ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ
ಛತ್ತರ್ಪುರ, ಡಿ. 18: ಕರ್ನಾಟಕದಲ್ಲಿ ತೆರೆದ ಕೊಳವೆ ಬಾವಿಗೆ ಸಾಕಷ್ಟು ಮಕ್ಕಳು ಬಲಿಯಾದ ಮೇಲೆ ಜಾಗೃತಿ ಕೈಗೊಳ್ಳಲಾಯಿತು. ಲಕ್ಷಾಂತರ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲು ಸರ್ಕಾರವೇ ಆದೇಶ ಹೊರಡಿಸಬೇಕಾಯಿತು.
ಆದರೆ, ಈ ಘಟನೆಯಿಂದ ದೇಶದ ಇತರ ರಾಜ್ಯಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಧ್ಯಪ್ರದೇಶ ರಾಜ್ಯದ ಲಿಧೋರಾ ಗ್ರಾಮದಲ್ಲಿ 14 ತಿಂಗಳು ವಯಸ್ಸಿನ ಕೃಷ್ಣ ಲೋಧಿ ಎಂಬ ಬಾಲಕ ಬುಧವಾರ ಸಂಜೆ ವಿಫಲಗೊಂಡ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ಪ್ರಸ್ತುತ 18ನೇ ಅಡಿ ಆಳದಲ್ಲಿ ಬಾಲಕ ಇದ್ದಾನೆ. ಬಾವಿ 100 ಅಡಿ ಉದ್ದವಾಗಿರುವ ಕಾರಣ ಬಾಲಕ ಇನ್ನಷ್ಟು ಆಳಕ್ಕೆ ಜಾರುವ ಆತಂಕ ಎದುರಾಗಿದೆ. [ಕೊಳವೆ ಬಾವಿ ದುರಂತ : ದುನಿಯಾ ವಿಜಯ್ ಹೇಳಿದ್ದು]
ಜಿಲ್ಲಾಡಳಿತ ಈಗಾಗಲೇ ಬಾಲಕನ ರಕ್ಷಣಾ ಕಾರ್ಯ ಆರಂಭಿಸಿದೆ. ಕೊಳವೆ ಬಾವಿಯ ಪಕ್ಕದಲ್ಲಿ ಮತ್ತೊಂದು ಬಾವಿಯನ್ನು ಜೆಸಿಬಿ ಮೂಲಕ ತೆರೆಯಲಾಗುತ್ತಿದೆ. ಕೊಳವೆ ಬಾವಿಯೊಳಗೆ ನಿರಂತರವಾಗಿ ಆಮ್ಲಜನಕ ಪೂರೈಸಲಾಗುತ್ತಿದೆ. [ದುರಂತ ತಡೆಯಲು ಮಾರ್ಗಸೂಚಿ]
ಈ ಕೊಳವೆ ಬಾವಿಯನ್ನು ಎರಡು ತಿಂಗಳ ಹಿಂದಷ್ಟೇ ತೆರೆಯಲಾಗಿತ್ತು. ಆದರೆ, ನೀರು ಬರದ ಹಿನ್ನೆಲೆಯಲ್ಲಿ ಜಮೀನು ಮಾಲೀಕ ಈ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.