ವಿಭಜನೆ ನಂತರ ಕೊರೊನಾ ಎರಡನೇ ಅಲೆ ಅತ್ಯಂತ ಭೀಕರ ದುರಂತ; ವರದಿ
ನವದೆಹಲಿ, ಜುಲೈ 22: ವಿಭಜನೆ ನಂತರ ಕೊರೊನಾ ಎರಡನೇ ಅಲೆ ದೇಶದಲ್ಲಿನ ಅತ್ಯಂತ ಭೀಕರ ದುರಂತವಾಗಿದ್ದು, 49 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿಯೊಂದು ತಿಳಿಸಿದೆ. ಜೂನ್ 2021ರ ವೇಳೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯು ನಾಲ್ಕು ಲಕ್ಷವಾಗಿದೆ. ಈ ವಾಸ್ತವವೇ ದುರಂತವಾಗಿದೆ ಎಂದು ಜಾಗತಿಕ ಅಭಿವೃದ್ಧಿ ಕೇಂದ್ರ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಕೊರೊನಾ ಸಾಂಕ್ರಾಮಿಕದ ಸಂದರ್ಭ ಮರಣ ಪ್ರಮಾಣ ಹೆಚ್ಚಳಕ್ಕೆ ಮೂರು ಕಾರಣಗಳು" ಎಂಬ ಶೀರ್ಷಿಕೆಯುಳ್ಳ ವರದಿಯಲ್ಲಿ, ವಿಭಜನೆ ನಂತರ (1947) ಭಾರತ ಕಂಡ ದುರಂತವೆಂದರೆ ಕೊರೊನಾ ಎರಡನೇ ಅಲೆ ಎಂದು ತಿಳಿಸಲಾಗಿದೆ.
ವಾಷಿಂಗ್ಟನ್ ಮೂಲದ ಜಾಗತಿಕ ಅಭಿವೃದ್ಧಿ ಕೇಂದ್ರ ಈ ವರದಿಯನ್ನು ಸಿದ್ಧಪಡಿಸಿದ್ದು, ಭಾರತದ ನಿವೃತ್ತ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣಿಯನ್ ಇದರ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಭಿಷೇಕ್ ಆನಂದ್ ಹಾಗೂ ಜಾಗತಿಕ ಅಭಿವೃದ್ಧಿ ಕೇಂದ್ರದ ಜಸ್ಟಿನ್ ಸಂಡೆಫರ್ ಎಂಬುವರು ಈ ವರದಿ ಸಿದ್ಧಪಡಿಸಿದ್ದಾರೆ.
ಕೊರೊನಾ ಸೋಂಕಿನ ಕುರಿತು ನಡೆದ ಸೆರೋ ಸರ್ವೇ, ಮೂಲ ಮಾಹಿತಿ ಹಾಗೂ ಅಧೀಕೃತ ಮಾಹಿತಿಗಳನ್ನು ಆಧರಿಸಿ ವರದಿ ಸಿದ್ಧಗೊಂಡಿದೆ. ದೇಶದಲ್ಲಿ ವರದಿಯಾಗದೇ ಉಳಿದ ಕೊರೊನಾ ಸೋಂಕಿನಿಂದಾದ ಮರಣ ಪ್ರಮಾಣದ ಕುರಿತು ಈ ವರದಿ ಮಾಹಿತಿ ನೀಡಿದೆ. ಮರಣ ಪ್ರಮಾಣದ ಅಂದಾಜಿನಲ್ಲಿ ಸಾಕಷ್ಟು ಅನಿಶ್ಚಿತತೆ ಇದೆ ಎಂದು ಹೇಳಿದ್ದು, ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.
ಜನವರಿ 2020 ಮತ್ತು ಜೂನ್ 2021ರ ನಡುವೆ ನಿರೀಕ್ಷೆಗಿಂತ ಹೆಚ್ಚಾಗಿ 3.4 ರಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ಕೋವಿಡ್ ಸಾವುಗಳು 4 ಮಿಲಿಯನ್ ತಲುಪಿರಬಹುದು ಎಂದು ಸೂಚಿಸಿದೆ.
ಈ ವರದಿಯ ಅತ್ಯಂತ ನಿರ್ಣಾಯಕ ಅಂಶವೆಂದರೆ, ಮೂಲ ಹಾಗೂ ಅಂದಾಜುಗಳ ಮಾಹಿತಿ ಹೊರತಾಗಿಯೂ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಿಜವಾದ ಸಾವಿನ ಸಂಖ್ಯೆ ಅಧೀಕೃತವಾಗಿ ಪ್ರಕಟಿಸಿದ ಸಾವಿನ ಸಂಖ್ಯೆಗಿಂತ ಅತಿ ಹೆಚ್ಚಿದೆ ಎನ್ನುವುದು.
"ಕೊರೊನಾ ಮರಣ ಪ್ರಮಾಣ ನೂರು, ಸಾವಿರ ಮಟ್ಟದಲ್ಲಿಲ್ಲ. ಲಕ್ಷಾಂತ ಮಟ್ಟದಲ್ಲಿದೆ. ಇದು ವಿಭಜನೆ ನಂತರ ಭಾರತ ಕಂಡ ಅತಿ ಭೀಕರ ದುರಂತವಾಗಿದೆ" ಎಂದು ವರದಿ ಪ್ರತಿಪಾದಿಸಿದೆ.
ಕೋವಿಡ್19: ಜಾಗತಿಕವಾಗಿ ಯಾವ ದೇಶದಲ್ಲಿ ಎಷ್ಟು ಚೇತರಿಕೆ?
ಕಳೆದ ವರ್ಷ ಸೋಂಕಿನ ಮೊದಲ ಅಲೆಯ ಸಂದರ್ಭ ಕೊರೊನಾ ಕಾರಣದಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಕೊರೊನಾ ಮಾತ್ರವಲ್ಲದೇ ಸಾವಿರಾರು ಜನರು ಆಮ್ಲಜನಕ, ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ಹೇಳಿದೆ.
ಮಾರ್ಚ್ 2020 ರಿಂದ ಫೆಬ್ರವರಿ 2021 ರವರೆಗಿನ ಮೊದಲ ಅಲೆಯ ಸಂದರ್ಭ ಕೊರೊನಾ ದುರಂತದ ಪ್ರಮಾಣವನ್ನು ಗ್ರಹಿಸಲು ದೇಶದ ಅಸಮರ್ಥತೆ ಎರಡನೇ ಕೋವಿಡ್ ಅಲೆಯ ಭೀಕರತೆಗೆ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.
"ಈ ಅಧ್ಯಯನ, ಕೊರೊನಾದಿಂದ ಸಂಭವಿಸಿದ ಮರಣ ಪ್ರಮಾಣವನ್ನು ನೀಡುವ ಉದ್ದೇಶದ್ದಲ್ಲ. ಬದಲಾಗಿ ಪಾರದರ್ಶಕತೆಯ ಮಾಹಿತಿ ನೀಡುವುದು" ಎಂದು ಲೇಖಕರಾದ ಅಭಿಷೇಕ್ ಆನಂದ್, ಜಸ್ಟಿನ್ ಸ್ಯಾಂಡ್ಫೂರ್ ಮತ್ತು ಸುಬ್ರಮಣಿಯನ್ ಹೇಳಿದ್ದಾರೆ.