ಕೊರೊನಾ ಎಫೆಕ್ಟ್: 320 ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಲು 18 ಎಸಿ ಬಸ್!
ಜೈಪುರ್, ಏಪ್ರಿಲ್.24: ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಭಾರತ ಲಾಕ್ ಡೌನ್ ಘೋಷಿಸಲಾಗಿದೆಯೇನೋ ನಿಜ. ಇದರಿಂದ ಊರು ಬಿಟ್ಟು ಊರಿಗೆ, ರಾಜ್ಯ ಬಿಟ್ಟು ರಾಜ್ಯಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳಿದ ವಿದ್ಯಾರ್ಥಿಗಳು ಮರಳಿ ಗೂಡು ಸೇರಿದ್ದಾರೆ.
ರಾಜಸ್ಥಾನದ ಕೋಟಾ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ 320ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರವು ದಿಟ್ಟ ಹೆಜ್ಜೆಯನ್ನು ಇರಿಸಿದೆ. ಗೂಡು ತೊರೆದ ವಿದ್ಯಾರ್ಥಿಗಳು ಶುಕ್ರವಾರ ಹೆತ್ತವರತ್ತ ಧಾವಿಸಿದ್ದಾರೆ.
ರಾಜಸ್ಥಾನದಲ್ಲಿ 2,000ರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಕಳೆದ ಏಪ್ರಿಲ್.21ರಂದು ವಿದ್ಯಾರ್ಥಿಗಳನ್ನು ಮರಳಿ ಗೂಡು ಸೇರಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದರು.
ರಾಜಸ್ಥಾನದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಬಗ್ಗೆ ಚರ್ಚೆ
ರಾಜಸ್ಥಾನದ ಕೋಟಾ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳು ಭಾರತ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಮನೆಗಳಿಗೆ ವಾಪಸ್ ತೆರಳಲಾಗದೇ ಪರದಾಡುತ್ತಿದ್ದರು. ಈ ಸಂಬಂಧ ಸಿಎಂ ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಚರ್ಚೆ ನಡೆಸಿದ್ದರು.
320 ವಿದ್ಯಾರ್ಥಿಗಳು ರಾಜಸ್ಥಾನದಿಂದ ಅಸ್ಸಾಂಗೆ ಶಿಫ್ಟ್
ಅಸ್ಸಾಂ ಸರ್ಕಾರವು ರಾಜಸ್ಥಾನದ ಕೋಟಾದಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದ 320ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳುವುದಕ್ಕಾಗಿ ಅಸ್ಸಾಂ ರಾಜ್ಯ ಸಾರಿಗೆ ನಿಗಮದ 18 ಹವಾನಿಯಂತ್ರಿತ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶುಕ್ರವಾರ ಹೊರಟ ಬಸ್ ಗಳು ಶನಿವಾರ ಅಥವಾ ಭಾನುವಾರ ಅಸ್ಸಾಂಗೆ ತಲುಪಲಿವೆ ಎಂದು ತಿಳಿದು ಬಂದಿದೆ.
ಬೇರೆ ರಾಜ್ಯಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು
ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಭಾರತ ಲಾಕ್ ಡೌನ್ ಘೋಷಿಸಲಾಗಿದ್ದು, ಇದರಿಂದ ಬೇರೆ ರಾಜ್ಯಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಬೇಕು ಎನ್ನುವ ಒತ್ತಾಯ ಹೆಚ್ಚಾಗಿತ್ತು. ಈ ಸಂಬಂಧ ಮಧ್ಯಪ್ರದೇಶ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಗುಜರಾತ್ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ರಾಜಸ್ಥಾನ ಮೂಲದ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಎಲ್ಲ ರಾಜ್ಯಗಳ ಸಿಎಂಗಳು ಭರವಸೆ ನೀಡಿದ್ದಾರೆ ಅಂತಾ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನ ಬೇರೆ ರಾಜ್ಯಗಳಿಗಿಂತ ಭಿನ್ನ ಎಂದ ಸಿಎಂ
ಭಾರತ ಲಾಕ್ ಡೌನ್ ನಿಂದ ಅತಿಹೆಚ್ಚು ಸಂಕಷ್ಟ ಅನುಭವಿಸುತ್ತಿರುವುದು ರಾಜಸ್ಥಾನ ಮೂಲದ ಜನರು. ಏಕೆಂದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದ ಜನರು ಅತಿಹೆಚ್ಚಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಕೆಲಸ ಮತ್ತು ವಿದ್ಯಾಭ್ಯಾಸಕ್ಕಾಗಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುತ್ತಾರೆ. ಈಗ ಲಾಕ್ ಡೌನ್ ನಿಂದ ಅಲ್ಲಿ ಇರಲು ಆಗದೇ ಇಲ್ಲಿಗೆ ವಾಪಸ್ ಬರುವುದಕ್ಕೂ ಆಗದೇ ಅವಸ್ಥೆ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ರಾಜಸ್ಥಾನಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಕೋಟಾದಿಂದ ವಲಸಿಗರನ್ನು ಕಳುಹಿಸಿಕೊಡಲು ವ್ಯವಸ್ಥೆ
ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ರಾಜಸ್ಥಾನದ ಕೋಟಾದಲ್ಲಿದ್ದ ತಮ್ಮ ರಾಜ್ಯದ ಜನರನ್ನು ವಾಪಸ್ ಕರೆಸಿಕೊಂಡಿದೆ. ಇದರ ಬೆನ್ನಲ್ಲೇ ಅಸ್ಸಾಂ, ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್ ಸರ್ಕಾರಗಳು ಕೋಟಾದಲ್ಲಿ ಇರುವ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋಟಾದಲ್ಲಿ ಇರುವ ಬೇರೆ ರಾಜ್ಯಗಳ ಸುಮಾರು 4,000 ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವುದಕ್ಕಾಗಿ 250ಕ್ಕೂ ಹಚ್ಚು ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದರು.