ಮುಂಬೈ ದಾಳಿಗೆ 12 ವರ್ಷ: ರತನ್ ಟಾಟಾ ಭಾವುಕ ಬರಹ
ಮುಂಬೈ, ನವೆಂಬರ್ 26: ಮುಂಬೈ ಮೇಲೆ 26/11ರ ಭಯಾನಕ ಭಯೋತ್ಪಾದನಾ ದಾಳಿ ನಡೆದು ಇಂದಿಗೆ 12 ವರ್ಷ. ಆ ಕರಾಳ ಘಟನೆಯ ನೆನಪು ಮತ್ತು ಜನರ ರಕ್ಷಣೆಗಾಗಿ ಉಗ್ರರೊಂದಗೆ ಕಾದಾಡಿ ಜೀವತೆತ್ತ ಧೈರ್ಯಶಾಲಿ ಹುತಾತ್ಮರನ್ನು ದೇಶ ಇಂದು ಸ್ಮರಿಸುತ್ತಿದೆ.
ಖ್ಯಾತ ಉದ್ಯಮಿ ರತನ್ ಟಾಟಾ ಅವರು ಈ ಮಾರಕ ದಾಳಿಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಾಗದು ಎಂದಿದ್ದಾರೆ. ತಾಜ್ ಹೋಟೆಲ್ನ ಪೈಂಟಿಂಗ್ಅನ್ನು ಹಂಚಿಕೊಂಡಿರುವ ಅವರು ಭಾವನಾತ್ಮಕ ಬರಹವೊಂದನ್ನು ಬರೆದಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಜನರು ಮತ್ತು ಹುತಾತ್ಮರಾದ ಯೋಧರಿಗೆ ಅವರು ಗೌರವ ಸಲ್ಲಿಸಿದ್ದಾರೆ.
'ಇಂದಿಗೆ 12 ವರ್ಷಗಳ ಹಿಂದೆ ನಡೆದ ಭೀಕರ ವಿಧ್ವಂಸಕ ಕೃತ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ. ಆದರೆ ಇನ್ನಷ್ಟು ಸ್ಮರಣೀಯವಾಗಿರುವುದು ವೈವಿಧ್ಯಮಯ ಜನರು ಒಟ್ಟಾಗಿ ಬಂದು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಂದು ಮುಂಬೈ ಭಯೋತ್ಪಾದನೆ ಮತ್ತು ವಿಧ್ವಂಸಕತೆಯನ್ನು ಮಣಿಸಿದ್ದು.
ಇಂದು ನಾವು ನಾವು ಕಳೆದುಕೊಂಡವರ ಬಗ್ಗೆ ಶೋಕಿಸುತ್ತೇವೆ ಮತ್ತು ಶತ್ರುಗಳನ್ನು ಸೋಲಿಸಲು ಸಹಾಯ ಮಾಡಿದ ಯೋಧರ ತ್ಯಾಗವನ್ನು ಗೌರವಿಸುತ್ತೇವೆ. ಆದರೆ ನಾವು ಹೆಚ್ಚು ಶ್ಲಾಘಿಸಬೇಕಿರುವುದು ನಾವು ಪಾಲಿಸಿಕೊಂಡು ಬಂದ ಏಕತೆ ಮತ್ತು ಕರುಣೆಯ ಮನೋಭಾವ ಹಾಗೂ ಸಂವೇದನಾಶೀಲತೆಯನ್ನು. ಅದನ್ನು ನಾವು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇನೆ' ಎಂದು ರತನ್ ಟಾಟಾ ಹೇಳಿದ್ದಾರೆ.
ಹೊಸ ನೀತಿಗಳೊಂದಿಗೆ ಹೋರಾಟ:
26/11ರ ಮುಂಬೈ ದಾಳಿಯ ಗಾಯಗಳನ್ನು ಭಾರತವು ಎಂದಿಗೂ ಮರೆಯುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶವು ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದ್ದಾರೆ.
'2008ರ ಈ ದಿನ ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ್ದರು. ವಿದೇಶಿಗರು, ಪೊಲೀಸರು ಸೇರಿದಂತೆ ಅನೇಕರು ಬಲಿಯಾಗಿದ್ದರು. ನಾನು ಅವರಿಗೆ ಗೌರವ ಅರ್ಪಿಸುತ್ತೇನೆ. ಭಾರತವು ತನ್ನ ಆ ಗಾಯಗಳನ್ನು ಮರೆಯಲು ಸಾಧ್ಯವಿಲ್ಲ. ಇಂದು ಭಾರತ ಭಯೋತ್ಪಾದನೆ ವಿರುದ್ಧ ಹೊಸ ನೀತಿಗಳೊಂದಿಗೆ ಹೋರಾಡುತ್ತಿದೆ. ಉಗ್ರವಾದದ ವಿರುದ್ಧದ ಹೋರಾಟ ಮಾಡುತ್ತಿರುವ ನಮ್ಮ ಭದ್ರತಾ ಸಿಬ್ಬಂದಿಗೂ ವಂದಿಸುತ್ತೇನೆ' ಎಂದಿದ್ದಾರೆ.