2022 ರ ಚುನಾವಣೆ: ಯೋಧರ ಮೇಲೆ ಕಣ್ಣು, ಉತ್ತರಾಖಂಡ ರಾಹುಲ್ ರ್ಯಾಲಿಯಲ್ಲಿ ಬಿಪಿನ್ ಕಟ್-ಔಟ್
ಡೆಹ್ರಾಡೂನ್, ಡಿಸೆಂಬರ್, 16: ಮುಂದಿನ ವರ್ಷ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಈಗಾಗಲೇ ಎಲ್ಲಾ ಪಕ್ಷಗಳು ರ್ಯಾಲಿ, ಸಭೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎರಡೂ ಯೋಧರ ಮೇಲೆ ಗಮನ ಹರಿಸುತ್ತಿದೆ. ಹೌದು, ರಾಹುಲ್ ಗಾಂಧಿ ರ್ಯಾಲಿಯಲ್ಲಿ ಬಿಪಿನ್ ರಾವತ್ ಕಟ್ಔಟ್ ಕಾಣಿಸಿಕೊಂಡಿದೆ.
ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಗುರುವಾರ ಉತ್ತರಾಖಂಡದ ರಾಹುಲ್ ಗಾಂಧಿ ರ್ಯಾಲಿಯಲ್ಲಿ ಬಿಪಿನ್ ರಾವತ್ ಕಟ್ ಔಟ್ ಕಾಣಿಸಿಕೊಂಡಿದೆ. ಪ್ರಮುಖವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಕಟ್ ಔಟ್ ಜೊತೆಗೆ ಬಿಪಿನ್ ರಾವತ್ ಕಟ್ಔಟ್ ಕೂಡಾ ಕಾಣಿಸಿಕೊಂಡಿದೆ. ಇನ್ನು ಬಿಪಿನ್ ರಾವತ್ ಕಟ್ಔಟ್ ಗಾತ್ರವು ರಾಹುಲ್ ಗಾಂಧಿಯವರ ಕಟ್ಔಟ್ಗಿಂತ ದೊಡ್ಡದಾಗಿದೆ.
ಉತ್ತರಾಖಂಡ ಚುನಾವಣೆ; ಪ್ರಬಲ ಪೈಪೋಟಿ ನಡುವೆಯೂ ಬಿಜೆಪಿಗೆ ಜಯ!
ರಾಜ್ಯದ ಚುನಾವಣಾ ಕಣದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಮಾಜಿ ಸೈನಿಕರ ಕುಟುಂಬಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಬುಧವಾರದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡೆಹ್ರಾಡೂನ್ನಲ್ಲಿ ಯುದ್ಧ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿದರು. ಸ್ಮಾರಕದ ಪ್ರವೇಶ ದ್ವಾರಕ್ಕೆ ಜನರಲ್ ರಾವತ್ ಅವರ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷವು ಸುಮಾರು 200 ಹುತಾತ್ಮರ ಕುಟುಂಬಗಳಿಗೆ ಗೌರವ ಸಲ್ಲಿಸಿತು.
ಯೋಧರ ಮೇಲೆ ಕಾಂಗ್ರೆಸ್ ಕಣ್ಣು
ಕಾಂಗ್ರೆಸ್ ಕೂಡಾ ಯೋಧರ ಮೇಲೆ ಕಣ್ಣು ಇರಿಸಿದೆ. ರಾಹುಲ್ ಗಾಂಧಿಯವರ 'ವಿಜಯ್ ಸಮ್ಮಾನ್ ರ್ಯಾಲಿ'ಯಲ್ಲಿ ಸೈನಿಕರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಕಾಂಗ್ರೆಸ್ ಕೂಡ ಯೋಜಿಸಿದೆ. 1971 ರಲ್ಲಿ, ಇಂದಿರಾ ಗಾಂಧಿ ಅಂತಿಮವಾಗಿ ಪಾಕಿಸ್ತಾನವನ್ನು ಹತ್ತಿಕ್ಕುವ ಭಾರತೀಯ ಪಡೆಗಳಿಗೆ ಚಾಲನೆ ನೀಡಿದ್ದರು. ಇನ್ನು ಕಾಂಗ್ರೆಸ್ನ ಈ ಚುನಾವಣಾ ರ್ಯಾಲಿಯಲ್ಲಿ ಜನರಲ್ ರಾವತ್ ಅವರ ಕಟೌಟ್ಗಳನ್ನು ಏಕೆ ಹಾಕಲಾಗಿದೆ ಎಂದು ಕೇಳಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, "ಕಾಂಗ್ರೆಸ್ ಯೋಧರಿಗೆ ಗೌರವ ಸಲ್ಲಿಸುತ್ತದೆ," ಎಂದು ತಿಳಿಸಿದ್ದಾರೆ.
