ಕಮ್ಮಿಯಾಗಿಲ್ಲ ಕೊರೊನಾವೈರಸ್: ಭಾರತ 6 ರಾಜ್ಯಗಳಲ್ಲಿ ಕಂಡೀಷನ್ ಘನಘೋರ!?
ನವದೆಹಲಿ, ಫೆಬ್ರವರಿ.28: ಕೊರೊನಾವೈರಸ್ ಲಸಿಕೆ ಬಂತು. ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ಲಸಿಕೆ ವಿತರಣೆ ನಡೆಯುತ್ತಿದೆ. ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 250 ರೂಪಾಯಿ ದರವನ್ನೂ ನಿಗದಿಗೊಳಿಸಲಾಗಿದೆ. ಇನ್ನೇನೂ ಭಯವಿಲ್ಲ ಎನ್ನುವಷ್ಟರಲ್ಲೇ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗಳು ನಡುಕ ಹುಟ್ಟಿಸುತ್ತಿವೆ.
ಭಾರತದ ಆರು ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆಯು ನಿಯಂತ್ರಣಕ್ಕೇ ಸಿಗುತ್ತಿಲ್ಲ. ಪ್ರತಿನಿತ್ಯ ಅತಿಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಮತ್ತೆ ಕೊವಿಡ್-19 ಪ್ರಕರಣಗಳ ಸಂಖ್ಯೆ 16 ಸಾವಿರದ ಗಡಿ ದಾಡುತ್ತಿದೆ.
ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?
ಕಳೆದ ಒಂದು ವಾರದಲ್ಲಿ ಪ್ರತಿದಿನವೂ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಏರುಮುಖವಾಗಿ ಸಾಗುತ್ತಿದೆ. ದೇಶದಲ್ಲಿ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯು ಸಹ ಏರಿಕೆಯಾಗುತ್ತಿದೆ. ಭಾರತದಲ್ಲಿ ಕೊರೊನಾವೈರಸ್ ಮತ್ತು ಅಪಾಯ ಎದುರಿಸುತ್ತಿರುವ ಆರು ರಾಜ್ಯಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
24 ಗಂಟೆಗಳಲ್ಲಿ 16,000ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 16752 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1,10,96,731ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 113 ಜನರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದರೆ, ಒಟ್ಟು ಸಾವಿನ ಸಂಖ್ಯೆ 1,57,051ಕ್ಕೆ ಏರಿಕೆಯಾಗಿದೆ. ಇನ್ನು, 24 ಗಂಟೆಗಳಲ್ಲಿ 11,718 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಈವರೆಗೂ 1,07,75,169 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಪೈಕಿ ಶೇ.1.48ರಷ್ಟು ಸಕ್ರಿಯ ಪ್ರಕರಣಗಳಿದ್ದು, 1,64,511 ಸಕ್ರಿಯ ಕೊವಿಡ್-19 ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
24 ಗಂಟೆಗಳಲ್ಲಿ ಆರು ರಾಜ್ಯಗಳಲ್ಲೇ ಅತಿಹೆಚ್ಚು ಕೇಸ್
ಭಾರತದಲ್ಲಿ ಒಂದೇ ದಿನ ಪತ್ತೆಯಾದ ಒಟ್ಟು 16752 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.86ರಷ್ಟು ಸೋಂಕಿತ ಪ್ರಕರಣಗಳು ದೇಶದ ಆರು ರಾಜ್ಯಗಳಿಗೆ ಸೇರಿವೆ. ಮಹಾರಾಷ್ಟ್ರ - 8623, ಕೇರಳ - 3792, ಪಂಜಾಬ್ - 593, ಕರ್ನಾಟಕ - 523, ತಮಿಳುನಾಡು - 486 ಮತ್ತು ಗುಜರಾತ್ - 451 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ.
6 ರಾಜ್ಯಗಳಲ್ಲಿ ಶೇ.84ರಷ್ಟು ಸೋಂಕಿತರು ಗುಣಮುಖ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ನಿಂದ ಗುಣಮುಖರಾದ ಒಟ್ಟು 11,718 ಪ್ರಕರಣಗಳಲ್ಲಿ ಶೇ.84ರಷ್ಟು ಪ್ರಕರಣಗಳು ಆರು ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳ - 4650, ಮಹಾರಾಷ್ಟ್ರ - 3648, ತಮಿಳುನಾಡು 491, ಕರ್ನಾಟಕ - 380, ಪಂಜಾಬ್ - 368 ಮತ್ತು ಗುಜರಾತ್ - 328 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೂ 1,07,75,169 ಸೋಂಕಿತರು ಗುಣಮುಖರಾಗಿದ್ದಾರೆ.
ಆರು ರಾಜ್ಯಗಳಲ್ಲಿ ಶೇ.85ರಷ್ಟು ಸಾವಿನ ಪ್ರಕರಣ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 113 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ದೇಶದ ಆರು ರಾಜ್ಯಗಳಲ್ಲೇ ಶೇ.85ರಷ್ಟು ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ - 51, ಕೇರಳ - 18, ಪಂಜಾಬ್ -11, ಕರ್ನಾಟಕ -6, ತಮಿಳುನಾಡು - 5 ಛತ್ತೀಸ್ ಗಢ -5 ಜನರು ಮೃತಪಟ್ಟಿದ್ದಾರೆ. ಕೊವಿಡ್-19 ಮಹಾಮಾರಿಗೆ ಈವರೆಗೂ 1,57,051 ಜನರು ಬಲಿಯಾಗಿದ್ದಾರೆ.