲ್ಕು ವರ್ಷದ ಸಂಭ್ರಮ. ಭ್ರಷ್ಟಾಚಾರ ರಹಿತ ಆಡಳಿತ, ವರ್ಷಕ್ಕೆ 10 ಮಿಲಿಯನ್ ಉದ್ಯೋಗ ಸೃಷ್ಟಿ ಮತ್ತು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವುದು ಸರ್ಕಾರದ ಕೆಲವು ಭರವಸೆಗಳಲ್ಲಿ ಸೇರಿವೆ.
2019ರಲ್ಲಿ ಮಹತ್ವದ ಲೋಕಸಭೆ ಚುನಾವಣೆ ಎದುರಾಗಲಿರುವುದರಿಂದ ಇದು ಮೋದಿ ಸರ್ಕಾರಕ್ಕೆ ನಿರ್ಣಾಯಕ ವರ್ಷವಾಗಲಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಮ್ಮಿಶ್ರ ವಿರೋಧ ಒಕ್ಕೂಟವನ್ನು ಎದುರಿಸಲು ಮತ್ತು ಮತ್ತೆ ಅಧಿಕಾರ ಹಿಡಿಯಲು ಸಾಕಷ್ಟು ಭರವಸೆಗಳು, ಮಾಪನಗಳು ಮತ್ತು ತಿದ್ದುಪಡಿಗಳನ್ನು ಸರ್ಕಾರ ಮಾಡಿಕೊಳ್ಳಲಿದೆ.
ಪ್ರಧಾನಿ ಮೋದಿ ಟ್ವೀಟ್ ಗೆ ಕುಮಾರಸ್ವಾಮಿ ವಿನಮ್ರ ಪ್ರತಿಕ್ರಿಯೆ
ಈ ವರ್ಷದ ಥೀಮ್ 48 ತಿಂಗಳು ವರ್ಸಸ್ 48 ವರ್ಷ (ಕಾಂಗ್ರೆಸ್ ಆಡಳಿತ). ಸರ್ಕಾರವು ತನ್ನ ಸಾಧನೆಗಳನ್ನು ಬಿಂಬಿಸಿಕೊಳ್ಳಬಹುದು ಮತ್ತು ತನ್ನ ಶುದ್ಧ ಆಡಳಿತ ಸಾಧನೆಯನ್ನು ಹೇಳಿಕೊಳ್ಳಬಹುದು.
ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಭ್ರಷ್ಟಾಚಾರರಹಿತ ಆಡಳಿತದ ಸಾಧನೆಯ ಬಗ್ಗೆ ಸರ್ಕಾರ ಪ್ರಮುಖವಾಗಿ ಒತ್ತು ನೀಡಲಿದೆ.
ಮೋದಿಗೆ ಕೊಹ್ಲಿ ಫಿಟ್ನೆಸ್ ಚಾಲೆಂಜ್: ಸವಾಲು ಸ್ವೀಕರಿಸಿದ ಪ್ರಧಾನಿ
ಯೋಜನೆಗಳನ್ನು ತ್ವರಿತವಾಗಿ ತಲುಪಿಸುವಿಕೆ ಮತ್ತು ವೇಗದ ಅಭಿವೃದ್ಧಿ ಬಗ್ಗೆ ಕೂಡ ಸರ್ಕಾರ ಹೆಮ್ಮೆಪಡಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ಕುರಿತು ಹೇಳಿಕೊಳ್ಳಲಿದೆ.
ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ
ತನ್ನ ವಿದ್ಯುತ್ ಯೋಜನೆಗಳ ಬಗ್ಗೆ ಮೋದಿ ಸರ್ಕಾರ ಹೆಚ್ಚು ಬಿಂಬಿಸಿಕೊಳ್ಳಬಹುದು. ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ ತನ್ನ ಸಾಧನೆಯನ್ನು ಅದು ಮುಖ್ಯವಾಗಿ ತೋರಿಸಿಕೊಳ್ಳಲಿದೆ. ದಿನಕ್ಕೆ 28 ಕಿಲೋ ಮೀಟರ್ ರಸ್ತೆ ನಿರ್ಮಾಣ, ಉಚಿತ ಅನಿಲ ಸಂಪರ್ಕಗಳು ಪ್ರಮುಖ ಸಾಧನೆಯ ಪಟ್ಟಿಯಲ್ಲಿ ಇರಲಿವೆ.
ಮೋದಿ ವಿರುದ್ಧ ಕೆಂಡಕಾರುತ್ತಿರುವ ಚರ್ಚ್ ಗೆ ಟ್ವಿಟ್ಟಿಗರ ಗುದ್ದು!
ರೈತರ ಒಲವು ಮುಖ್ಯ
ಚುನಾವಣೆಯ ನಿಟ್ಟಿನಲ್ಲಿ ರೈತರ ಬೆಂಬಲ ಅತಿ ಮಹತ್ವದ್ದಾಗಿದೆ. ಹೀಗಾಗಿ ಮೋದಿ ಸರ್ಕಾರದ ಪ್ರಮುಖ ಗಮನ ಕೃಷಿ ಮೇಲೆ ಇರಲಿದೆ. ರಾಸಾಯನಿಕ ಮತ್ತು ಗೊಬ್ಬರ ಸಚಿವಾಲಯದ ಕುರಿತು ಲಕ್ಷ್ಯ ಹೆಚ್ಚಲಿದೆ. ಕೃಷಿ ವಲಯಕ್ಕಾಗಿ ಮಾಡುತ್ತಿರುವ ತನ್ನ ಕೆಲಸಗಳ ಕುರಿತು ಪ್ರಚಾರ ಮಾಡಲು ಕಿಸಾನ್ ಮೋರ್ಚಾದ ಸದಸ್ಯರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ.
ಬಜೆಟ್ನಲ್ಲಿ ಗೊಬ್ಬರ ಮತ್ತು ಯೂರಿಯಾಕ್ಕೆ ನೀಡಿರುವ ಹೆಚ್ಚಿನ ಅನುದಾನವನ್ನು ಬಿಂಬಿಸಿಕೊಳ್ಳುವ ಜತೆಗೆ, ರೈತರಿಗೆ ಕನಿಷ್ಠ ಬೆಲೆಯನ್ನು ನೀಡುವ ತನ್ನ ಭರವಸೆಯನ್ನು ನೆನಪಿಸಲಿದೆ.
ಗೋರಖ್ಪುರ, ಸಿಂದ್ರಿ, ತಾಲ್ಚರ್, ರಾಮಗುಂಡಂ ಮತ್ತು ಬರೌನಿಗಳಲ್ಲಿ ರಸಗೊಬ್ಬರ ಘಟ ಕಗಳನ್ನು ಸ್ಥಾಪಿಸಲು 40 ಸಾವಿರ ಕೋಟಿ ಹೂಡಿಕೆ ಮಾಡುವ ತನ್ನ ಭರವಸೆಯನ್ನು ಅದು ಕಾರ್ಯಗತಗೊಳಿಸಬಹುದು.
ಜಿಎಸ್ಟಿ ಸರಕು ಮತ್ತು ಸೇವಾ ತೆರಿಗೆ
10 ವರ್ಷಕ್ಕೂ ಅಧಿಕ ಕಾಲದಿಂದ ಜಿಎಸ್ಟಿ ರೂಪುರೇಷೆ ಕುರಿತು ಸಿದ್ಧತೆ ನಡೆದಿತ್ತು. ಅದನ್ನು ಮೋದಿ ಸರ್ಕಾರ 2017ರ ಜುಲೈನಲ್ಲಿ ಜಾರಿಗೆ ತಂದಿತು.
ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲು ಆರಂಭದ ಕೆಲವು ತಿಂಗಳು ಅನೇಕ ಎಡರುತೊಡರುಗಳು, ಗೊಂದಲಗಳು ಎದುರಾದವು. ಆದರೆ, ಅಂತಿಮವಾಗಿ ಜಿಎಸ್ಟಿ ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಿತು.
ಪರಿಣಾಮಕಾರಿ ವಿದೇಶಾಂಗ ನೀತಿ
ನರೇಂದ್ರ ಮೋದಿ ಅವರು ಇದುವರೆಗೂ 53 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಭೇಟಿಗಳಿಂದ ಯಾವ ಪ್ರಯೋಜನಗಳೂ ಇಲ್ಲ ಎಂದು ವಿರೋಧಿಗಳು ಟೀಕಿಸಿದರೂ, ಚೀನಾದಂತಹ ದೇಶದೊಂದಿಗೆ ದೋಕ್ಲಾಂ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಂತಹ ಮಹತ್ವದ ಪರಿಣಾಮಕಾರಿ ಕೆಲಸಗಳನ್ನು ಮೋದಿ ನಿಭಾಯಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ಭಾರತದ ಸಮಸ್ಯೆ ಇನ್ನೂ ಮುಂದುವರಿದಿದೆ. ಕಾಶ್ಮೀರದಲ್ಲಿ ಈಗಲೂ ಪಾಕಿಸ್ತಾನ ಸೇನೆ ಮತ್ತು ಅದರ ಬೆಂಬಲಿತರು ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಮೋದಿ ಅವರ ಎಲ್ಲ ಪ್ರಯತ್ನಗಳ ನಡುವೆಯೂ ಪಾಕಿಸ್ತಾನದೆಡೆಗಿನ ಭಾರತದ ನೀತಿ ಹೇಳಿಕೊಳ್ಳುವಂತಹ ಬದಲಾವಣೆ ತಂದಿಲ್ಲ.
ಆರ್ಥಿಕ ಅಪರಾಧಿಗಳ ಮಸೂದೆ
ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರಂತಹ ಕೆಲವರು ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾದ ಪ್ರಕರಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಮೋದಿ ಸರ್ಕಾರ, ಮಹತ್ವದ ಆರ್ಥಿಕ ಅಪರಾಧಿಗಳ ಮಸೂದೆಗೆ ಅನುಮೋದನೆ ನೀಡಿದೆ.
ಏಪ್ರಿಲ್ನಲ್ಲಿ ಅಸ್ತಿತ್ವಕ್ಕೆ ಬಂದ ಈ ಮಸೂದೆ ಅದ ಹಿಂದಿನ ಪ್ರಕರಣಗಳಿಗೂ ಅನ್ವಯವಾಗಲಿದೆ. 100 ಕೋಟಿಗೂ ಅಧಿಕ ಮೊತ್ತದ ಹಣಕಾಸು ವ್ಯವಹಾರದ ವಂಚನೆ ಮಾಡಿ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುವವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಈ ಮಸೂದೆ ಗಮನ ಹರಿಸಲಿದೆ.
ಮಸೂದೆಯ ಕರಡನ್ನು ಕಳೆದ ವರ್ಷದ ಮೇ ತಿಂಗಳಿನಲ್ಲಿ ಎಲ್ಲ ಸಂಸದರ ಅಭಿಪ್ರಾಯ ಸಂಗ್ರಹಕ್ಕಾಗಿ ವಿತರಿಸಲಾಗಿತ್ತು.
ಭ್ರಷ್ಟಚಾರದ ಕಪ್ಪುಚುಕ್ಕೆಯಿಲ್ಲ
ಮೋದಿ ಸರ್ಕಾರವ ವಿರುದ್ಧ ಭ್ರಷ್ಟಾಚಾರದ ಯಾವುದೇ ಗಂಭೀರ ಆರೋಪಗಳಿಲ್ಲ. ಯುಪಿಎ ಸರ್ಕಾರವು ಒಂದರ ನಂತರ ಒಂದು ಹಗರಣಗಳ ವಿವಾದದಿಂದ ಸುದ್ದಿಯಾಗುತ್ತಿತ್ತು. ವಿರೋಧಪಕ್ಷಗಳು ಕೆಲವು ಆರೋಪಗಳನ್ನು ಮಾಡಿದರೂ ಯಾವುದೂ ನಿಂತುಕೊಳ್ಳಲಿಲ್ಲ. ಒಟ್ಟಾರೆ ಮೋದಿ ಸರ್ಕಾರ ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿದೆ.
ಫಲಪ್ರದವಾಗದ ಅಪನಗದೀಕರಣ
ಕಪ್ಪುಹಣವನ್ನು ಮಟ್ಟಹಾಕುವ ಉದ್ದೇಶದಿಂದ ತೆಗೆದುಕೊಂಡ ಅತಿ ದೊಡ್ಡ ನಿರ್ಧಾರ ಎಂದು ಅಪನಗದೀಕರಣವನ್ನು ವ್ಯಾಖ್ಯಾನಿಸಲಾಗಿದೆ.
ಇದರಿಂದ ದೇಶದಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ನಗದು ಹಣವನ್ನು ಹೊರತೆಗೆಯಿತು. ನಕಲಿ ನೋಟುಗಳ ಹಾವಳಿಯನ್ನು ಕೊನೆಗಾಣಿಸುವ ಗುರಿಯನ್ನು ಈ ಕ್ರಮ ಹೊಂದಿತ್ತು. ಆದರೆ ದೊರೆತ ಫಲಿತಾಂಶ ಅದು ಬಯಸಿದಂತೆ ಇರಲಿಲ್ಲ.
ವ್ಯವಸ್ಥೆಯೊಳಗೆ ಲೆಕ್ಕಕ್ಕೆ ಸಿಗದೆ ತಪ್ಪಿಹೋಗಿದ್ದ ದಾಖಲೆರಹಿತ ಸಂಪತ್ತು ಹೊರಬಂದು, ಅವು ಬಡಜನರ ಜನ್ಧನ್ ಖಾತೆಗೆ ಸೇರಿಕೊಂಡವು. ಆದರೆ, ಕುತಂತ್ರಿಗಳು ಹೊಸ ಕರೆನ್ಸಿಯನ್ನು ಸಹ ನಕಲು ಮಾಡಲು ಹೊಸ ವಿಧಾನಗಳನ್ನು ಕಂಡುಕೊಂಡಿದ್ದರಿಂದ ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಬರಲಿಲ್ಲ.
ಮೇಕ್ ಇನ್ ಇಂಡಿಯಾಕ್ಕೆ ಹಿನ್ನಡೆ
ಮೇಕ್ ಇನ್ ಇಂಡಿಯಾ ಮೋದಿ ಸರ್ಕಾರವು ಹೆಚ್ಚು ಬಾರಿ ಜಪಿಸಿದ ಮಂತ್ರ. ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸಿ ಹೊಸ ಕೌಶಲಗಳನ್ನು ಸೃಷ್ಟಿಸುವುದು ಇದರ ಉದ್ದೇಶ. ಸ್ಟಾರ್ಟ್ಅಪ್ ಇಂಡಿಯಾದ ಕುರಿತ ವರದಿಯೊಂದರ ಪ್ರಕಾರ ಜನವರಿ ಮೊದಲ ವಾರದವರೆಗೆ ಕೇವಲ 74 ಸ್ಟಾರ್ಟ್ಅಪ್ಗಳನ್ನು ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಗುರುತಿಸಲಾಗಿದೆ.
ಭಾರತದ ವ್ಯಾಪಾರ ವಹಿವಾಟು ತೀರಾ ಇಳಿಕೆಯಾಗಿದ್ದು, ಚೀನಾ ಮೇಲ್ಮುಖವಾಗಿ ಚಲಿಸುತ್ತಿದೆ. ಇದರ ಅನುಪಾತ 4:1ರಷ್ಟಿದೆ.
ತಗ್ಗದ ಸಾಲದ ಭಾರ
9 ಟ್ರಿಲಿಯನ್ಗೂ ಅಧಿಕ ಮೊತ್ತದ ಕೆಡುಕಿನ ಸಾಲ ಸರ್ಕಾರವನ್ನು ಬಾಧಿಸುತ್ತಿದೆ. ಇದು ಲಾಗಾಯ್ತಿನಿಂದಲೂ ಬಂದಿರುವ ಸಮಸ್ಯೆಯಾದರೂ ಮೋದಿ ಸರ್ಕಾರವೂ ಈ ಹೊರೆ ಹೊರುವುದನ್ನು ಮುಂದುವರಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ವ್ಯವಹಾರ ಸುಗಮವಾಗಿ ನಡೆಯಲು 2.11 ಟ್ರಿಲಿಯನ್ ಮೊತ್ತದ ಮರು ಬಂಡವಾಳೀಕರಣದ ಯೋಜನೆಯನ್ನು ಕಳೆದ ವರ್ಷ ಸರ್ಕಾರ ಹಮ್ಮಿಕೊಂಡಿತ್ತು. ಆದರೆ, ಅದು ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13 ಸಾವಿರ ಕೋಟಿ ಮೊತ್ತದ ಅವ್ಯವಹಾರದಲ್ಲಿ ಮರೆಯಾಯಿತು.
ಕೃಷಿ ಕ್ಷೇತ್ರಕ್ಕೆ ಹೊಡೆತ
ಕೃಷಿ ಕ್ಷೇತ್ರವೇ ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವುದು. ಈ ವರ್ಷ ಸರ್ಕಾರದ ಸಂಪೂರ್ಣ ಗಮನ ಇದರೆಡೆಗೆ ಇರಲಿದೆ.
ದೇಶದ ನೈಜ ಜಿಡಿಪಿ ಬೆಳವಣಿಗೆಯನ್ನು ಕೃಷಿ ವಲಯದ ವಿಸ್ತರಣೆಯೊಂದಿಗೆ ಹೋಲಿಸಿ ನೋಡಿದರೆ, 2012ರಿಂದ ಕೃಷಿ ಕ್ಷೇತ್ರ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವುದು ತಿಳಿಯುತ್ತದೆ.
ಹವಾಮಾನ ವೈಪರೀತ್ಯದ ಕಾರಣ ದೀರ್ಘಾವಧಿಯಲ್ಲಿ ಕೃಷಿ ಆದಾಯ ಶೇ 25ರಷ್ಟು ಇಳಿಕೆಯಾಗಿರುವುದು 2018ರ ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ತಿಳಿದುವಬಂದಿತ್ತು.
ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ 20 ಸಾವಿರಕ್ಕೂ ಅಧಿಕ ರೈತರು ಮುಂಬೈನಲ್ಲಿ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಕೃಷಿ ವಲಯದ ಸಮಸ್ಯೆ ಹೆಚ್ಚುತ್ತಲೇ ಇದೆ.
ನೇರ ತೆರಿಗೆ ಕೋಡ್
ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸದೆ ನೇರ ತೆರಿಗೆ ಕೋಡ್ ಅನ್ನು ಸರ್ಕಾರ ಜಾರಿಗೆ ತರಬಹುದು. ಕಾರ್ಪೊರೇಟ್ ಟ್ಯಾಕ್ಸ್ಅನ್ನು ಶೇ 25ರಷ್ಟು ಇಳಿಸಬಹುದು.
ಇದು ಮಧ್ಯಮವರ್ಗದ ಜನರಿಗೆ ಖುಷಿ ನೀಡಲಿದೆ. ಅವರ ವಾಸ್ತವ ತೆರಿಗೆ ಇಳಿಕೆಯಾಗಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ತೆರಿಗೆ ಹೊರೆ ಇಳಿಸಿಕೊಂಡು ಹೆಚ್ಚು ಸ್ಪರ್ಧಾತ್ಮಕವಾಗಬಹುದು. ಇದು ಬಿಜೆಪಿಗೆ 2019ರ ಚುನಾವಣೆಯಲ್ಲಿ ಭಾರಿ ಪ್ರಯೋಜನ ತಂದುಕೊಡಲಿದೆ.
