ಭಾರತದಲ್ಲಿ ಕೊರೊನಾ 2ನೇ ಅಲೆಯಲ್ಲಿ 269 ವೈದ್ಯರು ಸಾವು
ನವದೆಹಲಿ, ಮೇ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಭಾರತವು ನೂರಾರು ಮಂದಿ ವಾರಿಯರ್ಸ್ ಅನ್ನು ಕಳೆದುಕೊಂಡಿದೆ. ದೇಶದಲ್ಲಿ ಕೊವಿಡ್-19 ಸೋಂಕಿಗೆ 269ಕ್ಕೂ ಹೆಚ್ಚು ವೈದ್ಯರು ಪ್ರಾಣ ಬಿಟ್ಟಿದ್ದಾರೆ.
ದೇಶದಲ್ಲಿ ಪತ್ತೆ ಆಗಿರುವ ದತ್ತಾಂಶಗಳ ಪ್ರಕಾರ, ಬಿಹಾರದಲ್ಲಿ ಕೊರೊನಾವೈರಸ್ ಸೋಂಕಿನಿಂದ ಅತಿಹೆಚ್ಚು ವೈದ್ಯರು ಅಂದರೆ 78 ಮಂದಿ ಉಸಿರು ಚೆಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ಕೊವಿಡ್-19 ಮಹಾಮಾರಿಯಿಂದಾಗಿ 37 ವೈದ್ಯರು ಮೃತಪಟ್ಟಿದ್ದಾರೆ.
ಹೃದ್ರೋಗ ತಜ್ಞ ಡಾ. ಕೆ. ಕೆ. ಅಗರ್ವಾಲ್ ಕೋವಿಡ್ಗೆ ಬಲಿ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ವೈದ್ಯರು ಹಾಗೂ ಆಂಧ್ರ ಪ್ರದೇಶದಲ್ಲಿ 22 ವೈದ್ಯರು ಕೊರೊನಾವೈರಸ್ ಸೋಂಕಿನಿಂದಲೇ ಅಸುನೀಗಿದ್ದಾರೆ. ಈ ಪಟ್ಟಿಯಲ್ಲಿ ಐಎಂಎ ಮಾಜಿ ಅಧ್ಯಕ್ಷ ಹಾಗೂ ಹೃದ್ರೋಗ ತಜ್ಞ ಡಾ. ಕೆ ಕೆ ಅಗರ್ವಾಲ್ ಕೂಡ ಸೇರಿದ್ದಾರೆ.
2020ರಲ್ಲಿ 748 ವೈದ್ಯರು ಕೊರೊನಾಗೆ ಬಲಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆಯ ಸಂದರ್ಭದಲ್ಲೂ ನೂರಾರು ವೈದ್ಯರು ಪ್ರಾಣ ಬಿಟ್ಟಿದ್ದರು. 2020ರಲ್ಲಿ 748 ವೈದ್ಯರು ಕೊವಿಡ್-19 ಸೋಂಕಿನಿಂದ ಜೀವ ಕಳೆದುಕೊಂಡಿದ್ದರು, ಈ ಪೈಕಿ 431 ಮಂದಿ ತರಬೇತಿ ಹಂತದ ಸಿಬ್ಬಂದಿ ಆಗಿದ್ದಾರೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಕಳೆದ ಬಾರಿ ಇಡೀ ವರ್ಷ 748 ವೈದ್ಯರು ಕೊರೊನಾಗೆ ಬಲಿಯಾಗಿದ್ದರೆ, ಇದೀಗ ಎರಡನೇ ಅಲೆಯಲ್ಲಿ ಕಡಿಮೆ ಅವಧಿಯಲ್ಲೇ 270ಕ್ಕೂ ಹೆಚ್ಚು ವೈದ್ಯರು ಸಾವಿನ ಮನೆ ಸೇರಿದ್ದಾರೆ.
ಭಾರತದಲ್ಲಿ ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 4,329 ರೋಗಿಗಳು ಉಸಿರು ನಿಲ್ಲಿಸಿದ್ದು, ಸಾವಿನ ಸಂಖ್ಯೆ 2,78,719ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ 2,63,533 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,22,436 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.