ಪದ್ಮನಾಭಸ್ವಾಮಿ ದೇಗುಲದ 266 ಕೆ.ಜಿ. ಚಿನ್ನ ನಾಪತ್ತೆ
ತಿರುವನಂತಪುರಂ, ಫೆ. 14: ಕೇರಳದ ಪದ್ಮನಾಭ ಸ್ವಾಮಿ ದೇಗುಲದವು ಅಲ್ಲಿರುವ ಲಕ್ಷಾಂತರ ಕೋಟಿ ರು. ಮೌಲ್ಯದ ಚಿನ್ನಾಭರಣ ನಿಧಿಯ ಕಾರಣದಿಂದ ವಿಶ್ವಾದ್ಯಂತ ಮನೆ ಮಾತಾಗಿತ್ತು. ನಂತರ ಈ ನಿಧಿಯ ರಕ್ಷಣೆಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಇಲ್ಲಿ ಕ್ವಿಂಟಲ್ಗಟ್ಟಲೆ ಚಿನ್ನ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ದೇಶದ ಅತ್ಯಂತ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಬರೋಬ್ಬರಿ 266 ಕೆಜಿ ಚಿನ್ನ ಕಾಣೆಯಾಗಿದೆ. ಹೀಗೆಂದು ಮಾಜಿ ಮುಖ್ಯ ಸರ್ಕಾರಿ ಲೆಕ್ಕ ಪರಿಶೋಧಕ ವಿನೋದ್ ರಾಯ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. [ಪದ್ಮನಾಭ ಸ್ವಾಮಿ ಸಂಪತ್ತು 3ಡಿ ದೃಶ್ಯಗಳಲ್ಲಿ ದಾಖಲೆ]
ಇಷ್ಟು ಪ್ರಮಾಣದ ಚಿನ್ನ ನಾಪತ್ತೆಯಾಗಿರುವ ರೀತಿ ಇನ್ನೂ ಅಚ್ಚರಿ ತಂದಿದೆ. ವಿವಿಧ ಆಭರಣ ಮಾಡಲೆಂದು ಅಕ್ಕಸಾಲಿಗರಿಗೆ ನೀಡಿದ್ದ 893 ಕೆ.ಜಿ. ಚಿನ್ನದಲ್ಲಿ ದೇಗುಲಕ್ಕೆ ವಾಪಸ್ ಬಂದಿರುವುದು 627 ಕೆ.ಜಿ. ಚಿನ್ನ ಮಾತ್ರ! ಈ ವರದಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಯಾವ ಕ್ರಮಕ್ಕೆ ಮುಂದಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. [ಸುಪ್ರೀಂ ಕೋರ್ಟ್ ಖಡಕ್ ನಿರ್ಧಾರ]
ಹಿನ್ನೆಲೆ : ಪದ್ಮನಾಭಸ್ವಾಮಿ ದೇಗುಲದಲ್ಲಿ ಅಪಾರ ಪ್ರಮಾಣದ ನಿಧಿ ಇದೆ. ಆದರೆ, ದೇಗುಲದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಪರಿಶೀಲನೆಗೆ ಒಳಪಡಿಸಬೇಕೆಂದು ಕೋರಿ ಗೋಪಾಲ ಸುಬ್ರಮಣಿಯಮ್ ಎಂಬುವರು ಸುಪ್ರೀಂ ಕೋರ್ಟ್ನಲ್ಲಿ ಆಮಿಕಸ್ ಕ್ಯೂರಿ ಅರ್ಜಿ ಸಲ್ಲಿಸಿದ್ದರು. [ದೇಗುಲದಲ್ಲಿದೆ ಇನ್ನೂ 2 ಕೊಠಡಿ]
ಈ ಹಿನ್ನೆಲೆಯಲ್ಲಿ ನಿಧಿಯ ಲೆಕ್ಕ ಪರಿಶೋಧನೆಗೊಳಪಡಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು. ಈ ಕಾರ್ಯಕ್ಕಾಗಿ ಮಾಜಿ ಮುಖ್ಯ ಸರ್ಕಾರಿ ಲೆಕ್ಕ ಪರಿಶೋಧಕ ವಿನೋದ್ ರಾಯ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಐವರ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಓರ್ವ ನ್ಯಾಯಾಧೀಶ, ದೇಗುಲದ ತಂತ್ರಿ ಹಾಗೂ ಶ್ರೀ ಪದ್ಮನಾಭಸ್ವಾಮಿ ದೇಗುಲದ ಮುಖ್ಯ ನಂಬಿ ಸೇರಿದಂತೆ ಇತರ ಇಬ್ಬರು ಸದಸ್ಯರಿದ್ದರು. [ಬ್ಯಾಂಕ್ ನೆಲಮಾಳಿಕೆಯಲ್ಲಿ 4,600 ಟನ್ ಚಿನ್ನ]
ಈ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ದೇಗುಲದಲ್ಲಿ ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆಯಾಗಿತ್ತು. ಈ ನಿಧಿಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಶಸ್ತ್ರಸಜ್ಜಿತ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಇನ್ನಷ್ಟು ಕ್ರಮಗಳನ್ನು ಕೈಗೊಂಡಿತ್ತು.