ಮೂಲಸೌಕರ್ಯಗಳ ಒದಗಿಸುವಿಕೆ
ಮೂಲಸೌಕರ್ಯಗಳ ತ್ವರಿತ ಒದಗಿಸುವಿಕೆ ಸವಾಲು ಇದೆ. ಅದರ ಮೊದಲ ಹೆಜ್ಜೆಯಾಗಿ ಅಹಮದಾಬಾದ್-ಮುಂಬೈ ಬುಲೆಟ್ ಟ್ರೈನ್ ನಿರ್ಮಾಣಕ್ಕೆ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸೇರಿ ಅಡಿಗಲ್ಲು ಹಾಕಿದ್ದಾರೆ.
ಟೀಕೆಗಳ ನಡುವೆಯೂ, ಮೂಲಸೌಕರ್ಯಗಳಲ್ಲಿನ ಸುಧಾರಣೆ ಹೆಚ್ಚು ಲಾಭ ತಂದುಕೊಡಲಿದೆ ಎಂದು ಮೋದಿ ಅದರತ್ತ ಕೇಂದ್ರೀಕರಿಸಿದ್ದಾರೆ.
2040ರ ವೇಳೆಗೆ ಭಾರತವು 526 ಬಿಲಿಯನನ್ ಡಾಲರ್ನಷ್ಟು ಮೂಲಸೌಕರ್ಯ ಹೂಡಿಕೆ ನಡೆಸಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. 7 ಟ್ರಿಲಿಯನ್ ಹಣದಲ್ಲಿ 83 ಸಾವಿರ ಕಿಲೋ ಮೀಟರ್ ರಸ್ತೆಗಳನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಕಳೆದ ಅಕ್ಟೋಬರ್ನಲ್ಲಿ ಸರ್ಕಾರ ಹೇಳಿದೆ.
ಆರ್ಥಿಕತೆಯನ್ನು ವೃದ್ಧಿಸಲು ಸರ್ಕಾರ ಹೂಡಿಕೆ ಮಾಡಲಿರುವ ಇತರೆ ಪ್ರಮುಖ ಮೂಲಸೌಕರ್ಯ ವಲಯಗಳೆಂದರೆ ರೈಲ್ವೆ, ವಿದ್ಯುತ್ ಮತ್ತು ಬಂದರು.
ಉದ್ಯೋಗ ಸೃಷ್ಟಿಯ ಸವಾಲು
ಉದ್ಯೋಗ ವಲಯ ಮೋದಿ ಸರ್ಕಾರಕ್ಕೆ ಎದುರಾಗಿರುವ ಮತ್ತೊಂದು ಚಿಂತೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ಸೇರಿದಂತೆ ನಡೆದ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿಯೂ ಹೆಚ್ಚಿನವರು ಹೇಳಿಕೊಂಡಿರುವ ಸಮಸ್ಯೆ ಉದ್ಯೋಗದ ಕೊರತೆ.
ಅದನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾದರೆ 2019ರ ವೇಳೆಗೆ ಮೋದಿ ಸರ್ಕಾರಕ್ಕೆ ಅದು ಟ್ರಂಪ್ ಕಾರ್ಡ್ ಆಗಲಿದೆ. 2014ರ ಚುನಾವಣಾ ಪ್ರಚಾರದಲ್ಲಿ ಮೋದಿ ಅವರು ವರ್ಷಕ್ಕೆ ಹತ್ತು ಮಿಲಿಯನ್ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು.
ಆದರೆ ಕಳೆದ ನಾಲ್ಕು ವರ್ಷದಲ್ಲಿ ಒಂದು ಮಿಲಿಯನ್ಗೂ ಕಡಿಮೆ ಉದ್ಯೋಗ ಸೃಷ್ಟಿಯಾಗಿದೆ. 2018ರ ಬಜೆಟ್ನಲ್ಲಿ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಘೋಷಣೆ ಮಾಡುವ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಯಿತು.
ಸರ್ಕಾರವು ಉದ್ಯೋಗ ವಲಯಕ್ಕೆ ಸಂಬಂಧಿಸಿದಂತೆ ಗಮನಹರಿಸುವ ಒಂದು ನೀತಿಯನ್ನು ಈ ವರ್ಷ ರಚಿಸುವ ಸಾಧ್ಯತೆಯಿದೆ.