ಜಪಾನಿನ ಹಡಗಿನಲ್ಲಿ ಸಿಲುಕಿರುವ 200 ಭಾರತೀಯರಿಗೆ ಕೊರೊನಾ ವೈರಸ್ ಭೀತಿ
ನವದೆಹಲಿ, ಫೆಬ್ರವರಿ 8: ಕೊರೊನಾ ವೈರಸ್ ಭೀತಿ ಜಪಾನ್ನಲ್ಲಿಯೂ ತೀವ್ರವಾಗಿದ್ದು, 200ಕ್ಕೂ ಹೆಚ್ಚು ಭಾರತೀಯರೂ ಸೇರಿದಂತೆ ಸುಮಾರು 3,700 ಮಂದಿ ಜಪಾನಿನ ಯೊಕೊಹಮಾ ಬಂದರಿನ ಐಷಾರಾಮಿ ಹಡಗಿನಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ 64 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಯೊಕೊಹಮಾ ಬಂದರಿನ ಸಮೀಪದಲ್ಲಿ ಐಷಾರಾಮಿ ಹಡಗಿನಲ್ಲಿ 3700ಕ್ಕೂ ಹೆಚ್ಚು ಮಂದಿಯಿದ್ದು, ಇದರಲ್ಲಿ 200ಕ್ಕೂ ಅಧಿಕ ಪ್ರಯಾಣಿಕರು ಮತ್ತು ಹಡಗಿನ ಸಿಬ್ಬಂದಿ ಭಾರತೀಯರಾಗಿದ್ದಾರೆ. ಕೊರೊನಾ ವೈರಸ್ ಅವರಲ್ಲಿ ತೀವ್ರ ದಿಗಿಲು ಮೂಡಿಸಿದೆ. ಅದೃಷ್ಟವಶಾತ್ ಭಾರತದ ಯಾವ ಪ್ರಯಾಣಿಕರಲ್ಲಿಯೂ ಸೋಂಕು ಪತ್ತೆಯಾಗಿಲ್ಲ.
ಕೊರೊನಾ ವೈರಸ್ ಭೀತಿ: ಸಂಕಷ್ಟದಲ್ಲಿ ಸಿಲುಕಿದ ಕಾರವಾರದ ಯುವಕ
ಡೈಮಂಡ್ ಪ್ರಿನ್ಸೆಸ್ ಎಂಬ ಐಷಾರಾಮಿ ಹಡಗಿನಲ್ಲಿ 3,700ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸೋಮವಾರ ಸಂಜೆ ಹಡಗು ಜಪಾನ್ ಕರಾವಳಿ ತಲುಪಿತ್ತು. ಗುರುವಾರ ಅದನ್ನು ಯೊಕೊಹಮಾದಲ್ಲಿ ನಿಲ್ಲಿಸಲಾಗಿದ್ದು, ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಪ್ರತ್ಯೇಕಿಸಲಾಗುತ್ತಿದೆ. ಈ ಪ್ರಕ್ರಿಯೆ ಫೆ. 19ರವರೆಗೂ ನಡೆಯಲಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಹವಾಲು
ಹಡಗಿನಲ್ಲಿರುವ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಶುಕ್ರವಾರ ಸಮಾಜಿಕ ಜಾಲತಾಣಗಳ ಮೂಲಕ ಸಂದೇಶ ಹಂಚಿಕೊಂಡಿದ್ದು, ಸೋಂಕು ತಗುಲದೆ ಇರುವ ವ್ಯಕ್ತಿಗಳನ್ನು ಸೋಂಕು ತಗುಲಿದವರಿಂದ ಪ್ರತ್ಯೇಕವಾಗಿ ಇರಿಸಲು ಜಪಾನ್ ಸರ್ಕಾರಕ್ಕೆ ತಿಳಿಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋರಿದ್ದಾರೆ.
ನಮ್ಮನ್ನೂ ರಕ್ಷಿಸಿ
ಕೊರೊನಾ ವೈರಸ್ ಸೋಂಕಿನ ಮೂಲ ಕೇಂದ್ರವಾದ ವುಹಾನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದಂತೆಯೇ ಜಪಾನ್ನ ಹಡಗಿನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನೂ ರಕ್ಷಿಸಲು ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಡಗಿನಲ್ಲಿ ಸುಮಾರು 200 ಭಾರತೀಯರಿದ್ದು, ಯಾರಲ್ಲಿಯೂ ಇದುವರೆಗೆ ಸೋಂಕು ಪತ್ತೆಯಾಗಿಲ್ಲ. ಆದರೂ ಅಲ್ಲಿ ಭಯದಿಂದಲೇ ಎಲ್ಲರೂ ಬದುಕುವಂತಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಹರಡಲು ಪ್ಯಾಂಗೋಲಿನ್ ಕಾರಣ?
ಆರು ಮಂದಿಗೆ ಸೋಂಕು ದೃಢ
ಹಡಗಿನಲ್ಲಿದ್ದವರಲ್ಲಿ 280 ಮಂದಿಯನ್ನು ಇದುವರೆಗೂ ಪರೀಕ್ಷಿಸಲಾಗಿದೆ. ಅವರಲ್ಲಿ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಪಾನ್ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರು ಯಾವ ದೇಶದ ಪ್ರಜೆಗಳನ್ನು ಎಂಬ ಮಾಹಿತಿ ನೀಡಿಲ್ಲ.
ವಯಸ್ಸಾದವರು ಹೆಚ್ಚಿರುವುದರಿಂದ ಅಪಾಯ
ಹಡಗಿನಲ್ಲಿರುವ ಹೆಚ್ಚಿನವರು ವಯಸ್ಕರಾಗಿರುವುರಿಂದ ಅವರಿಗೆ ಸೋಂಕು ತಗುಲುವ ಅಪಾಯ ಹೆಚ್ಚಿದೆ. ವೈರಸ್ ಪತ್ತೆಯಾಗಿರುವವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ವೈರಸ್ ತಗುಲಿರುವ ಲಕ್ಷಣಗಳು ಕಂಡುಬಂದವರನ್ನು ಆರಂಭದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಉಳಿದವರಲ್ಲಿ ಸೋಂಕು ಇಲ್ಲದಿರುವುದು ಕಂಡುಬಂದರೂ ಅವರ ಮೇಲೆ ನಿಗಾ ಇರಿಸುವ ಸಲುವಾಗಿ ಪ್ರತ್ಯೇಕಿಸಲಾಗುತ್ತಿದೆ.