2013ರಲ್ಲಿ ವಿವಾದ ಹುಟ್ಟು ಹಾಕಿದ ಹೇಳಿಕೆಗಳು!
ಬೆಂಗಳೂರು, ಡಿ.17 : 2013ನೇ ವರ್ಷ ವಿಶ್ವದ ಜನರಿಗೆ ವಿದಾಯ ಹೇಳಲು ಸಜ್ಜಾಗುತ್ತಿದೆ. ಹೊಸ ವರ್ಷ 2014ನ್ನು ಸ್ವಾಗತಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದರೆ ಕಳೆದ ವರ್ಷಗಳಲ್ಲಿ ಏನಾಯ್ತ? ಒಮ್ಮೆ ತಿರುಗಿ 2013ರನ್ನ ನೋಡಿದರೆ ವಿವಾದ, ವಿಷಾದ, ವಿಶೇಷ ಕಾಣುತ್ತದೆ.
ಪ್ರತಿ ವರ್ಷದಂತೆ 2013 ಸಹ ವಿವಾದಗಳಿಂದ ಹೊರತಾಗಿರಲಿಲ್ಲ. ಜನರಿಂದ ಆರಿಸಿ ಬಂದ ಜನಪ್ರತಿನಿಧಿಗಳು ತಮ್ಮ ಮಾತಿನ ಮಲ್ಲ ಯುದ್ಧದ ಮೂಲಕ ವಿರೋಧಿಗಳನ್ನು ಟೀಕಿಸಲು ಹೋಗಿ ತಾವು ಅಪಹಾಸ್ಯಕ್ಕೀಡಾದರು. ವಿರೋಧಿಗಳ ಹೇಳಿಕೆಗೆ ಖಡಕ್ ಉತ್ತರ ನೀಡಲು ಹೋಗಿ ಕೆಲವರು ಭಾರೀ ಚರ್ಚೆಗೆ ಗ್ರಾಸವಾದರು.
ಕರ್ನಾಟಕವೂ ಸೇರಿದಂತೆ ದೇಶದದಲ್ಲಿ 2013ರಲ್ಲಿ ರಾಜಕಾರಣಿಗಳು ಮತ್ತು ಸಮಾಜದ ಉನ್ನತ ಹುದ್ದೆಯಲ್ಲಿರುವ ಜನರು ತಮ್ಮ ಮಾತಿನ ಮೂಲಕ ಚರ್ಚೆ ಹುಟ್ಟು ಹಾಕಿದರು, ವಿವಾದಕ್ಕೆ ಕಾರಣರಾದರು. ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಕಲಾಪದ ವೇಳೆಯಲ್ಲಿಯೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಕಿತ್ತಾಡಿಕೊಂಡರು.
ಭ್ರಷ್ಟ ರಾಜಕಾರಣಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿ ಎಂದು ಹೇಳುವ ಮೂಲದ ನಿವೃತ್ತಿ ಡಿಜಿಪಿ ಶಂಕರ ಬಿದರಿ ಕರ್ನಾಟಕದ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದರು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನ ಕೆಲವು ನಾಯಕರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಕಟು ಶಬ್ದಗಳನ್ನು ಬಳಸಿದರು. 2013ರಲ್ಲಿ ಭಾರೀ ಚರ್ಚೆಗೆ ಕಾರಣವಾದ ಕರ್ನಾಟಕ ಮತ್ತು ದೇಶದ ಹೇಳಿಕೆಗಳು ಇಲ್ಲಿವೆ.
ರಾಹುಲ್ ಗಾಂಧಿ ಕ್ಲರ್ಕ್ ಆಗಲೂ ಅನರ್ಹ
ಫೆ.15ರಂದು ಮಡಿಕೇರಿ ಪ್ರವಾಸಕ್ಕೆಂದು ಆಗಮಿಸಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾತಿನ ಚಾಟಿ ಬೀಸಿದ್ದರು. ರಾಹುಲ್ ಗಾಂಧಿಯನ್ನು ನನ್ನ ಕಚೇರಿಯ ಕ್ಲರ್ಕ್ ಆಗಿಯೂ ಇಟ್ಟುಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದ್ದ ಅವರು, ಅಂತಹವರನ್ನು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದೆ ಎಂದು ಕುಹಕವಾಡಿದ್ದರು.
ಸಕ್ಕರೆ ಸಚಿವರ ಕಹಿ ಮಾತು
ಕಬ್ಬಿಗೆ ಬೆಂಬಲ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತ ವಿಷ ಕುಡಿದು ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಸಕ್ಕರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ಹುಕ್ಕೇರಿ "ನಾನು ರಾಜೀಮೆ ನೀಡಿದರೆ, ಕಬ್ಬು ಬೆಳೆಗಾರ ಬದುಕಿ ಬರುತ್ತಾನೆಯೇ ಎಂದು ಪ್ರಶ್ನಿಸಿ" ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ನಮ್ಮ ಜೊತೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಿತ್ತು!
"ನಮ್ಮನ್ನು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡಿದ್ದರೆ ನಿಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿಯೇ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ನಾವಿಬ್ಬರು ಕೋರ್ಟ್, ಕೇಸ್ ಎಂದು ಅಲೆಯುತ್ತಿದ್ದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದಿದ್ದಾರೆ. ನೀವು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡಿದ್ದರೆ, ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು.
ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಸರಿಯಿಲ್ಲ
ನವಹೆದಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ, ಆಗ ದೆಹಲಿ ಮುಖ್ಯಮಂತ್ರಿಗಾದಿಯ ಮೇಲೆ ಕುಳಿತಿದ್ದ ಶೀಳಾ ದೀಕ್ಷಿತ್ ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಸರಿಯಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ದೇಶಾದ್ಯಂತ ಸಿಎಂ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಶಂಕರ ಬಿದರಿ ಗುಂಡೇಟು
ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆ ಕರ್ನಾಟಕದಲ್ಲಿ ಭಾರೀ ಸಂಚಲನ ಹುಟ್ಟಿಸಿತ್ತು. ಪಕ್ಷಾತೀತವಾಗಿ ವಿವಿಧ ರಾಜಕೀಯ ಪಕ್ಷಗಳು ಬಿದರಿ ಹೇಳಿಕೆಗೆ ಮರಳಿ ತಿರುಗೇಟು ನೀಡಿದ್ದವು. ನಿವೃತ್ತ ಡಿಜಿಪಿ ಶಂಕರ ಬಿದರಿ ಇಂತಹ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದವು.
ರಾಹುಲ್ ಗಾಂಧಿ ನೀಡಿದ ಐಎಸ್ಐ ನಂಟು ಹೇಳಿಕೆ
ಉತ್ತರ ಪ್ರದೇಶದ ಮುಜಾಫರನಗರ ಸಂತ್ರಸ್ತರ ಜೊತೆ ಪಾಕಿಸ್ತಾನದ ಐಎಸ್ಐ ಏಜೆಂಟರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ಭಾರೀ ವಿವಾದ ಹುಟ್ಟುಹಾಕಿದ್ದಲ್ಲದೇ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ದೂರು ಸಹ ದಾಖಲಾಗಿತ್ತು. ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ನಡೆಸುವಾಗ ಇಂತಹ ಹೇಳಿಕೆ ನೀಡಿದ್ದರು.
ದೇವಮಾನವನ ಕಿರಿಕ್ ಹೇಳಿಕೆ
ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ನವದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಾಗ, ಅತ್ಯಾಚಾರ ನಡೆಸಲು ಬಂದವರನ್ನು ಅಣ್ಣಾ ಎಂದು ಕರೆಯಿರಿ ಎಂದು ಬಾಪು ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು. ತಮ್ಮ ಹೇಳಿಕೆಗೆ ಸಮರ್ಥನೆ ಸಹ ನೀಡಿದ್ದರು.
ನಾನು ಅರ್ಜಿ ಹಾಕಿ ಕುರುಬನಾಗಿಲ್ಲ
ಕರ್ನಾಟಕ ಸಿಎಂ ಸಿದ್ದರಾಮಯ್ಯ ಜಾತಿ ವ್ಯವಸ್ಥೆ ಹೋಗಲಾಡಿಸುವ ಕುರಿತ ಸಂವಾದದಲ್ಲಿ ನಾನು ಅರ್ಜಿಹಾಕಿ ಕುರುಬನಾಗಿಲ್ಲ ಎಂದು ಹೇಳಿಕೆ ನೀಡಿದ್ದು. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಸಿಎಂ ಇಂತಹ ಹೇಳಿಕೆ ನೀಡಿದ್ದು, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಮೋದಿಯ ರಕ್ತ ಸಿಕ್ತ ಹಸ್ತ ಹೇಳಿಕೆ
ಛತ್ತಿಸ್ ಗಢ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತನ್ನು "ರಕ್ತ ಸಿಕ್ತ ಹಸ್ತ" ಎಂದು ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದ ಹುಟ್ಟುಹಾಕಿತ್ತು. ಈ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿ, ಚುನಾವಣಾ ಆಯೋಗ ಮೋದಿ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಮೂತ್ರ ಮಾಡಿ ಡ್ಯಾಂ ತುಂಬಿಸೋದಾ?
ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡುತ್ತಾ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಮೂತ್ರ ಮಾಡಿ ಡ್ಯಾಂ ತುಂಬಿಸೋಕೆ ಸಾಧ್ಯನಾ? ಎಂದು ಪ್ರಶ್ನಿಸುವ ಮೂಲಕ ಭಾರೀ ವಿವಾದ ಹುಟ್ಟುಹಾಕಿದ್ದರು. ವಿವಿಧ ಪಕ್ಷಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು.
ಕೆಎಸ್ ಈಶ್ವರಪ್ಪ ಲವ್ ಜಿಹಾದ ಹೇಳಿಕೆ
ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ "ಕಳೆದ ಐದು ವರ್ಷಗಳಲ್ಲಿ ಶಿವಮೊಗ್ಗ ನಗರವೊಂದರಲ್ಲೇ ನಿರ್ದಿಷ್ಟ ಸಮುದಾಯವೊಂದರ 68 ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ ಅಪಹರಿಸಲಾಗಿದೆ" ಎಂದು ಹೇಳಿಕೆ ನೀಡಿದ್ದರು. ಈ ಪ್ರಕರಣ ಭಾರೀ ವಿವಾದ ಹುಟ್ಟುಹಾಕಿತ್ತು. ಇದರ ಬಗ್ಗೆ ಈಗಲೂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಖೇಣಿ ಒಬ್ಬ ಇಂಟರ್ ನ್ಯಾಷನಲ್ ಫ್ರಾಡ್
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ದ ಕೆಲವು ದಿನಗಳ ಹಿಂದೆ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ "ಅಶೋಕ್ ಖೇಣಿ ಒಬ್ಬ ಇಂಟರ್ ನ್ಯಾಷನಲ್ ಫ್ರಾಡ್" ಎಂದು ಹೇಳಿಕೆ ನೀಡಿದ್ದರು.
ಕ್ಷಮೆ ಯಾಚಿಸಿದ ಸಿಬಿಐ ನಿರ್ದೇಶಕ
ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ "ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ದರೆ, ಅದನ್ನು ಅನುಭವಿಸಿ" ಎಂದು ಹೇಳುವ ಮೂಲಕ ಭಾರೀ ವಿವಾದ ಹುಟ್ಟುಹಾಕಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದಾಗ ಕ್ಷಮೆ ಯಾಚಿಸುವ ಮೂಲಕ ವಿವಾದಕ್ಕೆ ತಣ್ಣೀರು ಸುರಿದಿದ್ದರು.
ಮೋದಿ ವಿರುದ್ಧ ಅಮರ್ತ್ಯ ಸೇನ್
"ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯು ಪ್ರಧಾನಿಯಾಗುವುದನ್ನು ನೋಡಬಯಸುವುದಿಲ್ಲ" ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್ ನೀಡಿದ ಹೇಳಿಕೆಯ ವಿವಾದ ಹುಟ್ಟು ಹಾಕಿತ್ತು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದರು.
ಮೋದಿ ಬೆಂಬಲಿಗರನ್ನು ಕೆಣಕಿದ ಅನಂತಮೂರ್ತಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿದ್ದರು. ಮೋದಿ ಅಧಿಕಾರ ಪಡೆದರೆ ನಮ್ಮ ಕನಸಿನ ಭಾರತ ನೋಡಲು ಸಾಧ್ಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಕರ್ನಾಟಕದಲ್ಲಿರುವ ಮೋದಿ ಬೆಂಬಲಿಗರನ್ನು ಕೆಣಕ್ಕಿತ್ತು.
ಅನಂತಮೂರ್ತಿ ಪೂನಂ ಪಾಂಡೆ
ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲಾರೆ ಎಂದಿರುವ ಜ್ಞಾನಪೀಠ ಸಾಹಿತಿ ಡಾ. ಯುಆರ್ ಅನಂತಮೂರ್ತಿ 'ಕರ್ನಾಟಕದ ಪೂನಂ ಪಾಂಡೆ' ಎಂದು ಬಿಜೆಪಿಯ ವಕ್ತಾರ ಆಯನೂರು ಮಂಜುನಾಥ್ ಬಣ್ಣಿಸಿ, ಸಾಹಿತಿಗಳ ವಿರೋಧ ಕಟ್ಟಿಕೊಂಡಿದ್ದರು. ಪ್ರಚಾರಪ್ರಿಯ ಅನಂತಮೂರ್ತಿ ಅವರು ಒಬ್ಬ ಅವಕಾಶವಾದಿ, ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ ಎಂದು ಟೀಕಿಸಿದ್ದರು.