ಮೋದಿ ಸರಕಾರಕ್ಕೆ 4 ವರ್ಷ : ಅಪನಗದೀಕರಣದಿಂದ ಜಿಸ್ಟಿವರೆಗೆ
"ಈ ಸರಕಾರ ನನಗಾಗಿ ಸ್ಥಾಪಿಸಿದ್ದಲ್ಲ, ಇಡೀ ದೇಶಕ್ಕಾಗಿ ಇದು ರಚನೆಯಾಗಿದೆ. ಈ ಸರಕಾರ ಬಡವರಿಗಾಗಿ, ಅವರಿಗಾಗಿ ನಾವು ಏನಾದರೂ ಮಾಡೋಣ. ಎಲ್ಲರ ಪ್ರಗತಿ ಮತ್ತು ಅಭಿವೃದ್ಧಿ ಆಗಬೇಕಾಗಿದೆ. ಆದರೆ, ಇದನ್ನು ಸಾಧಿಸಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು."
ಹೀಗೆಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನ ದೇಶವನ್ನುದ್ದೇಶಿಸಿ ಮಾತನ್ನಾಡಿದ್ದರು. ಮೇ 26ರಂದು 4 ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರಕಾರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರವನ್ನು ಇಂದಿಗೂ ಜಪಿಸುತ್ತಿದೆ.
ಏಕ ಶ್ರೇಣಿ ಏಕ ಪಿಂಚಣಿಯಿಂದ ಸರ್ಜಿಕಲ್ ಸ್ಟ್ರೈಕ್ ತನಕ ಸಾಧನೆ ಹಾದಿ
ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ನೀಡಿದಂತೆ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಶ್ರೀಸಾಮಾನ್ಯರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಆರಂಭಿಸಿದ್ದಾರೆ. ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗಳು ಇತಿಹಾಸ ಸೃಷ್ಟಿಸಿವೆ.
ಆದರೆ, ಮೋದಿಯವರು ಆರಂಭಿಸಿದ್ದ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಗಳು ಇಡೀ ದೇಶದಲ್ಲಿ ಭಾರೀ ಕೋಲಾಹಲ ಎಬ್ಬಿಸಿವೆ. ಉಗ್ರವಾದವನ್ನು ಹತ್ತಿಕ್ಕುವಲ್ಲಿ ಅಪನಗದೀಕರಣ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರೂ, ಕಪ್ಪು ಹಣವನ್ನು ವಿದೇಶಿ ಬ್ಯಾಂಕ್ ಗಳಿಂದ ತರಿಸುವಲ್ಲಿ ಎಡವಿದೆ. ಅಲ್ಲದೆ, ಜಿಎಸ್ಟಿ ಅನುಷ್ಠಾನದಿಂದಾಗಿ ಹಲವಾರು ಸಣ್ಣ ವರ್ತಕರು ಸಂಕಷ್ಟಕ್ಕೀಡಾಗಿದ್ದು ಕೂಡ ಸುಳ್ಳಲ್ಲ.
ನವೆಂಬರ್ 8ರ ರಾತ್ರಿ ಅಪನಗದೀಕರಣದ ಕ್ರಾಂತಿ
2016ರ ನವೆಂಬರ್ 8ರಂದು ಒಂದೆಡೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದರೆ, ಅಲ್ಲಿಯ ಗಮನವೆಲ್ಲ ಇತ್ತ ಹರಿಯುವಂತೆ ನರೇಂದ್ರ ಮೋದಿಯವರು 500 ಮತ್ತು 1000 ರುಪಾಯಿ ಮೌಲ್ಯದ ನೋಟುಗಳನ್ನು ರದ್ದುಪಡಿಸಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದರು. ದಿನಬೆಳಗಾಗುವುದರೊಳಗಾಗಿ ದೇಶದೆಲ್ಲೆಡೆ ಪ್ರಶಂಸೆ ಮತ್ತು ಟೀಕೆಗಳು ಸುರಿಮಳೆಯಾಗುತ್ತಿತ್ತು. ಮೋದಿಯವರು ಭ್ರಷ್ಟಾಚಾರ ನಿಗ್ರಹಕ್ಕೆ ಈ ಕ್ರಮ ಮಾತ್ರ ತೆಗೆದುಕೊಂಡಿರಲಿಲ್ಲ, ಜೊತೆಗೆ ಹುದುಗಿಸಿಟ್ಟ ಕಪ್ಪು ಹಣವನ್ನು ಹೊರತೆಗೆಯುವ ಸಾಹಸಕ್ಕೂ ಕೈಹಾಕಿದ್ದರು.
ಮೋದಿ ಸರಕಾರಕ್ಕೆ 4 ವರ್ಷ: ವಿದೇಶಾಂಗ ಸಚಿವಾಲಯದ ಅದ್ಭುತ ಸ್ಪರ್ಶ
ಏರಿಕೆಯಾದ ಡಿಜಿಟಲ್ ವ್ಯವಹಾರ
ಕಾಗದ ನೋಟಿನ ವ್ಯವಹಾರವನ್ನು ತಗ್ಗಿಸಿ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸುವ ಮೂಲ ಉದ್ದೇಶ ಹೆಚ್ಚಿನ ಮಟ್ಟಿಗೆ ಯಶಸ್ಸನ್ನೂ ತಂದುಕೊಟ್ಟಿತು. ಇಂದು ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ ದೇಶದಲ್ಲಿ ಹೆಚ್ಚಾಗಿದೆ, ನೋಟುಗಳ ಬಳಕೆ ತಗ್ಗಿದೆ. ಜೊತೆಗೆ ಕಳೆದೆರಡು ಹಣಕಾಸು ವರ್ಷದೊಳಗೆ ತೆರಿಗೆ ತುಂಬುವವರ ಸಂಖ್ಯೆ ಶೇ.26.6ರಷ್ಟು ಹೆಚ್ಚಾಗಿದೆ. ಅಲ್ಲದೆ, ಶೇ.27.95ರಷ್ಟು ಇ-ರಿಟರ್ನ್ ಫೈಲ್ ಮಾಡುವುದು ಕೂಡ ಹೆಚ್ಚಾಗಿದೆ. ಕಪ್ಪು ಹಣದ ನಿಯಂತ್ರಣಕ್ಕಾಗಿ ಎಸ್ಐಟಿಯನ್ನು ಕೂಡ ಸ್ಥಾಪಿಸಲಾಯಿತು.
7ನೇ ವೇತನ ಆಯೋಗ: ಮೋದಿ ಪ್ರವೇಶದಿಂದ ತ್ವರಿತಗೊಂಡ ಪ್ರಕ್ರಿಯೆ!
ಶೆಲ್ ಕಂಪನಿಗಳಿಗೆ ಭಾರೀ ಹೊಡೆತ
2.24 ಲಕ್ಷದಷ್ಟು ಶೆಲ್ (ಮೋಸದ) ಕಂಪನಿಗಳು ಬಾಗಿಲು ಮುಚ್ಚುವಂತಾಯಿತು. ಇದು ಹಲವಾರು ಕಂಪನಿಗಳಿಗೆ ಭಾರೀ ಹೊಡೆತ ಕೊಟ್ಟಿತು. ಅಪನಗದೀಕರಣದಿಂದಾಗಿ 29,213 ಕೋಟಿಯಷ್ಟು ಲೆಕ್ಕಪತ್ರವಿಲ್ಲದ ಹಣವನ್ನು ಪತ್ತೆ ಹಚ್ಚಲಾಯಿತು. ಅಪನಗದೀಕರಣದ ಸಮಯದಲ್ಲಿ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಲಾದ ಕೋಟ್ಯಂತರ ರುಪಾಯಿ ಹಣದ ತಪಾಸಣೆ ಮಾಡಲೆಂದು ಆದಾಯ ತೆರಿಗೆ ಇಲಾಖೆ 2017ರ ಜನವರಿ 31ರಂದು ಆಪರೇಷನ್ ಕ್ಲೀನ್ ಮನಿಯನ್ನು ಆರಂಭಿಸಿತ್ತು.
ಮಹಿಳಾ ಕಲ್ಯಾಣದತ್ತ ಮೋದಿ ಸರ್ಕಾರದ ದಿಟ್ಟ ಹೆಜ್ಜೆ
ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ
ಹಲವಾರು ಉತ್ಪನ್ನಗಳನ್ನು ವಿಭಾಗೀಕರಿಸಿ, ಶೇ.5, ಶೇ.12, ಶೇ.18 ಮತ್ತು ಶೇ.28ರ ನಾಲ್ಕು ಸ್ಲ್ಯಾಬ್ ಗಳಿರುವ ಸರಕು ಮತ್ತು ಸೇವಾ ತೆರಿಗೆಯನ್ನು 2017ರ ಜುಲೈ 1ರಿಂದ ಜಾರಿಯಾಗುವಂತೆ 2017ರ ಜೂನ್ 30ರ ಮಧ್ಯರಾತ್ರಿ ಜಾರಿಗೆ ತರಲಾಯಿತು. ಇದರಿಂದಾಗಿ ಒಟ್ಟಾರೆಯಾಗಿ ಶೇ.25ರಿಂದ 30ರಷ್ಟು ತೆರಿಗೆಯ ಭಾರ ಇಳಿಕೆಯಾಯಿತು. ದೇಶದಲ್ಲಿ ಒಂದೇ ಮಾರುಕಟ್ಟೆ ಸೃಷ್ಟಿಯಾಗುವಂತಾಗಿ, ಈಸ್ ಆಫ್ ಡೂಯಿಂಗ್ ಬಿಸಿನೆಸ್ ನಲ್ಲಿ ಭಾರತದ ಶ್ರೇಯಾಂಕ 142ರಿಂದ 100ಕ್ಕೆ ಜಿಗಿದಿದೆ. ಅಲ್ಲದೆ, ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದ ಶ್ರೇಯಸ್ಸೂ ನರೇಂದ್ರ ಮೋದಿ ಅವರು ಸರಕಾರಕ್ಕೆ ಸಿಕ್ಕಿದೆ.
ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ?
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯೊಂದಿಗೆ ಈ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ. ಇದು ಮೋದಿ ಸರಕಾರದ ಅತ್ಯುತ್ತಮ ಯೋಜನೆಗಳಲ್ಲಿ ಒಂದು. ಶೇ.30ರಷ್ಟು ದೇಶದ ಜನರು ಈ ಯೋಜನೆಯಲ್ಲಿ ಹಣ ತೊಡಗಿಸಿದ್ದು, 2018ರ ಏಪ್ರಿಲ್ 25ರವರೆಗೆ 31.52 ಕೋಟಿಯಷ್ಟು ಜನ್ ಧನ್ ಖಾತೆಯನ್ನು ತೆರೆಯಲಾಗಿದೆ ಮತ್ತು 80 ಸಾವಿರ ಕೋಟಿ ರುಪಾಯಿ ಹಣದಷ್ಟು ಶೇಖರಣೆಯಾಗಿದೆ.
ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ
ಒಂದು ಸಣ್ಣ ಉಳಿತಾಯ ಹೆಣ್ಣು ಮಗುವಿನ ಬಾಳಲ್ಲಿ ಎಷ್ಟು ದೊಡ್ಡ ಸಹಾಯವಾಗಬಹುದು ಎಂಬುದಕ್ಕೆ ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯೇ ಸಾಕ್ಷಿ. 2015ರಲ್ಲಿ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ಆರಂಭಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ 1.26 ಕೋಟಿಯಷ್ಟು ಖಾತೆಗಳನ್ನು ತೆರೆಯಲಾಗಿದೆ ಮತ್ತು 2017ರ ನವೆಂಬರ್ ವರೆಗೆ 19,183 ಕೋಟಿಯಷ್ಟು ಹಣ ಜಮಾವಣೆಯಾಗಿದೆ.