ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಇಪ್ಪತ್ತು ಉಗ್ರರ ಹತ್ಯೆ?
ಕಾಶ್ಮೀರ, ಸೆಪ್ಟೆಂಬರ್ 22: ಭಾರತ ಗಡಿ ನಿಯಂತ್ರಣ ರೇಖೆಯೊಳಗೆ ನುಸುಳಲು ಯತ್ನಿಸಿದ ಇಪ್ಪತ್ತು ಉಗ್ರರನ್ನು ಭಾರತೀಯ ಯೋಧರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಇದನ್ನು 'ದಿ ಕ್ವಿಂಟ್' ವರದಿ ಮಾಡಿದ್ದು, ವರದಿಯನ್ನು ಖಾತ್ರಿ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಮೂರು ಭಯೋತ್ಪಾದಕರ ಕ್ಯಾಂಪ್ ಮೇಲೆ ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ದಾಳಿ ಮಾಡಿ, ಇಪ್ಪತ್ತು ಶಂಕಿತ ಉಗ್ರರನ್ನು ಕೊಲ್ಲಲಾಗಿದೆ. ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ ಇನ್ನೂರಕ್ಕೂ ಹೆಚ್ಚಿರಬಹುದು ಎಂದು ಮೂಲಗಳು ತಿಳಿವೆ. ಸೆ.20ರ ರಾತ್ರಿ ವಿಮಾನ ಹಾರಾಟ ನಿಷೇಧದ ಘೋಷಣೆಯನ್ನು ಪಾಕಿಸ್ತಾನ ಮಾಡಿತ್ತು. ಅದಾದ ನಂತರ ಭಾರತದ ಗಡಿಯುದ್ದಕ್ಕೂ ಸೇನೆ ನಿಯೋಜನೆ ಮಾಡಿತ್ತು.
ಉತ್ತರ ಪಾಕಿಸ್ತಾನದ ನಗರಗಳಾದ ಗಿಲ್ಗಿಟ್, ಸ್ಕರ್ದು ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಗಿಲ್ಗಿಟ್-ಬಾಲ್ಟಿಸ್ತಾನ್, ಖೈಬರ್-ಪಷ್ತೂನ್ ಖ್ವಾ ಪ್ರಾಂತ್ಯಗಳಿಗೆ ಪ್ರದೇಶಗಳಿಗೆ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಯಾನವನ್ನು ರದ್ದು ಮಾಡಿತ್ತು. ವಿಮಾನ ಯಾನ ಸಂಸ್ಥೆಯ ವಕ್ತಾರ ದನ್ಯಾಲ್ ಗಿಲಾನಿ ಈ ಮಾಹಿತಿಯನ್ನು ಟ್ವೀಟ್ ಮಾಡಿ, ತೊಂದರೆಗೆ ವಿಷಾದಿಸುತ್ತೇವೆ ಎಂದಿದ್ದರು.
ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಮಂಗಳವಾರ ರಾತ್ರಿ ಮಾತನಾಡುವ ಮುನ್ನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸೇನಾ ಮುಖ್ಯಸ್ಥ ರಹೀಮ್ ಷರೀಫ್ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಇದರಿಂದ ಒಂದು ಖಾತ್ರಿ ಆಗುತ್ತದೆ: ಭಾರತ ನಡೆಸಿದ ಗಡಿಯಾಚೆಗಿನ ದಾಳಿ ವಿಚಾರ ಪ್ರಸ್ತಾವ ಮಾಡುವ ಸಾಧ್ಯತೆ ಇದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಉರಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬುಧವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.