ಮಹಾರಾಷ್ಟ್ರದಲ್ಲಿ ಎನ್ಕೌಂಟರ್: 16 ನಕ್ಸಲರ ಹತ್ಯೆ
ಮುಂಬೈ, ಏಪ್ರಿಲ್ 23: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದ ಭೀಕರ್ ಎನ್ಕೌಂಟರ್ ನಲ್ಲಿ 16 ನಕ್ಸಲರು ಹತರಾಗಿದ್ದಾರೆ.
ಹಡ್ಚಿರೋಲಿ ಪೊಲೀಸರ ವಿಶೇಷ ತಂಡ 'ಸಿ-60 ಕಮಾಂಡೋಸ್' ಈ ಕಾರ್ಯಾಚರಣೆ ನಡೆಸಿದೆ.
ಭಾನುವಾರ ಬೆಳ್ಳಿಗ್ಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಕಮಾಂಡೋ ಪಡೆ ಆರಂಭಿಸಿತ್ತು. ಖಚಿತ ಮಾಹಿತಿಯ ಮೇಲೆ ಕೂಂಬಿಂಗ್ ಗೆ ಇಳಿದ ತಂಡ ನಕ್ಸಲರನ್ನು ಬಂಧಿಸಲು ಹೊರಟಿತ್ತು. ಆದರೆ ಸತತ ಎಚ್ಚರಿಕೆಗಳ ನಂತರವೂ ನಕ್ಸಲರು ಕಮಾಂಡೋಗಳತ್ತ ಗುಂಡಿನ ದಾಳಿ ಆರಂಭಿಸಿದ್ದರಿಂದ ಕಮಾಂಡೋಗಳು ಅನಿವಾರ್ಯವಾಗಿ ಗುಂಡಿನ ಚಕಮಕಿಗೆ ಇಳಿಯಬೇಕಾಯಿತು ಎಂದು ಐಜಿಪಿ ಶರದ್ ಶೆಲರ್ ಹೇಳಿದ್ದಾರೆ.
ಸಂಜೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಭಾಮ್ರಗಡ ಪ್ರದೇಶದ ತಡಗಾಂವ್ ದಟ್ಟ ಅರಣ್ಯದಲ್ಲಿದ್ದ 16 ನಕ್ಸಲರನ್ನು ಬೇಟೆಯಾಡಲಾಗಿದೆ.
ಇನ್ನು ಎನ್ಕೌಂಟರ್ ನಲ್ಲಿ ಜಿಲ್ಲಾ ಮಟ್ಟದ ಇಬ್ಬರು ಕಮಾಂಡರ್ ಗಳಾದ ಸಾಯಿನಾಥ್ ಮತ್ತು ಸೈನ್ಯು ಎಂಬವರು ಸಾವನ್ನಪ್ಪಿದ್ದಾರೆ ಎಂದು ಐಜಿಪಿ ಶರದ್ ಶೆಲರ್ ಹೇಳಿದ್ದಾರೆ.
ಈ ಕಾರ್ಯಾಚರಣೆಗೆ ಸಿ-60 ಕಮಾಂಡೋ ತಂಡವನ್ನು ಡಿಜಿಪಿ ಸತೀಶ್ ಮಾಥುರ್ ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ ಪ್ರಮುಖ ನಕ್ಸಲ್ ನಿಗ್ರಹ ಕಾರ್ಯಾಚರಣೆ ಇದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.