ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು ದಾಖಲು
ನವದೆಹಲಿ, ಜುಲೈ 24: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಈ ಒಂದು ದಿನದ ಅವಧಿಯಲ್ಲಿ 546 ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ವರದಿಯಾಗಿದೆ. 35,087 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶನಿವಾರದ ಅಂಕಿಸಂಖ್ಯೆ ಮೂಲಕ ಇದುವರೆಗೂ ದೇಶದಲ್ಲಿ ಒಟ್ಟು 3,13,32,159 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3,05,03,166 ಮಂದಿ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,08,977ಆಗಿದೆ. ಇದುವರೆಗೂ ಸೋಂಕಿನಿಂದ 4,20,016 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಇದುವರೆಗೂ 42,78,82,261 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ಪಡೆದ ನಂತರ ಹೊಸ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿರುವುದೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಪ್ರತಿಗಂಟೆಗೆ 2 ಲಕ್ಷ ಮಂದಿಗೆ ಕೊರೊನಾವೈರಸ್ ಲಸಿಕೆ!
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ದೇಶದಲ್ಲಿ "ಬೂಸ್ಟರ್ ಡೋಸ್" ಲಸಿಕೆಗಳ ಅವಶ್ಯಕತೆ ಕಾಣಿಸಿಕೊಳ್ಳಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. "ಜನರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುವ ಸಮಯಕ್ಕೆ ತಕ್ಕಂತೆ ಬೂಸ್ಟರ್ ಲಸಿಕೆ ನೀಡಬೇಕಾಗಬಹುದು. ಈ ಬೂಸ್ಟರ್ ಡೋಸ್ ಎರಡನೇ ತಲೆಮಾರಿನ ಲಸಿಕೆಯಾಗಿದೆ. ಈ ಎರಡನೇ ತಲೆಮಾರಿನ ಲಸಿಕೆ ಪ್ರತಿರಕ್ಷೆ ನೀಡುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಹೊಸ ರೂಪಾಂತರಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಈಗಾಗಲೇ ಬೂಸ್ಟರ್ ಲಸಿಕೆ ಸಂಬಂಧ ಪ್ರಯೋಗಗಳು ನಡೆಯುತ್ತಿವೆ" ಎಂದು ಅವರು ವಿವರಣೆ ನೀಡಿದ್ದಾರೆ.