ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಹೊಸ ಮತದಾನ ಸುಧಾರಣೆಗೆ ಮುಂದಾದ ಸರ್ಕಾರ
ನವದೆಹಲಿ, ಡಿಸೆಂಬರ್ 15: 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸಲು ಪ್ರಮುಖ ತಿದ್ದುಪಡಿಗಳನ್ನು ತರುವುದಾಗಿ ಕೇಂದ್ರವು ಬುಧವಾರ ತಿಳಿಸಿದೆ. ಈ ವರ್ಷದ ಆಗಸ್ಟ್ನಲ್ಲಿ ಹೊಸ ಮತದಾರರ ನೋಂದಣಿಗೆ ಆಧಾರ್ ಬಳಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡುವ ಪ್ರಸ್ತಾವಣೆಯೊಂದಿಗೆ ಸರ್ಕಾರವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವನ್ನು (ಯುಐಡಿಎಐ) ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಪ್ಯಾನ್-ಆಧಾರ್ ಲಿಂಕ್ ಮಾಡುವಂತೆಯೇ ಒಬ್ಬರ ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಈಗ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಆದಾಗ್ಯೂ, ಹಿಂದಿನದಕ್ಕಿಂತ ಭಿನ್ನವಾಗಿ ಇದನ್ನು ಸ್ವಯಂಪ್ರೇರಿತ ಆಧಾರ ಮೇಲೆ ಮಾಡಲಾಗುತ್ತದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಇನ್ನು ಈ ಪ್ರಯತ್ನವು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಹೆಚ್ಚಿನ ಜನರಿಗೆ ಅವಕಾಶ ನೀಡಲಿದೆ.
ಮಾರ್ಚ್31ರಂದು ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ 1,000 ದಂಡ!
ಮುಂದಿನ ವರ್ಷ ಜನವರಿ 1 ರಿಂದ, 18 ವರ್ಷ ತುಂಬಿದ ಮೊದಲ ಮತದಾರರಿಗೆ ನಾಲ್ಕು ದಿನಗಳಲ್ಲಿ ಅಂದರೆ ವರ್ಷಕ್ಕೆ ನಾಲ್ಕು ಬಾರಿ ನೋಂದಾಯಿಸಲು ಅವಕಾಶವನ್ನು ನೀಡುತ್ತದೆ. ಈವರೆಗೆ ವರ್ಷಕ್ಕೆ ಒಂದು ಬಾರಿ ಮಾತ್ರ 18 ವರ್ಷ ತುಂಬಿದವರಿಗೆ ಮತದಾರರ ಪಟ್ಟಿಗೆ ನೋಂದಣಿ ಮಾಡಲು ಅವಕಾಶ ನೀಡಲಾಗುತ್ತಿತ್ತು.
ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡಲು ಚುನಾವಣಾ ಆಯೋಗ ಪ್ರಸ್ತಾಪ
ಚುನಾವಣಾ ಆಯೋಗವು 2019 ರ ಆಗಸ್ಟ್ನಲ್ಲಿ ಚುನಾವಣಾ ಕಾನೂನುಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿ ಮಾಡಿತ್ತು. ಚುನಾವಣಾ ಆಯೋಗ ಅಧಿಕಾರಿಗಳು ಅಸ್ತಿತ್ವದಲ್ಲಿರುವ ಮತದಾರರು ಮತ್ತು ಮತದಾರರ ಪಟ್ಟಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಲು ಬಯಸುವವರ ಆಧಾರ್ ಸಂಖ್ಯೆಯನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಭಾರತೀಯ ಚುನಾವಣಾ ಆಯೋಗವು ತನ್ನ ರಾಷ್ಟ್ರೀಯ ಮತದಾರರ ಪಟ್ಟಿಯ ದೃಢೀಕರಣ ಕಾರ್ಯಕ್ರಮದ (ಎನ್ಇಆರ್ಪಿಎಪಿ) ಭಾಗವಾಗಿ ಆಧಾರ್ ಸಂಖ್ಯೆಯನ್ನು ಸಂಗ್ರಹ ಮಾಡುವ ಸಮಯ ಇದಾಗಿತ್ತು.
ಯೋಜನೆಗೆ ಬ್ರೇಕ್ ಹಾಕಿದ್ದ ಸುಪ್ರೀಂ ಕೋರ್ಟ್
ವಿಭಿನ್ನ ಸ್ಥಳಗಳಲ್ಲಿ ಒಂದೇ ವ್ಯಕ್ತಿಯ ಬಹು ದಾಖಲಾತಿಗಳ ಸಮಸ್ಯೆಯನ್ನು ನಿಗ್ರಹ ಮಾಡುವ ನಿಟ್ಟಿನಲ್ಲಿ ಮತದಾರರ ಚುನಾವಣಾ ಡೇಟಾದೊಂದಿಗೆ ಯುಐಡಿಎಐ (ಆಧಾರ್) ಸಂಖ್ಯೆಗಳನ್ನು ಲಿಂಕ್ ಮಾಡುವ ಚುನಾವಣಾ ಆಯೋಗದ ಯೋಜನೆಗೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತ್ತು. ರಾಜ್ಯ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಮಾತ್ರ ಆಧಾರ್ ಅನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ 2015 ರಲ್ಲಿ ಸ್ಪಷ್ಟಪಡಿಸಿತ್ತು.
ಮೇ 17 ರಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಕಳುಹಿಸಲಾದ ಪ್ರಸ್ತಾಪದಲ್ಲಿ ಹೊಸ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಆದ್ಯತೆಯನ್ನು ಹೆಚ್ಚಾಗಿ ಗುರುತು ಮಾಡಿದ್ದಾರೆ. ಆಧಾರ್-ಮತದಾರರ ID ಕಾರ್ಡ್ ಲಿಂಕ್; ನಾಗರಿಕರಿಗೆ 18 ವರ್ಷ ತುಂಬಿದ ತಕ್ಷಣ ಮತದಾರರ ಗುರುತಿನ ಚೀಟಿ ಲಭ್ಯವಾಗುವಂತೆ ಮಾಡುವುದು, 'ಸೇವಾ ಮತದಾರರ' ನಿಯಮಗಳು; ಮತ್ತು ಪಾವತಿಸಿದ ಸುದ್ದಿಯನ್ನು ಭ್ರಷ್ಟ ವರದಿ ಎಂದು ಗುರುತು ಮಾಡುವ ಪ್ರಸ್ತಾಪವನ್ನು ಚುನಾವಣಾ ಆಯೋಗದ ನೂತನ ಆಯುಕ್ತ ಸುಶೀಲ್ ಚಂದ್ರ ಮಾಡಿದ್ದರು.
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಸಾಮಾನ್ಯವಾಗಿ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವುದಕ್ಕೂ ಮುನ್ನ ಚುನಾವಣಾ ಆಯೋಗ ತಂಡವು ರಾಜ್ಯಗಳಿಗೆ ಭೇಟಿ ನೀಡುತ್ತದೆ. ಮತದಾನ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವ ಕಾರ್ಯ ಮಾಡುತ್ತದೆ. (ಒನ್ಇಂಡಿಯಾ ಸುದ್ದಿ)
Recommended Video