ನಕ್ಸಲರೆಂದು ಕೊಂದಿದ್ದು 17 ಮಂದಿ ಅಮಾಯಕರನ್ನು: 7 ವರ್ಷದ ಬಳಿಕ ಬಹಿರಂಗವಾದ ಸತ್ಯ
ಬಿಜಾಪುರ್, ಡಿಸೆಂಬರ್ 3: ಛತ್ತೀಸಗಡದಲ್ಲಿ ಏಳು ವರ್ಷಗಳ ಹಿಂದೆ ಪೊಲೀಸರು ನಡೆಸಿದ್ದ ನಕ್ಸಲರ ಎನ್ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 2012ರ ಜೂನ್ 28ರಂದು ಛತ್ತೀಸಗಡದ ಬಿಜಾಪುರ ಜಿಲ್ಲೆಯ ಸರ್ಕೇಗುಡ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸರು 17 ಮಂದಿಯನ್ನು ಹತ್ಯೆ ಮಾಡಿದ್ದರು. ಮಾವೋವಾದಿಗಳನ್ನು ನಿರ್ಮೂಲನೆ ಮಾಡಿಕೊಂಡಿದ್ದಾಗಿ ಹೇಳಿಕೆ ನೀಡಿದ್ದರು.
ಈ ಪ್ರಕರಣದ ಕುರಿತು ನ್ಯಾ. ವಿಜಯ್ ಕುಮಾರ್ ಅಗರವಾಲ್ ನೇತೃತ್ವದಲ್ಲಿ ಏಳು ವರ್ಷದ ವಿಚಾರಣೆ ಮತ್ತು ತನಿಖೆ ನಡೆಸಿ ನ್ಯಾಯಾಂಗ ತನಿಖಾ ವರದಿಯನ್ನು ಒಂದು ತಿಂಗಳ ಹಿಂದೆ ಸಲ್ಲಿಸಲಾಗಿದ್ದು, ಅದು ಭಾನುವಾರ ಸೋರಿಕೆಯಾಗಿದೆ.
2012ರಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 17 ಮಂದಿ ಮಾವೋವಾದಿಗಳಲ್ಲ ಎಂಬುದನ್ನು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಪೊಲೀಸರ ದಾಳಿಗೆ ನಿಜಕ್ಕೂ ಬಲಿಯಾದವರು ಅಮಾಯಕ ಗ್ರಾಮಸ್ಥರು ಎಂದು ಹೇಳಲಾಗಿದೆ. ಸತ್ತವರಲ್ಲಿ ಏಳು ಮಂದಿ ಅಪ್ರಾಪ್ತ ವಯಸ್ಸಿನವರೂ ಇದ್ದರು.
ಕೇರಳದಲ್ಲಿ ಪೊಲೀಸರ ಕಾರ್ಯಾಚರಣೆ: ಕರ್ನಾಟಕ ಮೂಲದ ನಕ್ಸಲರ ಹತ್ಯೆ
ನಕ್ಸಲರ (ಗ್ರಾಮಸ್ಥರ) ಕಡೆಯಿಂದ ಮೊದಲು ದಾಳಿ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ನಡೆಸಲಾಗಿತ್ತು ಎಂಬ ಪೊಲೀಸರ ಹೇಳಿಕೆಯನ್ನು ವರದಿಯಲ್ಲಿ ತಿರಸ್ಕರಿಸಲಾಗಿದೆ. ಪೊಲೀಸರು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ ಗುಂಪು ಮಾವೋವಾದಿಗಳದ್ದು ಎಂಬುದಕ್ಕೆ ಭದ್ರತಾ ಪಡೆಗಳು ಯಾವುದೇ ಪುರಾವೆ ಒದಗಿಸಿಲ್ಲ.
ಏಕ ಸದಸ್ಯ ಆಯೋಗ
ಸರ್ಕೇಗುಡ ಜಿಲ್ಲೆಯಲ್ಲಿ ನಡೆದ 17 ಮಂದಿಯ ಹತ್ಯೆ ಪ್ರಕರಣದ ಕುರಿತು ಪ್ರಶ್ನೆಗಳು ಎದ್ದಿದ್ದವು. ಆಗಿನ ಬಿಜೆಪಿ ಸರ್ಕಾರ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿತ್ತು. ಈ ಆಯೋಗ ಒಂದು ತಿಂಗಳ ಹಿಂದೆ ವರದಿ ಸಲ್ಲಿಸಿತ್ತು.
ನ್ಯಾ. ಅಗರವಾಲ್ ಅವರು ತಮ್ಮ ನಿವೃತ್ತಿಗೂ ಮುನ್ನ ಅ.17ರಂದು ವರದಿ ಸಲ್ಲಿಸಿದ್ದರು. ಇದನ್ನು ಶನಿವಾರ ರಾತ್ರಿ ಛತ್ತೀಸಗಡ ಸಚಿವ ಸಂಪುಟದಲ್ಲಿ ಇರಿಸಲಾಗಿತ್ತು. ಬಳಿಕ ಸೋಮವಾರ ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಗಿತ್ತು. ಈ ವರದಿ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಪೊಲೀಸರ ಹೇಳಿಕೆ ಸುಳ್ಳು
ಪೊಲೀಸರು ನಡೆಸಿದ ತನಿಖೆ ಬೇಕಾಬಿಟ್ಟಿಯಾಗಿದೆ ಮತ್ತು ಎಲ್ಲವನ್ನೂ ತಿರುಚಲಾಗಿದೆ. ಪೊಲೀಸರು ಹೇಳಿರುವಂತೆ ಘಟನೆ ನಡೆದ ಸ್ಥಳದಿಂದ ಗನ್ಗಳನ್ನು ಮತ್ತು ಪೆಲೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು ಎಂದು ವರದಿ ಹೇಳಿದೆ.
ಪೊಲೀಸರ ಗುಂಡೇಟಿಗೆ ಬಲಿಯಾದ ಗ್ರಾಮಸ್ಥರ ಪರವಾಗಿ ಹಾಜರಾಗಿದ್ದ ವಕೀಲೆ ಇಶಾ ಖಾಂಡೇವಾಲ್, ಇದು ನ್ಯಾಯಕ್ಕಾಗಿ ಗ್ರಾಮಸ್ಥರು ನಡೆಸಿದ ಹೋರಾಟ. ಸುದೀರ್ಘ ಕಾಲ ನಡೆದ ಬಳಿಕ ನ್ಯಾಯ ದೊರಕುವಂತೆ ಕಾಣಿಸಿದೆ ಎಂದು ಹೇಳಿದ್ದಾರೆ. ಈ ವರದಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಿಕ್ಕಿದೆ. ಅದರ ಬಗ್ಗೆ ತಮಗಾಗಲೀ ಅಥವಾ ಗ್ರಾಮಸ್ಥರಿಗಾಗಲೀ ವರದಿಯ ಅಧಿಕೃತ ಪ್ರತಿ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿ ನಕ್ಸಲ್ ದಾಳಿ:ನಾಲ್ವರು ಪೊಲೀಸರು ಹುತಾತ್ಮ
ಮತ್ತೊಂದು ಎನ್ಕೌಂಟರ್ ಕೂಡ ಸುಳ್ಳು
ಛತ್ತೀಸಗಡದ ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿನ ಮಾವೋವಾದಿಗಳನ್ನು ಹತ್ಯೆಯ ಇತರೆ ಪ್ರಕರಣಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಸೆ. 23ರಂದು ದಾಂತೇವಾಡ ಜಿಲ್ಲೆಯ ಕುಟ್ರೆಂನಲ್ಲಿ ನಡೆದ ಪೊಲೀಸ್-ಮಾವೋವಾದಿಗಳ ಗುಂಡಿನ ಚಕಮಕಿ ಪ್ರಕರಣ ಕೂಡ ನಕಲಿ ಎಂದು ಹೇಳಲಾಗುತ್ತಿದೆ. ಮದ್ಯ ಸೇವಿಸುತ್ತಾ ಕುಳಿತಿದ್ದ ಐವರಲ್ಲಿ ಮೂವರನ್ನು ಗ್ರಾಮದಿಂದ ಹೊರಗೆ ಎಳೆದುಕೊಂಡು ಹೋಗಿದ್ದ ಪೊಲೀಸರು ಗುಂಡಿಕ್ಕಿ ಅವರನ್ನು ಕೊಂದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಿಂದಿನಿಂದ ಗುಂಡು ಹಾರಿಸಲಾಗಿದೆ
2012ರಲ್ಲಿ ನಡೆದ 17 ಮಂದಿಯ ಹತ್ಯೆಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಗ್ರಾಮಸ್ಥರು ಮಾವೋವಾದಿ ಸಭೆಗಾಗಿ ಸೇರಿದ್ದರು ಎಂದು ಸರ್ಕಾರ ಹೇಳಿತ್ತು. ಆದರೆ ಹಬ್ಬದ ಆಚರಣೆಯ ಕುರಿತಾಗಿ ಮಾತನಾಡಲು ಎಲ್ಲರೂ ಒಂದೆಡೆ ಸೇರಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಸ್ವಲ್ಪ ದೂರದಲ್ಲಿ ಏನೋ ಸದ್ದು ಬರುತ್ತಿದೆ ಎಂಬ ಮಾಹಿತಿ ಆಧರಿಸಿದ ಭದ್ರತಾ ಪಡೆ, ನಕ್ಸಲರ ಇರುವಿಕೆಯ ಭಯದಲ್ಲಿ ದಾಳಿ ನಡೆಸಿದೆ. ಘಟನೆಯಲ್ಲಿ ಭದ್ರತಾ ಪಡೆಯ ಆರು ಮಂದಿ ಗಾಯಗೊಂಡಿರುವುದು ಪಡೆಯವರೇ ಹಾರಿಸಿದ ಗುಂಡು ತಪ್ಪಿ ಬಿದ್ದಿರುವುದರಿಂದ. ಹತ್ಯೆಯಾದವರಲ್ಲಿ ಒಬ್ಬ ವ್ಯಕ್ತಿಯನ್ನು ಎನ್ಕೌಂಟರ್ ನಡೆದ ಮಾರನೇ ದಿನ ಕೊಂದು ಹಾಕಲಾಗಿದೆ. 17 ಮಂದಿಯಲ್ಲಿ 10 ಜನರಿಗೆ ಹಿಂದಿನಿಂದ ಗುಂಡು ಹಾರಿಸಲಾಗಿದೆ. ಅವರು ಓಡುವಾಗ ಈ ದಾಳಿ ನಡೆಸಲಾಗಿದೆ ಎನ್ನುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ.