Breaking: ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಸೂತಕ; 4 ಸಾವು
ಹೈದರಾಬಾದ್/ಬೆಂಗಳೂರು, ಆಗಸ್ಟ್ 15: ದೇಶದಲ್ಲಿ ಭಾರಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಇದೆ ಸಂದರ್ಭದಲ್ಲಿ ಬೆಂಗಳೂರು, ತೆಲಂಗಾಣ ಸೇರಿದಂತೆ ಹಲವು ಕಡೆಗಳಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದು ಸೂತಕದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯ ಎಚ್ಬಿಆರ್ ಲೇಔಟ್ನ ವಿ ಬ್ಲಾಕ್ನಲ್ಲಿರುವ 33 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಭಾನುವಾರ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜ ಕಟ್ಟಲು ಪ್ರಯತ್ನಿಸುತ್ತಿದ್ದಾಗ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ: ಮಹಾತ್ಮ ಗಾಂಧಿಯನ್ನು ನೋಡಲು ದೇವಸ್ಥಾನಕ್ಕೆ ಬರುತ್ತಿರುವ ಜನ
ಮೃತರನ್ನು ನಗರದ ಖಾಸಗಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ವಿಶ್ವಾಸ್ ಕುಮಾರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿಶ್ವಾಸ್ ಕುಮಾರ್, ಎಚ್ಬಿಆರ್ ಲೇಔಟ್ನ ವಿ ಬ್ಲಾಕ್ನಲ್ಲಿರುವ ಎರಡು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಪತ್ನಿ ವೈಶಾಲಿ, ಎರಡು ವರ್ಷದ ಮಗಳು ಮತ್ತು ಪೋಷಕರೊಂದಿಗೆ ವಾಸವಾಗಿದ್ದರು. ವಿಶ್ವಾಸ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತೀವ್ರ ಗಾಯಗಳಿಂದ ಬಳಲುತ್ತಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಧ್ವಜಾರೋಹಣ ನಡೆಸಲು ಹೊಸಮಠ ಸಿ.ಎ.ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಸಿದ್ದತೆ ಮಾಡುತ್ತಿದ್ದಾಗ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಈ ವೇಳೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡರು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ವಿಡಿಯೋ
ಇತ್ತ ತೆಲಂಗಾಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದು ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರಧ್ವಜ ಹಾರಿಸುತ್ತಿದ್ದ ಕಂಬಕ್ಕೆ 11ಕೆವಿ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಮೃತರನ್ನು ಅನಿಲ್ ಕುಮಾರ್ ಗೌಡ್ (40) ಮತ್ತು ತಿರುಪತಿ (42) ಎಂದು ಗುರುತಿಸಲಾಗಿದೆ. ಧನಂಜಯ್ (38) ಎಂಬುವವರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪತನಚೇರು ಡಿಎಸ್ಪಿ ಭೀಮರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.