ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಲೋಕಸಭಾ ನಾಯಕ ಯಾರು?
ನವದೆಹಲಿ, ಜೂನ್ 17: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಾಪನೆಯಾದ ಬಳಿಕ ಮೊಟ್ಟ ಮೊದಲ ಅಧಿವೇಶನಕ್ಕೆ ಸಂಸತ್ತು ಸಜ್ಜಾಗಿದೆ. 17ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ(ಜೂನ್ 17) ದಂದು ಆರಂಭಗೊಳ್ಳಲಿದೆ.
ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನಂತರ ಲೋಕಸಭಾ ಸ್ಪೀಕರ್, ಉಪ ಸ್ಪೀಕರ್ ಆಯ್ಕೆಯಾಗಲಿದೆ.
ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ವೀರೇಂದ್ರ ಕುಮಾರ್
ಈ ನಡುವೆ ಲೋಕಸಭೆಯಲ್ಲಿ ಪ್ರತಿಪಕ್ಷವೇ ಇಲ್ಲದ್ದಂತಾಗಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಗಳಿಸಿದ್ದು, ಪ್ರತಿಪಕ್ಷ ಎನಿಸಿಕೊಳ್ಳಲು ಇನ್ನು ಕನಿಷ್ಠ 4 ಹೆಚ್ಚಿನ ಸ್ಥಾನ ಹೊಂದಿರಬೇಕಾಗಿತ್ತು. ಇದರ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಸೋಲು ಕಂಡಿರುವುದರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರು ಯಾರು ಎನ್ನುವ ಪ್ರಶ್ನೆ ಎದ್ದಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಅವರು ಸಂಸತ್ತಿನಲ್ಲಿ ನಾಯಕರಾಗಿ ನಿಲ್ಲಲು ಹಿಂದೇಟು ಹಾಕಿದ್ದಾರೆ. ಸದ್ಯಕ್ಕೆ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ಕೇರಳದ ಸಂಸದ ಶಶಿ ತರೂರ್, ಕೇರಳ ಕಾಂಗ್ರೆಸ್ಸಿನ ಅಧ್ಯಕ್ಷ ಕೆ.ಸುರೇಶ್, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೆಸರು ಕೇಳಿ ಬಂದಿದೆ. ಈ ಪೈಕಿ ಪಕ್ಷದ ವಕ್ತಾರರಾಗಿ ಮನೀಶ್ ಅನುಭವ ಹೊಂದಿದ್ದು, ಹಿಂದಿ, ಇಂಗ್ಲಿಷ್ನಲ್ಲಿ ಮಾತನಾಡಬಲ್ಲವರು, ಗಾಂಧಿ ಪರಿವಾರಕ್ಕೂ ಬೇಕಾದವರು ಹೀಗಾಗಿ, ಮನೀಶ್ ಅವರು ಪ್ರತಿಪಕ್ಷ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ.