ಚಿತ್ರಗಳು : ವಿಜಯವಾಡದಲ್ಲಿ ದೋಣಿ ದುರಂತ, 16 ಸಾವು
ವಿಜಯವಾಡ, ನವೆಂಬರ್ 13 : ಇಬ್ರಾಹಿಂ ಪಟ್ಟಣದ ಬಳಿ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 20 ಜನರನ್ನು ರಕ್ಷಣೆ ಮಾಡಲಾಗಿದೆ.
ಭಾನುವಾರ ಸಂಜೆ ಇಬ್ರಾಹಿಂ ಪಟ್ಟಣದಲ್ಲಿ ದೋಣಿ ಕೃಷ್ಣಾ ನದಿಯಲ್ಲಿ ಮುಳುಗಿ ಹೋಗಿತ್ತು. 35ಕ್ಕೂ ಅಧಿಕ ಪ್ರವಾಸಿಗರಿದ್ದ ದೋಣಿ ಭವಾನಿ ಐಲ್ಯಾಂಡ್ನಿಂದ ಪವಿತ್ರ ಸಂಗಮಕ್ಕೆ ಹೋಗುವಾಗ ನದಿಯಲ್ಲಿ ಮುಳುಗಿತ್ತು.
ಕೃಷ್ಣಾ ನದಿಯಲ್ಲಿ ದೋಣಿ ಮುಳುಗಡೆ, 11 ಮಂದಿ ಜಲಸಮಾಧಿ
ಭಾನುವಾರ ರಾತ್ರಿ ವೇಳೆಗೆ 11 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಸೋಮವಾರ ಬೆಳಗ್ಗೆ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ದೋಣಿಯಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ.
ಓನ್ಗೋಲ್ ವಾಕಿಂಗ್ ಕ್ಲಬ್ನ ಸದಸ್ಯರಾದ 8 ಕುಟುಂಬಗಳು ಬೋಟ್ನಲ್ಲಿ ಪ್ರಯಾಣ ಕೈಗೊಂಡಿದ್ದರು ಎಂದು ತಿಳಿದುಬಂದಿದೆ. ದೋಣಿಯಲ್ಲಿದ್ದ ಯಾರೊಬ್ಬರೂ ಲೈಫ್ ಜಾಕೆಟ್ ಧರಿಸಿರಲಿಲ್ಲ.
ರೋಹಿಂಗ್ಯಾ ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ 12 ಸಾವು
ಓನ್ಗೋಲ್ ವಾಕರ್ಸ್ ಕ್ಲಬ್ ಸದಸ್ಯರು ಸಿಂಪಲ್ ವಾಟರ್ ಟೂರ್ಸ್ ಎಂಬ ಬೋಟ್ ಆಪರೇಟರ್ಗಳಿಂದ ದೋಣಿ ಬಾಡಿಗೆಗೆ ಪಡೆದಿದ್ದರು. ವಿಜಯವಾಡಕ್ಕೆ ಪ್ರವಾಸಕ್ಕೆ ಬಂದಿದ್ದ ಸದಸ್ಯರು ವಿವಿಧ ದೇವಸ್ಥಾನಗಳನ್ನು ಸಂದರ್ಶಿಸಿದ ನಂತರ ಸಂಗಮ್ಗೆ ದೋಣಿ ಯಾತ್ರೆ ಕೈಗೊಂಡಿದ್ದರು.
ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ
'ಭವಾನಿ ದ್ವೀಪದಿಂದ ಸಂಗಮ್ಗೆ ದೋಣಿ ಯಾತ್ರೆ ಕೈಗೊಂಡಿದ್ದರು. ಯಾರೊಬ್ಬರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಬೋಟ್ ಆಪರೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಆಂಧ್ರಪ್ರದೇಶದ ಗೃಹ ಸಚಿವ ಎನ್.ಚಿನ್ನಪ್ಪ ಹೇಳಿದ್ದಾರೆ.
ಮಹಿಳೆಯರು ಹೆಚ್ಚಿದ್ದರು
ದೋಣಿ ಮರಳು ದಿಣ್ಣೆಗೆ ಬಡಿದು ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ದೋಣಿಯಲ್ಲಿ ಮಹಿಳೆಯರು ಹೆಚ್ಚಿದ್ದರು. ಯಾರಿಗೂ ಈಜು ಬರುತ್ತಿರಲಿಲ್ಲ. ದೋಣಿ ಮುಳುಗಿದ ತಕ್ಷಣ ಅಲ್ಲಿದ್ದ ಮೀನುಗಾರರು ಹಲವರನ್ನು ರಕ್ಷಣೆ ಮಾಡಿದ್ದಾರೆ.
ಲೈಫ್ ಜಾಕೆಟ್ ಕೇಳಿದ್ದರು
ಪ್ರಯಾಣಿಕರು ಬೋಟ್ ಏರುವಾಗಲೇ ಲೈಫ್ ಜಾಕೆಟ್ ಕೇಳಿದ್ದರು. ಆದರೆ, ಬೋಟ್ ಆಪರೇಟರ್ಗಳು ಏನೂ ಆಗುವುದಿಲ್ಲ. ಜಾಕೆಟ್ ಬೇಡ ಎಂದು ಹೇಳಿದ್ದರು. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.
ದೇವಸ್ಥಾನಕ್ಕೆ ಹೋಗಿದ್ದರು
ಓನ್ಗೋಲ್ ವಾಕರ್ಸ್ ಕ್ಲಬ್ ಸದಸ್ಯರು ಸಿಂಪಲ್ ವಾಟರ್ ಟೂರ್ಸ್ ಎಂಬ ಬೋಟ್ ಆಪರೇಟರ್ಗಳಿಂದ ದೋಣಿ ಬಾಡಿಗೆಗೆ ಪಡೆದಿದ್ದರು. ವಿಜಯವಾಡಕ್ಕೆ ಪ್ರವಾಸಕ್ಕೆ ಬಂದಿದ್ದ ಸದಸ್ಯರು ವಿವಿಧ ದೇವಸ್ಥಾನಗಳನ್ನು ಸಂದರ್ಶಿಸಿದ ನಂತರ ಸಂಗಮ್ಗೆ ದೋಣಿ ಯಾತ್ರೆ ಕೈಗೊಂಡಿದ್ದರು.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ
ಬೋಟ್ನಲ್ಲಿ ಎಷ್ಟು ಜನರಿದ್ದರು? ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ. ರಕ್ಷಣೆ ಮಾಡಿರುವವರು ಹೇಳುವ ಪ್ರಕಾರ ಬೋಟ್ನಲ್ಲಿ 38 ಜನರಿದ್ದರು. 16 ಮೃತದೇಹಗಳು ಸಿಕ್ಕಿವೆ. 20 ಜನರನ್ನು ರಕ್ಷಣೆ ಮಾಡಲಾಗಿದೆ.