24 ಗಂಟೆಯಲ್ಲಿ ಭಾರತದಲ್ಲಿ 28 ಸಾವಿರ ಹೊಸ ಕೋವಿಡ್ ಕೇಸು
ನವದೆಹಲಿ, ಜುಲೈ 12 : ಹೊಸ ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ಭಾರತ ದಾಖಲೆ ಬರೆದಿದೆ. ಒಂದೇ ದಿನ 28 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದೇಶದಲ್ಲಿ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 8,49,553ಕ್ಕೆ ಏರಿಕೆಯಾಗಿದೆ.
ಶನಿವಾರ ಬೆಳಗ್ಗೆ 8 ಗಂಟೆಯಿಂದ ಇದುವರೆಗೂ 28,637 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 24 ಗಂಟೆಗಳ ಅವಧಿಯಲ್ಲಿ 551 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿಟಿ ರವಿಗೆ ಕೊರೊನಾ ಪಾಸಿಟಿವ್!
ಒಂದೇ ದಿನದಲ್ಲಿ ಇಷ್ಟು ಹೊಸ ಪ್ರಕರಣ ದಾಖಲಾಗಲು ರಾಜ್ಯಗಳಲ್ಲಿ ಹೆಚ್ಚು ಪ್ರಕರಣ ದಾಖಲಾಗಿರುವುದೇ ಕಾರಣ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಕರ್ನಾಟಕ, ಅಸ್ಸಾಂ ಮತ್ತು ಬಿಹಾರದಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ.
ಗಾಂಧಿ ಬಜಾರ್ ವ್ಯಾಪಾರಿಗಳಿಂದ ಸ್ವಯಂ ಲಾಕ್ ಡೌನ್
ಇದುವರೆಗೂ ದೇಶದಲ್ಲಿ 22,674 ಜನರು ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದುವರೆಗೂ 5,34,621 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!
ಅಮಿತಾಬ್ಗೆ ಕೊರೊನಾ ಸೋಂಕು
ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮುಂಬೈನ ನಾನಾವತಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ, ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಅಮಿತಾಬ್ ಪುತ್ರ ಅಭಿಷೇಕ್ ಬಚ್ಚನ್ಗೆ ಸಹ ಕೊರೊನಾ ವೈರಸ್ ಸೋಂಕು ತಗುಲಿದೆ. ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವರದಿ ನೆಗೆಟಿವ್ ಬಂದಿದೆ.
ರಾಜಭವನದ ಸಿಬ್ಭಂದಿಗೂ ಸೋಂಕು
ಶನಿವಾರ ಮಹಾರಾಷ್ಟ್ರ ರಾಜ್ಯದಲ್ಲಿ 8,139 ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,46,600. ಮಹಾರಾಷ್ಟ್ರ ರಾಜಭವನದ 18 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.
ಒಂದೇ ದಿನದ ದಾಖಲೆ
ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,453ಕ್ಕೆ ಏರಿಕೆಯಾಗಿದೆ. ಶನಿವಾರ 1,344 ಹೊಸ ಪ್ರಕರಣ ದಾಖಲಾಗಿದೆ. ಒಂದೇ ದಿನ ಇಷ್ಟು ಪ್ರಕರಣ ದಾಖಲಾಗಿದ್ದು ಇದೇ ಮೊದಲು. ಶನಿವಾರ 26 ಜನರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 906ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಲಾಕ್ ಡೌನ್
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 36,216ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ ಒಂದೇ ದಿನ 1533 ಹೊಸ ಪ್ರಕರಣ ದಾಖಲಾಗಿದ್ದು, ನಗರದಲ್ಲಿನ ಸೋಂಕಿತರ ಸಂಖ್ಯೆ 16,862ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14 ರಿಂದ 23ರ ತನಕ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.