ಉತ್ತರಾಖಂಡದಲ್ಲಿ ಹಿಮಸ್ಫೋಟ; 8 ಸಾವು, 384 ಸಿಬ್ಬಂದಿ ರಕ್ಷಣೆ
ಡೆಹ್ರಾಡೂನ್, ಏಪ್ರಿಲ್ 24: ಉತ್ತರಾಖಂಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಹಿಮಸ್ಫೋಟದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, 384 ಬಿಆರ್ಒ ಸಿಬ್ಬಂದಿಯನ್ನು ರಕ್ಷಣೆ ಮಾಡಿರುವುದಾಗಿ ತಿಳಿದುಬಂದಿದೆ. ಇನ್ನು ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಶುಕ್ರವಾರ ಸಂಜೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ- ಚೀನಾ ಗಡಿ ಸಮೀಪ ಹಿಮಸ್ಫೋಟ ಸಂಭವಿಸಿತ್ತು. ಈ ಕುರಿತು ಗಡಿ ಕಾರ್ಯಪಡೆಯ ಕರ್ನಲ್ ಮನೀಶ್ ಕಪಿಲ್ ಮಾಹಿತಿ ನೀಡಿದ್ದರು.
ಎರಡೂವರೆ ತಿಂಗಳ ನಂತರ ಉತ್ತರಾಖಂಡದ ಜೋಶಿಮಠದಲ್ಲಿ ಮತ್ತೆ ಹಿಮಸ್ಫೋಟ
ಹಿಮಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಜನವಸತಿ ಇರಲಿಲ್ಲ. ಐಟಿಬಿಪಿ ಹಾಗೂ ಬಿಆರ್ಒ ಸಿಬ್ಬಂದಿ ಮಾತ್ರ ಆ ಪ್ರದೇಶದಲ್ಲಿದ್ದರು ಎಂದು ತಿಳಿದುಬಂದಿತ್ತು. ಇದೀಗ ಅವಘಡದಲ್ಲಿ ಎಂಟು ಬಿಆರ್ಒ (ಬಾರ್ಡರ್ ರೋಡ್ ಆರ್ಗನೈಸೇಷನ್) ಸಿಬ್ಬಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅವರು ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಭಾರತೀಯ ಸೇನಾಪಡೆ ರಕ್ಷಣಾ ಕಾರ್ಯಚರಣೆ ನಡೆಸಿ, ನೀತಿ ಕಣಿವೆಯ ಸುಮ್ನಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಿದೆ. ಶನಿವಾರ ಆರು ಜನರ ಮೃತದೇಹಗಳು ಪತ್ತೆಯಾಗಿವೆ.
Recommended Video
ಇದೇ ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿ ಭಾರೀ ಹಿಮಸ್ಫೋಟ ಸಂಭವಿಸಿತ್ತು. ದುರ್ಘಟನೆಯಲ್ಲಿ 206 ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ 70 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. 29 ಜನರಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದು, ಉಳಿದಂತೆ 136 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿತ್ತು. ಎರಡೂವರೆ ತಿಂಗಳ ನಂತರ ಮತ್ತೆ ಹಿಮಸ್ಫೋಟವಾಗಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ.