ಕೇರಳದಲ್ಲಿ ಭಾರೀ ಗಾಳಿ ಮಳೆಗೆ 13 ಬಲಿ
ತಿರುವನಂತಪುರಂ, ಜೂನ್ 10: ಕೇರಳದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಗಾಳಿ ಸಹಿತ ಮಳೆ 13 ಜನರನ್ನು ಬಲಿ ಪಡೆದಿದೆ.
ಕಳೆದೆರಡು ದಿನಗಳಲ್ಲಿ ಕೇರಳದ ಇಡುಕ್ಕಿ, ಕೋಯಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನ
ತುಂಬಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿ ಹೆಚ್ಚಿನವರು ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ವಿಕೋಪ ನಿರ್ವಹಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಮರಬಿದ್ದು, ಮನೆ ಬಿದ್ದು ಜೊತೆಗೆ ವಿದ್ಯುತ್ ತಂತಿ ತಗುಲಿಯೂ ಹಲವರು ಸಾವನ್ನಪ್ಪಿದ್ದಾರೆ.
ಮಳೆ ಪ್ರಾಣ ಹಾನಿಯ ಜೊತೆಗೆ ಭಾರೀ ಆಸ್ತಿ-ಪಾಸ್ತಿಗೂ ಹಾನಿ ಮಾಡಿದೆ. ಮುಖ್ಯವಾಗಿ ಇಡುಕ್ಕಿ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಬೆಳೆ ಹಾನಿ ಜೊತೆಗೆ ಮನೆಗಳಿಗೂ ಹಾನಿಯಾಗಿದೆ. ಬೆಳೆಗಳು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ರೈತರು ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದಾರೆ.
ಇಡುಕ್ಕಿ ಸೇರಿದಂತೆ ಹಲವು ಬಾಗಗಳಲ್ಲಿ ರಸ್ತೆಗಳಿಗೆ ಮಣ್ಣು, ಮರ ಕುಸಿದು ಬಿದ್ದಿದ್ದು ಸಂಚಾರವೂ ಅಸ್ತವ್ಯಸ್ತವಾಗಿದೆ.
ಕೇರಳದ ಒಳಭಾಗದಲ್ಲಿ ಮಳೆ ಈ ರೀತಿ ಹಾನಿ ಮಾಡಿದ್ದರೆ, ಕರಾವಳಿ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದೆ. ಕಡಲ್ಕೊರೆತದಿಂದಾಗಿ ಕಡಿನಂಕುಲಂ ಭಾಗದಲ್ಲಿ 10 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ 22 ಕುಟುಂಬಗಳ 78 ಜನರು ಕಡಲ್ಕೊರೆತದಿಂದ ತೊಂದರೆಗೆ ಒಳಗಾಗಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಕೇರಳದ ಕರಾವಳಿ ಭಾಗದಲ್ಲಿ 60 ಕಿಲೋಮೀಟರ್ ವೇಗದಲ್ಲಿ ಭಾರೀ ಗಾಳಿ ಬೀಸಲಿದೆ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದೆ.