ಕಾಶ್ಮೀರ ಮರು ಮತದಾನ ಶೇ. 2 ! ಕಣಿವೆ ರಾಜ್ಯದ ಇತಿಹಾಸದಲ್ಲೇ ಅತಿ ಕಳಪೆ
ಏ. 16ರೊಳಗೆ ಅಲ್ಲಿನ ಸಂಸತ್ ಚುನಾವಣೆ ನಡಸಲೇಬೇಕಿರುವುದರಿಂದ ಕೇಂದ್ರ ಚುನಾವಣಾ ಆಯೋಗವು ಏ. 13ರಂದು ಮರು ಮತದಾನಕ್ಕೆ ಆದೇಶಿಸಿತ್ತು. ಹಾಗಾಗಿ, ಗುರುವಾರ ಮತದಾನ ನಡೆದಿದೆ.
ಶ್ರೀನಗರ, ಏಪ್ರಿಲ್ 13: ಶ್ರೀನಗರ ಸಂಸತ್ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಡೆದ ಮರು ಮತದಾನಕ್ಕೆ ಸಾರ್ವಜನಿಕರಿಂದ ಅತ್ಯಂತ ನಿರುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 2ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಇದು ಆ ರಾಜ್ಯದ ಇತಿಹಾಸದಲ್ಲೇ ತೀರಾ ಕಳಪೆ ಸಾಧನೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ಈ ಮೊದಲು, ಏಪ್ರಿಲ್ 9ರಂದು ಈ ಕ್ಷೇತ್ರದ ಚುನಾವಣೆ ನಡೆದಿತ್ತು. ಆದರೆ, ಕಾಶ್ಮೀರ ಪ್ರತ್ಯೇಕತಾವಾದಿಗಳು ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮತದಾರರು ಮತ ಚಲಾಯಿಸಲು ಹೆಚ್ಚಾಗಿ ಬರಲಿಲ್ಲ. ಅಂದು ಶೇ. 7ರಷ್ಟು ಮತದಾನವಾಗಿತ್ತು. ಆದರೆ, ಅದೇ ದಿನ ಶ್ರೀನಗರ ಸಂಸತ್ ಕ್ಷೇತ್ರದ ಬದ್ಗಾಮ್ ಹಾಗೂ ಮತ್ತಿತರ ಕಡೆಗಳಲ್ಲಿ ದುಷ್ಕರ್ಮಿಗಳು ಮತಗಟ್ಟೆಗಳ ಮೇಲೆ ದಾಳಿ ನಡೆಸಿದ್ದರು.
ಮತಗಟ್ಟೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಅಲ್ಲದೆ, ಅಂದು ನಡೆದ ಹಿಂಸಾಚಾರದಲ್ಲಿ ಸುಮಾರು 6 ಮಂದಿ ಮೃತರಾಗಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಯಿತು.
ಆದರೆ, ನಿಯಮಗಳಂತೆ ಏ. 16ರೊಳಗೆ ಅಲ್ಲಿನ ಸಂಸತ್ ಚುನಾವಣೆ ನಡಸಲೇಬೇಕಿರುವುದರಿಂದ ಕೇಂದ್ರ ಚುನಾವಣಾ ಆಯೋಗವು ಏ. 13ರಂದು ಮರು ಮತದಾನಕ್ಕೆ ಆದೇಶಿಸಿತ್ತು. ಹಾಗಾಗಿ, ಗುರುವಾರ ಮತದಾನ ನಡೆದಿದೆ.[ಶ್ರೀನಗರದಲ್ಲಿ 30 ವರ್ಷಗಳಲ್ಲೇ ಕನಿಷ್ಠ ಮತದಾನ, ಹಿಂಸಾಚಾರಕ್ಕೆ 6 ಬಲಿ]
ಏಪ್ರಿಲ್ 9ರಂದು ನಡೆದ ಗಲಭೆಯ ಹಿನ್ನೆಲೆಯಲ್ಲಿ ಚುನಾವಣೆಗೆ ನಿಂತಿದ್ದ ಏಳು ಅಭ್ಯರ್ಥಿಗಳಲ್ಲಿ ಐವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮರುಮತದಾನ ನಡೆಸಬೇಕಿತ್ತು ಎಂದು ಈ ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದರೆ, ಚುನಾವಣಾ ಆಯೋಗ ಅದಕ್ಕೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸೂಚಕವಾಗಿ ಈ ಅಭ್ಯರ್ಥಿಗಳು ಕಣದಿಂದ ಹಿಂದಿ ಸರಿದಿದ್ದಾರೆ.
ಹಾಗಾಗಿ ಕಣದಲ್ಲಿ, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹಾಗೂ ಆಡಳಿತಾರೂಢ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ನಾಸಿರ್ ಅಹ್ಮದ್ ಇದ್ದರು.[ಪಾಕ್ ರಾಷ್ಟ್ರಗೀತೆ ಹಾಡಲಾಗಿದ್ದ ಮೈದಾನದ ಮೇಲೆ ಎಬಿವಿಪಿ ದಾಳಿ]
ಗುರುವಾರ ನಡೆದ ಮರುಮತದಾನಕ್ಕೆ ಆರಂಭದಿಂದಲೇ ನೀರಸ ಪ್ರತಿಕ್ರಿಯೆ ಕಂಡುಬಂತು. ಗಲಭೆ ಪೀಡಿತ ಕೆಲ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಒಬ್ಬರೇ ಒಬ್ಬರು ಬಂದು ಮತ ಚಲಾಯಿಸಿರಲಿಲ್ಲ. ಆನಂತರ, ನಿಧಾನವಾಗಿ ಜನರು ಮತಗಟ್ಟೆಗಳತ್ತ ಬರಲಾರಂಭಿಸಿದರು. ಆದರೂ, ದಿನಾಂತ್ಯದ ಹೊತ್ತಿಗೆ ಶೇ. 2ರಷ್ಟೇ ಮಾತ್ರವೇ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.