ಕೊರೊನಾ 3ನೇ ಅಲೆ ಭೀತಿ ನಡುವೆಯೂ ಪ್ರಯಾಣಕ್ಕೆ ಸಜ್ಜಾಗಿದ್ದಾರೆ ಇಷ್ಟೊಂದು ಮಂದಿ
ನವದೆಹಲಿ, ಜುಲೈ 26: ಭಾರತದಲ್ಲಿ ಇದೇ ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಪ್ರಭಾವ ಗೋಚರವಾಗಬಹುದು ಎಂದು ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ. ಇದರೊಂದಿಗೆ ಕೆಲವು ಸಂಗತಿಗಳು ಕೊರೊನಾ ಮೂರನೇ ಅಲೆಗೆ ಪ್ರಚೋದನೆ ನೀಡಲಿವೆ ಎಂದು ಎಚ್ಚರಿಕೆ ರವಾನಿಸಲಾಗಿದೆ.
ಕೊರೊನಾ ಮೂರನೇ ಅಲೆ ಆಗಸ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದು, ಅದೇ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳೂ ಆರಂಭವಾಗುವುದರಿಂದ ಸೋಂಕಿನ ಪ್ರಮಾಣ ಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ದೇಶದ ಸುಮಾರು 28% ಮಂದಿ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಎಚ್ಚರಿಕೆ ನೀಡಿದೆ.
ಕೊರೊನಾ ಸೆರೋಸರ್ವೇ; ಜನರ ಆರೋಗ್ಯಕ್ಕೆ ಕೇಂದ್ರ ಪ್ರಕಟಿಸಿದ 7 ಬಹುಮುಖ್ಯ ಅಂಶಗಳು
ಈಚೆಗಷ್ಟೆ ಸೆರೋ ಸರ್ವೇ ಫಲಿತಾಂಶ ಪ್ರಕಟಗೊಂಡಿದ್ದು, "ಕೊರೊನಾ ನಿಯಮಗಳನ್ನು ಮುರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೊರೊನಾ ಮೂರನೇ ಅಲೆಯಲ್ಲಿ ಜನಸಂಖ್ಯೆಯ 32% ಮಂದಿಗೆ ಸೋಂಕು ತಗುಲುವ ಭೀತಿ ಇದೆ. ಹೀಗಾಗಿ ಕೊರೊನಾ ನಿಯಮಗಳ ಪಾಲನೆಯಲ್ಲಿ ಯಾವುದೇ ಆಯ್ಕೆಯನ್ನು ತೆಗೆದುಕೊಳ್ಳಬೇಡಿ. ಅನವಶ್ಯಕ ಎಲ್ಲಿಗೂ ಪ್ರಯಾಣ ಬೆಳೆಸಬೇಡಿ" ಎಂದು ಎಚ್ಚರಿಕೆ ನೀಡಲಾಗಿತ್ತು. ಈ. ಸಲಹೆ ಬೆನ್ನಲ್ಲೇ ಸಮೀಕ್ಷೆ ನಡೆಸಲಾಗಿದ್ದು, ಹಲವು ಅಂಶಗಳನ್ನು ಉಲ್ಲೇಖಿಸಿದೆ. ಮುಂದೆ ಓದಿ...
28% ಮಂದಿ ಪ್ರಯಾಣಕ್ಕೆ ಸಜ್ಜಾಗಿದ್ದಾರೆ
ಆನ್ಲೈನ್ ವೇದಿಕೆ ಲೋಕಲ್ ಸರ್ಕಲ್ಸ್ "ಕೊರೊನಾ ಮೂರನೇ ಅಲೆ ಹಾಗೂ ಜನರ ಮನಸ್ಥಿತಿ" ಕುರಿತು ಸಮೀಕ್ಷೆ ಕೈಗೆತ್ತಿಕೊಂಡಿದ್ದು, ಕೊರೊನಾ ಮೂರನೇ ಅಲೆಯ ಎಚ್ಚರಿಕೆಯೊಂದಿಗೆ, ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿಯೇ ಅಂದಾಜು 28% ಜನರು ವಿವಿಧೆಡೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟಿದೆ.
63% ಜನರು ಪ್ರಯಾಣಕ್ಕೆ ಸಿದ್ಧರಿಲ್ಲ
311 ಜಿಲ್ಲೆಗಳ 18000 ಜನರ ಪ್ರತಿಕ್ರಿಯೆ ಮೂಲಕ ಸಮೀಕ್ಷೆ ಫಲಿತಾಂಶ ಕಂಡುಕೊಳ್ಳಲಾಗಿದೆ. ಇದರಲ್ಲಿ 68% ಪುರುಷರಿದ್ದು, ಇನ್ನುಳಿದವರು ಮಹಿಳೆಯರಾಗಿದ್ದರು. ಈ ಸಮೀಕ್ಷೆಯು, ಸುಮಾರು 28% ಮಂದಿ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯಾಣ ಕೈಗೊಳ್ಳಲು ಯೋಜನೆ ರೂಪಿಸಿದ್ದು, ಅದರಲ್ಲಿ 5% ಮಂದಿ ಈಗಾಗಲೇ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿಳಿಸಿದೆ. 9146 ಮಂದಿ, ಅಂದರೆ 63% ಜನರು ಈ ಎರಡು ತಿಂಗಳಿನಲ್ಲಿ ಯಾವುದೇ ಪ್ರಯಾಣ ಮಾಡಲು ತಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು 9% ಮಂದಿ ಈ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ. ಶೇಕಡಾವಾರು ಹೋಲಿಕೆಯಲ್ಲಿ ಪ್ರಯಾಣ ಮಾಡಲು ಯೋಜನೆ ರೂಪಿಸುತ್ತಿರುವವರ ಸಂಖ್ಯೆ ಕಡಿಮೆಯಿದ್ದರೂ, ಅವರಿಂದ ಸೋಂಕು ಹರಡುವ ಭೀತಿ ತಪ್ಪಿದ್ದಲ್ಲ.
ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಪರೀಕ್ಷೆ, ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ: ತಜ್ಞರು
ಪ್ರವಾಸಿ ತಾಣಗಳಿಗೆ ಹೆಚ್ಚಾಗುತ್ತಿದೆ ಬುಕ್ಕಿಂಗ್
ಭಾರತದ ಹಲವು ಕಡೆಗಳಲ್ಲಿ ಆಗಸ್ಟ್ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭಗೊಳ್ಳಲಿವೆ. ಆದ್ದರಿಂದ ಹಬ್ಬಗಳ ರಜಾ ದಿನದಂದು ಬೇರೆಡೆಗೆ ಹೋಗುವ ಯೋಜನೆಗಳನ್ನೂ ರೂಪಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರಯಾಣ ಹೋಗಲು ಬಯಸುವವರೂ ಹೆಚ್ಚಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಯಾವ ರೀತಿ ಪ್ರಯಾಣ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆಯನ್ನೂ ಸಮೀಕ್ಷೆಯ ಭಾಗವಾಗಿ ಕೇಳಲಾಗಿದ್ದು, 13% ಮಂದಿ ಪ್ರವಾಸಿ ತಾಣಗಳಿಗೆ ಹೋಗಲು ಯೋಜನೆ ರೂಪಿಸಿದ್ದರೆ, 39% ಮಂದಿ ಕುಟುಂಬ, ಸ್ನೇಹಿತರನ್ನು ಭೇಟಿ ಮಾಡಲು ತೆರಳುವುದಾಗಿ ತಿಳಿಸಿದ್ದಾರೆ. 22% ಮಂದಿ ಬೇರೆ ಬೇರೆ ಉದ್ದೇಶಗಳಿಗಾಗಿ ಪ್ರಯಾಣ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ
ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ ಜನರು ಜಾಗರೂಕವಾಗಿರಬೇಕು. ಯಾವುದೇ ಕಾರಣಕ್ಕೂ ಅನವಶ್ಯಕ ಪ್ರಯಾಣ ಕೈಗೊಳ್ಳಬಾರದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ. ಮತ್ತೊಂದು ಅಲೆಯ ಭೀತಿ ಎದುರಾಗಿರುವ ಈ ಸಮಯದಲ್ಲಿ ಜನರು ಆದಷ್ಟು ಎಲ್ಲಿಗೂ ಪ್ರಯಾಣ ಬೆಳೆಸದೇ ಇರುವುದು ಸೂಕ್ತ. ಅದರಲ್ಲೂ ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆಯದೇ ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದೆ.
ಜುಲೈ ಮೊದಲ ವಾರದಲ್ಲಿ ಹಲವು ರಾಜ್ಯಗಳು ಕೊರೊನಾ ನಿರ್ಬಂಧಗಳನ್ನು ಸಡಿಲಿಸಿದವು. ಆ ಬೆನ್ನಲ್ಲೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಯಿತು. ಪ್ರವಾಸಿ ತಾಣಗಳಿಗೆ ಸಾಗರದಂತೆ ಜನ ನುಗ್ಗಲು ಆರಂಭಿಸಿದರು. ಸ್ಥಳೀಯ ಮಾರುಕಟ್ಟೆಗಳದ್ದೂ ಇದೇ ಪರಿಸ್ಥಿತಿ. ಆದರೆ ಇದು ಉತ್ತಮ ಬೆಳವಣಿಗೆಯಲ್ಲ. ಅವಶ್ಯಕವಿಲ್ಲದ ಪ್ರಯಾಣಕ್ಕೆ ರಾಜ್ಯ ಸರ್ಕಾರಗಳು ಅವಕಾಶ ನೀಡಬಾರದು ಎಂದು ಸೂಚಿಸಿತ್ತು.