ಪೌರತ್ವ ತಿದ್ದುಪಡಿ ಮಸೂದೆ: "ನಮ್ಮ ರಾಜ್ಯದಲ್ಲಿ ನಿಮ್ಮ ಆಟ ನಡೆಯಲ್ಲ"!
ದೆಹಲಿ, ಡಿಸೆಂಬರ್.12: ಕೇಂದ್ರ ಸರ್ಕಾರದ ಒಂದೇ ಒಂದು ತೀರ್ಮಾನಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆಯಿಂದ ಈಶಾನ್ಯ ರಾಜ್ಯಗಳೇ ಹೊತ್ತಿ ಉರಿಯುತ್ತಿವೆ. ಇದರ ಮಧ್ಯೆ ನೀವು ಏನಾದರೂ ಮಾಡಿಕೊಳ್ಳಿ, ನಮ್ಮ ರಾಜ್ಯಗಳಲ್ಲಿ ನಿಮ್ಮ ಆಟ ನಡೆಯೋದಿಲ್ಲ ಎಂದು ಕೇಂದ್ರಕ್ಕೆ ಮೂರು ರಾಜ್ಯಗಳು ಸವಾಲ್ ಹಾಕುತ್ತಿವೆ.
ಹೌದು, ಪಾಕಿಸ್ತಾನ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್ ದಿಂದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಭಾರತೀಯ ಪೌರತ್ವ ನೀಡಲು ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ದಕ್ಷಿಣ ಭಾರತದಲ್ಲೂ ಕೂಡಾ ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಭಾರತದಲ್ಲಿ ಮುಸ್ಲಿಂರ ವಿರುದ್ಧ ಹುನ್ನಾರ: ಇದು ಅಮೆರಿಕನ್ನರ ಮಾತು
ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ಸರ್ಕಾರಗಳು ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧಿಸಿವೆ. ಕೇಂದ್ರ ಸರ್ಕಾರದ ಅಸಂವಿಧಾನಿಕ ತಿದ್ದುಪಡಿಗೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
"ಜಾತ್ಯಾತೀತ ನಿಲುವಿದೆ ವಿರುದ್ಧ ತಿದ್ದುಪಡಿ"
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ, 2019 ದೇಶದ ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆರೋಪಿಸಿದ್ದಾರೆ. ದೇಶದ ಶ್ರೀಮಂತ ಸಂವಿಧಾನಕ್ಕೆ ಈ ತಿದ್ದುಪಡಿಯಿಂದ ಧಕ್ಕೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.
"ಪಂಜಾಬ್ ನಲ್ಲಿ ಕ್ಯಾಬ್ ಆಟ ನಡೆಯಲ್ಲ"
ಪೌರತ್ವ ತಿದ್ದುಪಡಿ ಮಸೂದೆಯನ್ನು ನಾವು ಒಪ್ಪಿಕೊಳ್ಳಲು ಆಗುವುದಿಲ್ಲ. ಪಂಜಾಬ್ ನಲ್ಲಿ ಕೇಂದ್ರ ಸರ್ಕಾರದ ತಿದ್ದುಪಡಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಟುವಾಗಿ ಕಿಡಿ ಕಾರಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ: ಬಿಜೆಪಿಯನ್ನು ಬೆಂಬಲಿಸಿದವರು ಯಾರು? ವಿರೋಧಿಸಿದವರು ಯಾರು?
ಅಸಂವಿಧಾನಿಕ ತಿದ್ದುಪಡಿ ಎಂದ ಪಿಣರಾಯಿ
ಇದಕ್ಕೂ ಮೊದಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ಅಸಂವಿಧಾನಿಕವಾಗಿದ್ದು, ಧರ್ಮವನ್ನೇ ಮಾನದಂತವಾಗಿ ಇಟ್ಟುಕೊಂಡು ವಲಸಿಗರಿಗೆ ದೇಶದ ಪೌರತ್ವವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸಂವಿಧಾನದ ಸಮಾನತೆ ಹಾಗೂ ಜಾತ್ಯಾತೀತ ನಿಲುವಿಗೆ ವಿರೋಧಿಯಾಗಿದೆ ಎಂದು ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.
ದಕ್ಷಿಣದಲ್ಲೂ ಹೊತ್ತಿಕೊಂಡಿತಾ ಪೌರತ್ವ ತಿದ್ದುಪಡಿಯ 'ಪಂಜು'?
ಬಿಜೆಪಿಗೂ ದೀದಿಗೂ ಎಣ್ಣೆ-ಸೀಗೆಕಾಯಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲಿನಿಂದಲೂ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ನಾಗರಿಕ ನೋಂದಣಿಗೂ ಅವಕಾಶ ನೀಡುವುದಿಲ್ಲ ಎಂದಿದ್ದ ದೀದಿ, ನಿಮ್ಮ ಆಟ ಪಶ್ಚಿಮ ಬಂಗಾಳದಲ್ಲಿ ನಡೆಯುವುದಿಲ್ಲ ಎಂದು ಬಹಿರಂಗವಾಗಿಯೇ ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದ್ದರು.