2022ರ ವಿಧಾನಸಭಾ ಚುನಾವಣಾ ಯುದ್ಧಕ್ಕೆ ಈಗಲೇ ಸಜ್ಜಾಗುತ್ತಿದೆ ಬಿಜೆಪಿ
ನವದೆಹಲಿ, ಜೂ. 1: 2022ರಲ್ಲಿ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಮತ್ತು ಗುಜರಾತ್ ಸೇರಿದಂತೆ ಹಲವಾರು ವಿಧಾನಸಭಾ ಚುನಾವಣಾ ಯುದ್ದಕ್ಕೆ ಬಿಜೆಪಿ ಈಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಲು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕಳೆದ ವಾರಾಂತ್ಯದಲ್ಲಿ ಉತ್ತರಾಖಂಡ ಮತ್ತು ಸೋಮವಾರ ಉತ್ತರ ಪ್ರದೇಶಕ್ಕೆ ತೆರಳಿ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರಗಳು ಕೈಗೊಂಡ ಕಾರ್ಯಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
2022 ರ ಯುಪಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಬಿಜೆಪಿ, ಆರ್ಎಸ್ಎಸ್ ಸಭೆ - ಪಿಎಂ ಮೋದಿ ಭಾಗಿ
ಲಕ್ನೋದಲ್ಲಿ ಸಂತೋಷ್ ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಆ ಸಭೆಯಲ್ಲಿ ರಾಜ್ಯ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಮತ್ತು ಆರೋಗ್ಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿದೆ.
ಸೇವೆಯೇ ಸಂಘಟನೆ
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ ಗ್ರಾಮೀಣ ಪ್ರದೇಶದ ಸೇವೆಯೇ ಸಂಘಟನೆ ಕಾರ್ಯಕ್ರಮವನ್ನು ನಡೆಸುವ ವಿಧಾನಗಳನ್ನು ಗಮನಿಸುವುದು ಈ ಸಭೆಗಳ ಮುಖ್ಯ ಉದ್ದೇಶವಾಗಿದೆ. ಹಾಗೆಯೇ ಈ ಸಂದರ್ಭದಲ್ಲಿ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರಪ್ರದೇಶ ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆ?
ಇನ್ನು ಸಾಂಸ್ಥಿಕ ಪುನರ್ರಚನೆಯ ಬಗ್ಗೆಯೂ ಈ ಸಭೆಗಳಲ್ಲಿ ಚರ್ಚಿಸಬಹುದು ಎಂದು ಮೂಲಗಳು ತಿಳಿಸಿದೆ. ಆದರೆ ಇದು ಉತ್ತರಪ್ರದೇಶದ ಬಿಜೆಪಿ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಬದಲಾವಣೆಯೇ ಎಂಬುದನ್ನು ಖಚಿತಪಡಿಸಿಲ್ಲ. ಸ್ವತಂತ್ರ ದೇವ್ ಸಿಂಗ್ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂಜಿಪಿ
ಬಿಜೆಪಿ ಶಾಸಕರಲ್ಲಿ ಅಸಮಾಧಾನ
ಬಿಜೆಪಿ ಈಗಲೇ 2022 ರ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸಲು ಪಕ್ಷದೊಳಗಿನ ಬಿಕ್ಕಟ್ಟು ಕೂಡಾ ಕಾರಣ ಎಂದು ಹೇಳಲಾಗಿದೆ. ಪಕ್ಷದೊಳಗೆ ಹೆಚ್ಚಿನ ವೈಮನಸ್ಸು ಇದ್ದು, ಹಲವಾರು ಶಾಸಕರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಂಕ್ರಾಮಿಕ ಸಂದರ್ಭದ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಕೋವಿಡ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸಮಿತಿ ಪದಾಧಿಕಾರಿ ಹೇಳಿದ್ದೇನು?
"ಪಂಚಾಯತ್ ಚುನಾವಣೆಯ ನಂತರ, ಅನೇಕ ಜಿಲ್ಲಾ ಪರಿಷತ್ತುಗಳು, ಜಿಲ್ಲಾ ಮಟ್ಟದ ಸಂಸ್ಥೆಗಳ ಮುಖ್ಯಸ್ಥರನ್ನು ಇನ್ನೂ ಆಯ್ಕೆ ಮಾಡಿಲ್ಲ. ಆದ್ದರಿಂದ, ಪಕ್ಷವು ಜಿಲ್ಲೆಗಳಲ್ಲಿ ಖಾಲಿಯಿರುವ ಆ ಹುದ್ದೆಗೆ ಯಾರನ್ನು, ಹೇಗೆ ಆಯ್ಕೆ ಮಾಡುವುದು ಎಂಬುದರ ಬಗ್ಗೆ ಚರ್ಚಿಸಲಾಗಿದೆ" ಎಂದು ಉತ್ತರ ಪ್ರದೇಶದ ಬಿಜೆಪಿ ಸಮಿತಿ ಪದಾಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.
2022ರ ಚುನಾವಣೆಗೆ ಈಗಲೇ ಜತೆಗೂಡಿದ ಅಮರಿಂದರ್ ಸಿಂಗ್-ಪ್ರಶಾಂತ್ ಕಿಶೋರ್
ಶಾಸಕರ ಚಾಟಿ ಏಟು ಬೆನ್ನಲ್ಲೇ ಜೂನ್ 1 ರಿಂದ ಲಸಿಕೆ ಅಭಿಯಾನದಲ್ಲಿ ಹೆಚ್ಚಲಿದೆ ವೇಗ
ಶಾಸಕರು ಸ್ವಪಕ್ಷದ ಮುಖ್ಯಮಂತ್ರಿ ವಿರುದ್ದ ಚಾಟಿ ಬೀಸಿದ ಬೆನ್ನಲ್ಲೇ ಮುಂದಿನ ಚುನಾವಣೆ ಪರಿಣಾಮದ ದೃಷ್ಟಿಯಿಂದ ಎಚ್ಚೆತ್ತ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ಜೂನ್ 1 ರಿಂದ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ನಿರ್ಧರಿಸಿದೆ. ಜೂನ್ ಒಂದರಿಂದ ಹೆಚ್ಚಿನ ವೇಗ ಪಡೆದಿರುವ ಈ ಲಸಿಕೆ ಅಭಿಯಾನದ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಲು ಸ್ಥಳೀಯ ಮಟ್ಟದ ಬಿಜೆಪಿ ಕಾರ್ಯಕರ್ತರು ಮುತುವರ್ಜಿ ವಹಿಸುವಂತೆ ಪಕ್ಷವು ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ.
ಉತ್ತರಾಖಂಡದಲ್ಲಿ ರಾಜ್ಯದ ಪ್ರಮುಖ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಸಂತೋಷ್
ತಿರತ್ ಸಿಂಗ್ ರಾವತ್ ಬಳಿಕ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲನೇ ಬಾರಿಗೆ ಉತ್ತರಾಖಂಡದಲ್ಲಿ ರಾಜ್ಯದ ಪ್ರಮುಖ ಸಮಿತಿಯನ್ನುದ್ದೇಶಿಸಿ ಬಿ ಎಸ್ ಸಂತೋಷ್ ಮಾತನಾಡಿದರು. ಈ ಸಭೆಯಲ್ಲೂ ಸಾಂಕ್ರಾಮಿಕ ರೋಗದ ಎರಡನೇ ಅಲೆ ಎದುರಿಸಲು ಸಹಾಯ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಿಗೆ ಪಕ್ಷದ ಕಾರ್ಯಕರ್ತರು ತಲುಪಬೇಕು. ಅಲ್ಲಿನ ಪರಿಸ್ಥಿತಿ ಬಗ್ಗೆ ಗಮನ ವಹಿಸಬೇಕು. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ತಳಮಟ್ಟದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಪಿಎಂ ಮೋದಿ ಉಪಸ್ಥಿತಿಯಲ್ಲಿ ಯುಪಿಯಲ್ಲಿ ನಡೆದಿತ್ತು ಬಿಜೆಪಿ, ಆರ್ಎಸ್ಎಸ್ ಸಭೆ
ಉತ್ತರ ಪ್ರದೇಶದಲ್ಲಿ ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯು ಪಕ್ಷದ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕದ ಮಧ್ಯೆ 2022 ರ ವಿಧಾನಸಭಾ ಚುನಾವಣೆಗೆ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ವಾರದ ಹಿಂದೆ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಬಿಜೆಪಿ, ಆರ್ಎಸ್ಎಸ್ ಸಭೆ ನಡೆಸಿತ್ತು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಯುಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಜೊತೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಆರ್ಎಸ್ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಇದ್ದರು. ಹಾಗೆಯೇ ದತ್ತಾತ್ರೇಯ ಹೊಸಬಾಳೆ ಯುಪಿಗೆ ಭೇಟಿ ನೀಡಿದ್ದರು.
(ಒನ್ಇಂಡಿಯಾ ಸುದ್ದಿ)