ಗ್ರಾಮೀಣ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 1200 ಬೋಧಕರಿಗೆ ನಿರುದ್ಯೋಗ ಭೀತಿ
ಬೆಂಗಳೂರು, ಮಾರ್ಚ್ 1: ದೇಶದ ವಿವಿಧ ರಾಜ್ಯಗಳ ಗ್ರಾಮೀಣ ಭಾಗದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಾಪಕರಾಗಿರುವ ಸಾವಿರಾರು ಮಂದಿ ಈ ತಿಂಗಳ ಅಂತ್ಯಕ್ಕೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದರಿಂದ ಕೋವಿಡ್ ಸಂಕಷ್ಟದ ನಡುವೆ ನಿರುದ್ಯೋಗ ಭೀತಿ ಎದುರಿಸುತ್ತಿರುವ ಯುವಜನತೆಯ ಸಂಖ್ಯೆಗೆ ಮತ್ತಷ್ಟು ಹೊಸ ಸೇರ್ಪಡೆಯಾಗುವ ಭೀತಿ ಮೂಡಿದೆ.
ಬಡ ರಾಜ್ಯಗಳಲ್ಲಿನ ಗ್ರಾಮೀಣ ಹಾಗೂ ನಗರಗಳಿಂದ ತುಂಬಾ ದೂರ ಇರುವ ಎಂಜಿಯಿರಿಂಗ್ ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟ ಸುಧಾರಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಪದವೀಧರರನ್ನು ತೆಗೆದುಕೊಳ್ಳುವ ವಿಶ್ವ ಬ್ಯಾಂಕ್ ಅನುದಾನಿತ ಯೋಜನೆ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಇದರಿಂದ ದೇಶದಲ್ಲಿ 1,200ಕ್ಕೂ ಅಧಿಕ ಅಸಿಸ್ಟೆಂಟ್ ಪ್ರೊಫೆಸರ್ಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಗ್ರಾಮೀಣ ಭಾಗದ ಅನೇಕ ಕಾಲೇಜುಗಳು ತಮ್ಮ ಅರ್ಧದಷ್ಟು ಸಿಬ್ಬಂದಿ ಕೊರತೆ ಎದುರಿಸಲಿದ್ದಾರೆ.
ಮಾರ್ಚ್ 2ರಂದು ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ
ಕೇಂದ್ರ ಸರ್ಕಾರವು ತಾಂತ್ರಿಕ ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗಾಗಿ ತನ್ನದೇ 'ಮೆರಿಟ್' ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಆದರೆ ಈಗಿರುವ ಯೋಜನೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಆ ಯೋಜನೆಗೆ ನೇಮಕಾತಿ ಮಾಡಿಕೊಳ್ಳುವುದು ತೀರಾ ತಡವಾಗಬಹುದು ಎಂದು 'ದಿ ಹಿಂದೂ' ವರದಿ ಮಾಡಿದೆ. ಮುಂದೆ ಓದಿ.
ಮೂರು ಹಂತದ 3,600 ಕೋಟಿ ರೂ ಯೋಜನೆ
ವಿಶ್ವ ಬ್ಯಾಂಕ್ನ 3,600 ಕೋಟಿ ರೂ ಮೊತ್ತದ ಅನುದಾನದಡಿ ಮೂರು ಹಂತದ ಟೆಕಿಪ್ (ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ) ಯೋಜನೆಯನ್ನು 2002ರ ಡಿಸೆಂಬರ್ನಲ್ಲಿ ಆರಂಭಿಸಲಾಗಿತ್ತು. ಏಳು ಕಡಿಮೆ ಆದಾಯದ ರಾಜ್ಯಗಳು, ಎಂಟು ಈಶಾನ್ಯ ಹಾಗೂ ಮೂರು ಬೆಟ್ಟ ಪ್ರದೇಶದ ರಾಜ್ಯಗಳಲ್ಲಿನ ಎಂಜಿನಿಯರಿಂಗ್ ಸಂಸ್ಥೆಗಳ ಗುಣಮಟ್ಟ ಸುಧಾರಣೆಯ ಮೇಲೆ ಮೂರನೇ ಹಂತ ಗಮನಹರಿಸಿತ್ತು.
ಸಿಬ್ಬಂದಿಗೆ ಭಾರಿ ವೇತನ
ಈ ಯೋಜನೆಗಾಗಿ ಎನ್ಐಟಿ, ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಿಂದ 1500ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಹೀಗೆ ನೇಮಕಾತಿ ಮಾಡಿಕೊಳ್ಳಲಾದ ಪ್ರತಿ ಐವರಲ್ಲಿ ನಾಲ್ವರು ಐಐಟಿ ಹಾಗೂ ಎನ್ಐಟಿಇಂದಲೇ ಬಂದವರಾಗಿದ್ದಾರೆ. ಅವರ ಅರ್ಹತೆಗೆ ತಕ್ಕಷ್ಟು ವೇತನ ಪಾವತಿಸಲಾಗದ ಕಾಲೇಜುಗಳಿಗೆ ಈ ಯೋಜನೆಯಡಿ ಅವರನ್ನು ಕಳುಹಿಸಲಾಗಿತ್ತು. ಏಳನೇ ವೇತನ ಆಯೋಗದ ನಿಯಮಾವಳಿಗೆ ಅನುಗುಣವಾಗಿ ಅವರಿಗೆ ಸಂಬಳ ನೀಡಲಾಗಿತ್ತು. ಆದರೆ ಈಗ ಆ ರಾಜ್ಯಗಳಾಗಲೀ, ಕೇಂದ್ರ ಸರ್ಕಾರವಾಗಲೀ ಅಷ್ಟು ಅನುದಾನ ಪೂರೈಸುವುದನ್ನು ಮುಂದುವರೆಸಲು ಆಸಕ್ತಿ ತೋರಿಸುತ್ತಿಲ್ಲ.
ರಾಜ್ಯದಲ್ಲಿ ಅಕ್ಟೋಬರ್ 4 ರಿಂದ ಪದವಿ,ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಶುರು
ಹೈಕೋರ್ಟ್ಗಳಲ್ಲಿ ಪ್ರಕರಣ
ಈಗಾಗಲೇ 300ಕ್ಕೂ ಹೆಚ್ಚು ಸಿಬ್ಬಂದಿ ಟೆಕಿಪ್ ಕಾರ್ಯಕ್ರಮವನ್ನು ತ್ಯಜಿಸಿ ಬೇರೆ ಉದ್ಯೋಗ ಹುಡುಕಿಕೊಂಡಿದ್ದಾರೆ. ಇನ್ನು ಸುಮಾರು 250 ಮಂದಿ ದೆಹಲಿ ಹೈಕೋರ್ಟ್ನಲ್ಲಿ ಮೊಕದ್ದಮೆಗಳನ್ನು ಹೂಡಿದ್ದಾರೆ. ಮಾರ್ಚ್ 15ರಂದು ಅದರ ವಿಚಾರಣೆ ನಡೆಯಲಿದೆ. ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶ ಹೈಕೋರ್ಟ್ಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಅವರ ಅವಧಿಯನ್ನು 2020ರ ಸೆಪ್ಟೆಂಬರ್ನಿಂದ 2021ರ ಮಾರ್ಚ್ವರೆಗೆ ಆರು ತಿಂಗಳವರೆಗೆ ವಿಸ್ತರಿಸಲಾಗಿತ್ತು.
'ಮೆರಿಟ್'ಗೆ ಇನ್ನೂ ಸಿಗದ ಅನುಮೋದನೆ
ಕೇಂದ್ರ ಸರ್ಕಾರವು ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ 'ಮೆರಿಟ್' ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಅದಿನ್ನೂ ಶೈಶವಾವಸ್ಥೆಯಲ್ಲಿದೆ. ಅದಕ್ಕಿನ್ನೂ ಸಂಪುಟ ಅನುಮೋದನೆ ಸಿಕ್ಕಿಲ್ಲ. ಟೆಕಿಪ್ ಮೂರನೇ ಹಂತವು ಮುಕ್ತಾಯಗೊಳ್ಳುವ ಮುನ್ನ ಅದಕ್ಕೆ ಅನುಮೋದನೆ ಸಿಗುವ ಸಂಭವ ಕಡಿಮೆ. ಇದರಿಂದಾಗಿ ವಿಶ್ವ ಬ್ಯಾಂಕ್ ನೀಡಿದ ಅನುದಾನ ಮುಕ್ತಾಯವಾದ ಬಳಿಕವೂ ಎಂಜಿಜಿಯರಿಂಗ್ ಕಾಲೇಜುಗಳಲ್ಲಿ ಈ ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರಗಳ ಮೇಲೆ ಬೀಳಲಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಇದನ್ನು ನಿರ್ವಹಿಸುವುದು ಕಷ್ಟವಾಗಲಿದೆ.
ಕಾಲೇಜುಗಳು ಉಳಿಯುವುದು ಹೇಗೆ?
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯಗಳು ಕಳೆದ 17 ವರ್ಷಗಳಲ್ಲಿ ಟೆಕಿಪ್ ಯೋಜನೆಯಾಚೆ ಅಸ್ತಿತ್ವ ಕಾದುಕೊಳ್ಳುವಲ್ಲಿ ಹಾಗೂ ಲಾಭದಾಯಕ ಸ್ಥಿತಿ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಬಡ ರಾಜ್ಯಗಳು ತೀವ್ರ ಸಂಕಷ್ಟ ಎದುರಿಸಲಿವೆ. ಇಲ್ಲಿ ಸಿಬ್ಬಂದಿಗೆ ಸೂಕ್ತ ವೇತನ ನೀಡಲು ಸಾಧ್ಯವಾಗದೆ ಹೋದರೆ ಎಂಜಿಯರಿಂಗ್ ಕಾಲೇಜುಗಳ ಅಸ್ತಿತ್ವಕ್ಕೇ ಸಂಚಕಾರ ಬರಲಿದೆ.