ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!
ನವದೆಹಲಿ, ಫೆಬ್ರವರಿ 02: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಬಲ ಪ್ರತಿಸ್ಪರ್ಧಿ ಹೌದೋ, ಅಲ್ಲವೋ ಗೊತ್ತಿಲ್ಲ.
ಆದರೆ ಮೋದಿ ಅವರನ್ನು ಎದುರಿಸಲು ಮೂವರು ಮಹಿಳೆಯರಂತೂ ಕಂಕಣಬದ್ಧರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮೋದಿ ಸರ್ಕಾರವನ್ನು ಕಿತ್ತೆಸೆಯಲೇ ಬೇಕು ಎಂದು ಈ ಮೂವರೂ ಮಹಿಳೆಯರು ಒಟ್ಟಾದರೆ ಮಾತ್ರ, ಮೋದಿಗೆ, ಬಿಜೆಪಿಗೆ ಕಂಟಕ ತಪ್ಪಿದ್ದಲ್ಲ.
'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!
ಇತ್ತೀಚೆಗಷ್ಟೇ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಪಡೆದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒಂದೆಡೆಯಾದರೆ, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಇನ್ನೊಂದೆಡೆ. ಈ ಮೂರು ಮಹಿಳೆಯರು 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಬಹುದೊಡ್ಡ ಕಂಟಕವಾಗಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಪ್ರಿಯಾಂಕಾ ಗಾಂಧಿ
ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಅಜ್ಜಿ ಇಂದಿರಾ ಗಾಂಧಿ ಅವರ ಪಡಿಯಚ್ಚಿನಂತಿರುವ ಇಂದಿರಾ ಗಾಂಧಿ ಅವರು ಈಗಾಗಲೇ ಹಲವು ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಂಡು ಅನುಭವ ಇರುವವರು. ಕಾಮಗ್ರೆಸ್ಸಿನ ಸ್ಟಾರ್ ನಾಯಕರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಪ್ರಿಯಾಂಕಾ ಚುನಾವಣೆಗೆ ಅಖಾಡಕ್ಕೆ ಧುಮುಕುತ್ತಿರುವುದು ಬಿಜೆಪಿಗೆ ಕೊಂಚ ನಡುಕ ಹುಟ್ಟಿಸಿದೆ ಎಂದರೆ ತಪ್ಪಾಗಲಾರದು.
ಯೋಗಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸಲಿ... ಕಾರ್ಯಕರ್ತರ ಒತ್ತಾಯ
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಸರಳತೆಯ ಮೂಲಕ ಪಶ್ಚಿಮ ಬಂಗಾಳ ಮಾತ್ರವಲ್ಲದೆ ಇಡೀ ದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.ಇತ್ತೀಚೆಗಷ್ಟೇ ವಿಪಕ್ಷಗಳ ಬೃಹತ್ ಸಮಾವೇಶ ನಡೆಸಿ, ಮಹಾಘಟಬಂಧನ ತಮ್ಮ ಬಿಗಿಮುಷ್ಠಿಯಲ್ಲೇ ಉಳಿಯುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡುತ್ತ ಬಂದಿದ್ದಾರೆ. ಪ-ಶ್ಚಿಮ ಬಂಗಾಳದಲ್ಲಿರುವ 42 ಲೋಕಸಭಾ ಕ್ಷೇತ್ರಗಳಲ್ಲಿ 22 ನ್ನು ಗೆಲ್ಲಲೇ ಬೇಕೆಂಬ ಬಿಜೆಪಿ ಗುರಿಗೆ ದೀದಿ ಮುಳುವಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಪಶ್ಚಿಮ ಬಂಗಾಳದಲ್ಲಿ 3 ರ್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!
ಮಾಯಾವತಿ
ಬಿಎಸ್ಪಿ ನಾಯಕಿ ಮಾಯಾವತಿ ಅವರಂತೂ ಎಂದಿಗೂ ರಾಜಕೀಯ ಲೆಕ್ಕಾಚಾರದೊಂದಿಗೇ ಪ್ರತಿ ಹೆಜ್ಜೆಯನ್ನೂ ಇಡುವವರು. ಈಗಾಗಲೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಮಾಯಾವತಿ, ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಲೋಕಸಭಾ ಚುನಾವಣೆಗೂ ಮುನ್ನ ಅಲ್ಲದಿದ್ದರೂ, ಚುನಾವಣೆ ಮುಗಿದ ಮೇಲೆ ಬಿಜೆಪಿಗೆ ಕಂಟಕವಾದರೆ ಅಚ್ಚರಿಯಿಲ್ಲ!
ಲಾಭವೂ ಆದೀತು ಬಿಜೆಪಿಗೆ!
ಎರಡು ಜಡೆ ಒಂದೆಡೆ ಸೇರಲ್ಲ ಅನ್ನೋ ಮಾತಿದೆ. ಅಕಸ್ಮಾತ್ ಮಹಾಘಟಬಂಧನದಲ್ಲಿ ಈ ಎಲ್ಲಾ ನಾಯಕಿಯರೂ ಒಂದಾದರೆ ಮುಂದೊಮ್ಮೆ ಪ್ರಧಾನಿ ಹುದ್ದೆಗಾಗಿ ಮಾಯಾವತಿ-ಮಮತಾ ನಡುವಲ್ಲಿ ಕಿತ್ತಾಟ ಆರಂಭವಾಗಬಹುದು. ಇದರಿಂದ ಬಿಜೆಪಿಗೆ ಲಾಭವಾಗಬಹುದು. ಆದರೆ ಕಾಂಗ್ರೆಸ್ಸಿಗಂತೂ ಪ್ರಿಯಾಂಗಾ ಗಾಂಧಿ ರಾಜಕೀಯ ಪ್ರವೇಶದ ಲಾಭವಾಗುವುದು ಖಂಡಿತ ಎಂಬ ಮಾತು ಕೇಳಿಬರುತ್ತಿದೆ.