"ಜನರಲ್ ಬಿಪಿನ್ ರಾವತ್ ದೇಶದ ಹೆಮ್ಮೆ. ಅವರು ಉತ್ತರಾಖಂಡ ಮೂಲದವರು. ಜನರಲ್ ರಾವತ್ ಯಾವಾಗಲೂ ತಮ್ಮ ತವರು ರಾಜ್ಯದಲ್ಲಿ ಸಾಮಾಜಿಕ ಉದ್ದೇಶದ ಪರವಾಗಿ ಕೆಲಸ ಮಾಡಿದ್ದಾರೆ. ಈ ಕಟ್ಔಟ್ ಈ ಮಹಾನ್ ಯೋಧನಿಗೆ ನಾವು ಸಲ್ಲಿಸುವ ಗೌರವ ಆಗಿದೆ," ಎಂದು ಹೇಳಿದ್ದಾರೆ. ರ್ಯಾಲಿಗೆ ಮಾಜಿ ಯೋಧರನ್ನು ಕೂಡಾ ನಮ್ಮ ಪಕ್ಷ ಆಹ್ವಾನಿಸಿದೆ. ಇನ್ನು ಈ ಯೋಧರಿಗೆ ಗೋಡಿಯಾಲ್ ಹೂಮಾಲೆಯನ್ನು ಕೂಡಾ ಹಾಕಿದ್ದಾರೆ.
ಆದರೆ, ಆಡಳಿತಾರೂಢ ಬಿಜೆಪಿಯು ಕ್ಷುಲ್ಲಕ ಪಕ್ಷ ರಾಜಕಾರಣದಲ್ಲಿ ಜನರಲ್ ರಾವತ್ ಅವರನ್ನು 'ಎಳೆಯುತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ. "ಕಾಂಗ್ರೆಸ್ಗೆ ಸೈನಿಕರ ಮೇಲಿನ ಹಠಾತ್ ಪ್ರೀತಿ ಈ ಚುನಾವಣಾ ಕಾಲದಲ್ಲಿ ಏತಕ್ಕಾಗಿ ಎಂದು ಅರ್ಥವಾಗುತ್ತಿದೆ. ಅವರು ತಮ್ಮ ರಾಜಕೀಯದಿಂದ ಜನರಲ್ ರಾವತ್ ಹೆಸರನ್ನು ದೂರವಿಡಬೇಕಿತ್ತು," ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ವಿಪಿನ್ ಕೈಂತೋಳ ಅವರೇ ಹೇಳಿದ್ದಾರೆ.
ಉತ್ತರಾಖಂಡ್ನ 30 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಗೆ ಆಡಳಿತ ವಿರೋಧಿ ಅಲೆ
ಉತ್ತರಾಖಂಡದಲ್ಲಿ ಹೇಗಿದೆ ಬಿಜೆಪಿ ಸರ್ಕಾರ?
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಆದರೆ ಉತ್ತರಾಖಂಡ ಬಿಜೆಪಿಯಲ್ಲಿ ಕೊಂಚ ಬಿರುಕು ಕಾಣಿಸಿಕೊಂಡಂತೆ ಇದೆ. ಉತ್ತರಾಖಂಡದಲ್ಲಿ ನಿರಂತರವಾಗಿ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಿರುವ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸ್ಪರ್ಧೆ ಸಿಗಲಿದೆ ಎನ್ನಲಾಗಿದೆ. ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 70 ವಿಧಾನಸಭಾ ಕ್ಷೇತ್ರಗಳಲ್ಲಿ 30 ಕ್ಷೇತ್ರಗಳನ್ನು ಗುರುತಿಸಿದೆ. ಅಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ.
ಈ 30 ಕ್ಷೇತ್ರಗಳ ಪೈಕಿ 11 ಕಾಂಗ್ರೆಸ್ ಹಾಗೂ 19 ಕ್ಷೇತ್ರ ಬಿಜೆಪಿಗೆ ದಕ್ಕುವ ಸಾಧ್ಯತೆ ಇದೆ. ಸಮೀಕ್ಷೆಯೊಂದರ ಪ್ರಕಾರ, ಶೇ. 60 ರಷ್ಟು ಬಿಜೆಪಿ ಶಾಸಕರ ವಿರುದ್ಧ ಅಧಿಕಾರ ವಿರೋಧಿ ಅಲೆ ಇದೆ. ಕೇವಲ ಶೇ. 28 ರಷ್ಟು ಜನರು ಶಾಸಕರು ಈ ಪ್ರದೇಶದಲ್ಲಿ ವಿರೋಧಿ ಅಲೆ ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಶೇ 12 ರಷ್ಟು ಜನರು ಯಾವುದೇ ಉತ್ತರವನ್ನು ನೀಡಲಿಲ್ಲ. ಸಮೀಕ್ಷೆಯಲ್ಲಿ ಈ ಬಾರಿ ಟಿಕೆಟ್ ಹಂಚಿಕೆ ಬಿಜೆಪಿಗೆ ಅತ್ಯಂತ ಕಠಿಣ ನಿರ್ಧಾರವಾಗಲಿದೆ, ಏಕೆಂದರೆ ಶೇ 60ರಷ್ಟು ಶಾಸಕರು ಈ ಪ್ರದೇಶದಲ್ಲಿ ವಿರೋಧವನ್ನು ಹೊಂದಿದ್ದಾರೆ. (ಒನ್ಇಂಡಿಯಾ ಸುದ್ದಿ)
Recommended Video