ಕೊರೊನಾ ಬಗ್ಗೆ ಸಂದೇಶಗಳನ್ನು ಶೇರ್ ಮಾಡುವ ಮುನ್ನ ಎಚ್ಚರ ಎಚ್ಚರ!
ಮುಂಬೈ, ಏಪ್ರಿಲ್.15: ಜಗತ್ತನ್ನು ಆವರಿಸಿರುವ ಕೊರೊನಾ ವೈರಸ್ ಭೀತಿಯಲ್ಲಿ ಜನರು ಆತಂಕಗೊಂಡಿದ್ದು ನಿತ್ಯ ಭಯದಲ್ಲೇ ಕಾಲ ಕಳೆಯುವಂತಾ ಸ್ಥಿತಿ ಎದುರಾಗಿದೆ. ಇದರ ನಡುವೆ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ಕುರಿತು ಪ್ರಚೋದನಾತ್ಮಕ ಹೇಳಿಕೆ ನೀಡುವುದು, ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವವರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
Fake news: ಮೋದಿಯಿಂದ ಎಲ್ಲಾ ಭಾರತೀಯರಿಗೂ 15 ಸಾವಿರ ರುಪಾಯಿ ಗಿಫ್ಟ್
ಕಳೆದ ಮಾರ್ಚ್.24ರ ಭಾರತ ಲಾಕ್ ಡೌನ್ ನಿಂದ ಈವರೆಗೂ ಮಹಾರಾಷ್ಟ್ರ ಒಂದರಲ್ಲೇ 196 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಕೊಳ್ಳಲಾಗಿದೆ. ಈ ಪೈಕಿ 188 ಗುರುತರ ಹಾಗೂ 8 ಗುರುತರವಲ್ಲದ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರಿಂಗ 37 ಮಂದಿ ಬಂಧನ
ಭಾರತ ಲಾಕ್ ಡೌನ್ ನಡುವೆ ನಿಯಮ ಉಲ್ಲಂಘಿಸಿದ ಸುಳ್ಳುಸುದ್ದಿ ಹರಡಿದ 112 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ 37 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪೈಕಿ 12 ಆರೋಪಿಗಳ ವಿರುದ್ಧ ಸಿಆರ್ ಪಿಸಿ 107ರ ಅಡಿ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರಕರಣ ದಾಖಲು
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮತ್ತು ಪೋಸ್ಟ್ ಗಳನ್ನು ಹಾಕುವವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕಳೆದ ಏಳು ದಿನಗಳಲ್ಲಿ ಟ್ರೆಂಡ್ ಆಗಿರುವ ಫೋಸ್ಟ್ ಹಾಗೂ ಸ್ಟೇಟ್ ಮೆಂಟ್ ಗಳಿಗೆ ಸಂಬಂಧಿಸಿದಂತೆ 104 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಸಂಬಂಧಿಸಿದಂತೆ 68 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಪ್ಪು ಮಾಹಿತಿ ಹರಡಿದವರ ವಿರುದ್ಧ 27 ಕೇಸ್ ದಾಖಲಿಸಿಕೊಳ್ಳಲಾಗಿದೆ. ವಾಟ್ಸಾಪ್ ಸಂದೇಶ ಸಂಬಂಧ 93, ಫೇಸ್ ಬುಕ್ ನಲ್ಲಿನ ಸಂದೇಶಗಳ ವಿರುದ್ಧ 61, ಟಿಕ್ ಟಾಕ್ 3 ಹಾಗೂ ಟ್ವಿಟ್ಟರ್ ನಲ್ಲಿ ತಪ್ಪು ಮಾಹಿತಿ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸುಳ್ಳು ವದಂತಿ ತೆಗೆಯುವಂತೆ ನೋಟಿಸ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಯ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಟೇಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಈವರೆಗೂ ಸಾಮಾಜಿಕ ಜಾಲತಾಣಗಳಲ್ಲಿನ 32 ಪೋಸ್ಟ್ ಗಳನ್ನು ತೆಗೆದು ಹಾಕಲಾಗಿದೆ. 93 ವಾಟ್ಸಾಪ್ ಸಂದೇಶಗಳನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ ಸಾಮಾಜಿಕ ತಾಣಗಳಲ್ಲಿಯೂ ಇರುವ 80 ಪೋಸ್ಟ್ ಗಳನ್ನು ತೆಗೆಯುವಂತೆ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
24 ಗಂಟೆಗಳಲ್ಲಿ 13 ಜನರ ವಿರುದ್ಧ ಪ್ರಕರಣ
ಇನ್ನು, ಕಳೆದ 24 ಗಂಟೆಗಳಲ್ಲಿ 13 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಈ ಪೈಕಿ 10 ಪ್ರಕರಣಗಳು ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದ್ದಾಗಿದೆ. ಮಹಾರಾಷ್ಟ್ರದಲ್ಲಿ ಸೈಬರ್ ಕ್ರೈಂನ 25 ಸದಸ್ಯ ತಂಡವು ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಿದೆ. ಹೀಗಾಗಿ ಸಾರ್ವಜನಿಕರು ವಾಟ್ಸಾಪ್ ಗ್ರೂಪ್ ಗಳಲ್ಲಿ ಅನಗತ್ಯ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು. ತಪ್ಪು ಸಂದೇಶಗಳನ್ನು ಹರಿ ಬಿಟ್ಟರೆ ಅದಕ್ಕೆ ಗ್ರೂಪ್ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸೈಬರ್ ಕ್ರೈಂ ತಂಡದಿಂದ ಮಾರ್ಗಸೂಚಿ
ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಸತ್ಯಾಸತ್ಯತೆ ತಿಳಿದುಕೊಳ್ಳುವಂತೆ ಮನವಿ ಮಾಡಿಕೊಂಡಿರುವ ಮಹಾರಾಷ್ಟ್ರ ಸೈಬರ್ ಕ್ರೈಂ ಪೊಲೀಸರು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಸೈಬರ್ ಕ್ರೈಂ ಪೊಲೀಸರು ಹೊರಡಿಸಿದ ಮಾರ್ಗಸೂಚಿ:
- ಸುಳ್ಳುಸುದ್ದಿ ಮತ್ತು ವದಂತಿಗಳನ್ನು ಫಾರ್ವರ್ಡ್ ಮಾಡಬೇಡಿ. ವದಂತಿಯ ಹರಡುವಿಕೆಗೆ ಕಡಿವಾಣ ಹಾಕಬೇಕು
- ಸುಳ್ಳು ವದಂತಿಗಳನ್ನು ತಪ್ಪು ಸಂದೇಶಗಳನ್ನು ಹರಡುತ್ತಿರುವ ಮೂಲದ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ.
- ಯಾವುದೇ ಸುದ್ದಿ ಅಥವಾ ಸಂದೇಶವನ್ನು ಫಾರ್ಮರ್ಡ್ ಅಥವಾ ಶೇರ್ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡಿಕೊಳ್ಳಿರಿ.
- ಸರ್ಕಾರಿ ಮೂಲದ ಸುದ್ದಿಗಳ ಮೇಲೆ ಅತಿಹೆಚ್ಚಿನ ವಿಶ್ವಾಸವನ್ನು ಹೊಂದಿರಬೇಕು.
- ಅಧಿಕೃತ ಮೂಲಗಳಲ್ಲಿ ಸುದ್ದಿ ಮತ್ತು ವದಂತಿಗಳನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು.