ಮಹಿಳೆ ಮೇಲೆ ಅತ್ಯಾಚಾರವೆಸಗಿ, 8ತಿಂಗಳ ಮಗುವನ್ನು ರಸ್ತೆಗೆಸೆದ ಕಾಮುಕರು
ಗುರ್ಗಾಂವ್, ಜೂನ್ 7: ಅದು ಮೇ 30ರ ಮುಂಜಾನೆ. ಗುರ್ಗಾಂವ್ ನ ಹಳದಿ ಮತ್ತು ನೇರಳೆ ಬಣ್ಣದ ಮೆಟ್ರೋ ಹತ್ತಿದವರು ಆಕೆಯನ್ನು ಕಂಡಿದ್ದರು. ಕೈಯಲ್ಲೊಂದು ಪುಟ್ಟ ಹಸುಗೂಸನ್ನು ಹಿಡಿದ 19 ತರುಣಿ ಆಕೆ. ಆಕೆಯ ಕೈಯಲ್ಲಿದ್ದ 8 ತಿಂಗಳ ಪುಟ್ಟ ಪಾಪು ಉಸಿರಾಟ ನಿಲ್ಲಿಸಿತ್ತು. ಅದರ ಶವ ಕಂಕುಳಲ್ಲಿಟ್ಟುಕೊಂಡೇ ಆಕೆ ಮೆಟ್ರೋ ನಿಲ್ದಾಣದಲ್ಲಿ ಅಲೆಯುತ್ತಿದ್ದಳು.
ಆಕೆ ತನ್ನ ಮೇಲೆ ಹಿಂದಿನ ರಾತ್ರಿ ನಡೆದ ಆಘಾತದಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ನೆರೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಮನೆಯಲ್ಲಿರಲು ಇಷ್ಟವಿಲ್ಲದೆ 'ಮನೆಸರ್'ನಿಂದ ಆಕೆ ಹಳೆ ಗುರ್ಗಾಂವ್ ನಲ್ಲಿರುವ ಮಾವನ ಮನೆಗೆ ಹೊರಟು ನಿಂತಿದ್ದಳು. ಇದಕ್ಕಾಗಿ ರಾತ್ರಿ ರಿಕ್ಷಾ ಹತ್ತಿದ್ದಳು.
ರಿಕ್ಷಾ ಹತ್ತಿದವಳಿಗೆ ಲೈಂಗಿಕ ಕಿರುಕುಳ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಚಾಲಕ ರಿಕ್ಷಾ ತಿರುಗಿಸಿ ನಿರ್ಜನ ಪ್ರದೇಶಕ್ಕೆ ರಿಕ್ಷಾವನ್ನು ಕೊಂಡೊಯ್ದ. ಅಲ್ಲಿ ಆಕೆಯ ಮೇಲೆ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಎರಗಿಸರು. ಈ ವೇಳೆ ಆಕೆಯ ಬಳಿಯಲ್ಲಿದ್ದ 8 ತಿಂಗಳ ಹಸುಗೂಸು ಅಳಲು ಆರಂಭಿಸಿತು. ಬಾಯಿ ಮುಚ್ಚಿ ಹಿಡಿದುಕೊಂಡು ಒಬ್ಬೊಬ್ಬರಾಗಿಯೇ ಮೇಲೆರಗಿದರು.
ಆದರೆ ಅಳು ನಿಲ್ಲಿಸದಾದಾಗ ತಮ್ಮ ಕೃತ್ಯ ಮುಗಿಸಿ ಹೋಗುತ್ತಿದ್ದ ಕಾಮುಕರು ಪುಟ್ಟ ಮಗುವನ್ನು ರಸ್ತೆಗೆಸೆದರು. ಡಿವೈಡರ್ ಗೆ ಮಗುವಿನ ತಲೆ ತಾಗಿ ರಕ್ತ ಸೋರುತ್ತಿತ್ತು. ರಾತ್ರಿ ಎರಡು ಗಂಟೆ ಹೊತ್ತಿಗೆ ನಿರ್ಜನ ಕರಿಗತ್ತಲಲ್ಲಿ ತನ್ನ ಮೇಲೆ ನಡೆದಿದ್ದ ಅಮಾನುಷ ಕೃತ್ಯಕ್ಕೆ ಆಕೆ ಬೆಚ್ಚಿ ಬಿದ್ದಿದ್ದಳು. ಜತೆಗೆ ತನ್ನ ಕಂದಮ್ಮನ ತಲೆಯಲ್ಲೂ ರಕ್ತ ಸೋರುತ್ತಿತ್ತು. ಆಕೆಯನ್ನು ರಕ್ಷಿಸುವವರು ಆ ರಾತ್ರಿ ಯಾರೂ ಇರಲಿಲ್ಲ.
ತಮ್ಮ ಕೃತ್ಯ ಮುಗಿಸಿ ದುಷ್ಕರ್ಮಿಗಳು ಹೊರಟು ಹೋದ ನಂತರ ಆಕೆ ನಿಸ್ತೇಜವಾಗ ಬಿದ್ದಿದ್ದ ಮಗುವನ್ನೆತ್ತಿಕೊಂಡು, ತನ್ನ ಮೇಲಿನ ದಾಳಿಯನ್ನು ಸಹಿಸಿಕೊಂಡು ಇಡೀ ರಾತ್ರಿ ಅಲ್ಲೇ ಕಳೆದಿದ್ದಳು. ಬೆಳಗ್ಗೆ ಆಕೆಗೆ ಆಟೋ ಸಿಕ್ಕಿತ್ತು. ಅಲ್ಲಿಂದ ಹಳೆ ಗುರ್ಗಾಂವ್ ಗೆ ತನ್ನ ಗಂಡನ ಮನೆಗೆ ಮರಳಿದಳು. ಅಲ್ಲಿ ವೈದ್ಯರು ಆಕೆಯ ಮಗು ಸತ್ತಿದೆ ಎಂದು ತಿಳಿಸಿದರು. ಆಕೆಗೆ ತಡೆಯಲಾಗಲಿಲ್ಲ. ತನ್ನ ಮಗು ಸತ್ತಿದೆ ಎಂಬ ಸುದ್ದಿ ಕೇಳಿ ಆಕೆಗೆ ಬರಸಿಡಿಲು ಬಡಿದಂತಾಯ್ತು.
ಅಲ್ಲಿಂದ ಆಕೆ ತನ್ನ ಮಾವನನ್ನು ಕಟ್ಟಿಕೊಂಡು ದೆಹಲಿಯ ತುಘ್ಲಕಾಬಾದ್ ಗೆ ಹೊರಟಳು; ಅಲ್ಲಿ ಆಕೆಯ ತಾಯಿ ಮೆನೆಯಿತ್ತು. ಮೆಟ್ರೋ ಹತ್ತಿದ ಆಕೆ ಕಂಕುಳಲ್ಲಿಟ್ಟುಕೊಂಡಿದ್ದ ಮಗುವನ್ನು ಮತ್ತೊಬ್ಬ ವೈದ್ಯರ ಬಳಿಗೆ ಕೊಂಡೊಯ್ದಳು. ಅವರೂ ಅದೇ ರೀತಿ ಮಗು ಸತ್ತಿದೆ ಎಂದು ಹೇಳಿದರು.
ಈ ಬಾರಿ ಮತ್ತೆ ಅದೇ ಸತ್ತ ಮಗುವಿನ ದೇಹವನ್ನು ಎದೆಗೊತ್ತಿಕೊಂಡು ಆಕೆ ಮತ್ತೆ ಗುರ್ಗಾಂವ್ ಗೆ ಮರಳಿದಳು. ಬಂದವಳೇ ಪೊಲೀಸ್ ಕೇಸು ದಾಖಲಿಸಿದರು. ಈ ಕುರಿತು ಇಲ್ಲಿನ ಮನೆಸಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ್ದ ಆಕೆಯ ಗಂಡ "ಘಟನೆಯಿಂದ ನನಗೆ ಶಾಕ್ ಆಗಿದೆ. ನನ್ನ ಮಗುವನ್ನು ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ. ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು," ಎಂದು ಒತ್ತಾಯಿಸಿದ್ದರು.
ಸದ್ಯ ಪೊಲೀಸರು ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ.