ಎ. ರಾಜಾಗೆ ಸಿಕ್ಕಿದ್ದು 3 ಸಾವಿರ ಕೋಟಿ ರು ಅಷ್ಟೇನಾ?
Recommended Video
ಬೆಂಗಳೂರು, ಡಿಸೆಂಬರ್ 21: ಬಹುದೊಡ್ಡ ಹಗರಣ ಎಂದೇ ಕುಖ್ಯಾತಿ ಗಳಿಸಿರುವ 2ಜಿ ತರಂಗ ಗುಚ್ಛ ಹಂಚಿಕೆ ಅವ್ಯವಹಾರದಿಂದ 1.76 ಲಕ್ಷ ಕೋಟಿ ನಷ್ಟ(CAG ವರದಿಯಂತೆ) ಎಂಬ ಮೊತ್ತ ಕೇಳಿ ಎಲ್ಲರೂ ಹುಬ್ಬೇರಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯದ ನಂತರ ಎರಡು ಕೇಸುಗಳನ್ನು ಕೈಗೆತ್ತಿಕೊಂಡ ಸಿಬಿಐ ತಂಡ ನೀಡಿದ ಮೊತ್ತ 30 ಸಾವಿರ ಕೋಟಿ ರು ಮಾತ್ರ.
ಈ ಎಲ್ಲಾ ಕಳ್ಳ ವ್ಯವಹಾರಗಳ ಸೂತ್ರಧಾರ ಕೇಂದ್ರದ ಮಾಜಿ ಸಚಿವ ಎ ರಾಜಾ ಅವರು ತಮ್ಮ ಜೇಬಿಗೆ ಎಷ್ಟು ಇಳಿಸಿಕೊಂಡರು. ಯಾವ ಯಾವ ಕಂಪನಿಗಳಿಗೆ ಲಾಭವಾಯಿತು ಎಂಬ ಕುತೂಹಲ ಇನ್ನೂ ಹಾಗೆ ಇದೆ.
ಸುಮಾರು 200 ಕೋಟಿ ರು ಹವಾಲಾ ಹಣವನ್ನು ಲಂಚ ರೂಪದಲ್ಲಿ ಬಳಸಲಾಗಿದೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಕನ್ನಿಮೋಳಿ ಅವರ ವಿರುದ್ಧ ಸಿಬಿಐ 2015ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಓ ಪಿ ಸೈನಿ ಅವರು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರದಂದು ಆದೇಶ ಹೊರಡಿಸುತ್ತಿದ್ದಂತೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕ ಎ. ರಾಜಾ, ಎಂ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.
2ಜಿ ಅನುಮತಿ ಕಟ್ ಆಫ್ ಡೇಟ್ ಅನ್ನು ಮುಂದೂಡಿಕೆ
2008 ಜನವರಿಯಲ್ಲಿ ರಾಜಾ ಅವರು 2ಜಿ ಅನುಮತಿ ಕಟ್ ಆಫ್ ಡೇಟ್ ಅನ್ನು ಮುಂದೂಡಿದ ಕಾರಣ ಎರಡು ಸಂಸ್ಥೆಗಳಿಂದ ಭಾರಿ ಮೊತ್ತ ಪಡೆದಿದ್ದರು. ಈ ಲಂಚದ ಮೊತ್ತ ಹಗರಣದ ಮೊತ್ತವಾದ 1.76 ಲಕ್ಷ ರೂ.ನಷ್ಟದ ಮೊತ್ತಕ್ಕೂ ಇದಕ್ಕೂ ಸಂಬಂಧವಿಲ್ಲ. ಕೇವಲ 40 ರಿಂದ 50 ಸಾವಿರ ಕೋಟಿ ರೂ.ಗಳ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ನಡೆದ ಅವ್ಯವಹಾರದಲ್ಲಿ ಬಂದ ದುಡ್ಡು ಎಂದು ವರದಿಯಲ್ಲಿ ಹೇಳಲಾಗಿದೆ.
ಎಲ್ಲಾ ಲೈಸನ್ಸ್ ರದ್ದು ಮಾಡಲಾಯಿತು
2008ರಲ್ಲಿ 122 ಲೈಸನ್ಸ್ ಗಳು ಹಂಚಿಕೆಯಾಗಿದ್ದು, ನಾರ್ವೆಯ ಟೆಲ್ನಾರ್ ಎಎಸ್ಎ, ಯುಎಇಯ ಎಟಿಸಲಾಟ್, ರಷ್ಯಾದ ಎಎಫ್ ಕೆ ಸಿಸ್ಟೆಮಾ ಕೂಡಾ ಫಲಾನುಭವಿಗಳಾಗಿವೆ. ಇದಲ್ಲದೆ ರಾಜಾ ಅವರಿಂದ ಸ್ವಾನ್ ಟೆಲಿಕಾಂ, ವಿಡಿಯೋಕಾನ್, ಎಸ್ ಟೆಲ್ ಹಾಗೂ ಏರ್ ಸೆಲ್ ಕಂಪನಿಗೂ ಲಾಭವಾಗಿತ್ತು. ನಂತರ ಎಲ್ಲಾ ಲೈಸನ್ಸ್ ರದ್ದು ಮಾಡಲಾಯಿತು.
ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ
2011ರ ಫೆಬ್ರವರಿಯಲ್ಲಿ ಬಂಧನಕ್ಕೊಳಪಟ್ಟು ನಂತರ ತಿಹಾರ್ ಜೈಲು ದರ್ಶನ ಮಾಡಿಕೊಂಡು ಬಂದ ಎ. ರಾಜಾ ಹಾಗೂ ಇತರೆ ಆರೋಪಿಗಳ ವಿರುದ್ಧ 2011ರ ನವೆಂಬರ್ ನಲ್ಲಿ ವಿಚಾರಣೆ ಆರಂಭವಾಯಿತು. 2017ರ ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಸೈನಿ ಅವರು ಎ.ರಾಜಾ ಸೇರಿ ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
2ಜಿ ಹಗರಣ ಆರೋಪ ಜತೆ ಇನ್ನಷ್ಟು
1996ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಎ ರಾಜಾ ಅವರು ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ, ಆರೋಗ್ಯ ಇಲಾಖೆ, ಟೆಲಿಕಾಂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅದರೆ, 2ಜಿ ಹಗರಣ ಆರೋಪದ ನಂತರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರಾಜಾ ಕೊರಳನ್ನು ಸುತ್ತಿಕೊಂಡಿದೆ. ಈಗ ಜಾರಿ ನಿರ್ದೇಶನಾಲಯ ಕೂಡಾ ಹೊಸದಾಗಿ ಮನಿಲಾಂಡ್ರಿಂಗ್ ಕೇಸಿನಲ್ಲಿ ರಾಜಾ ವಿರುದ್ಧ ಪ್ರಕರಣ ದಾಖಲಾಗಿತ್ತು.