100 ಕೋಟಿ ಕೊರೊನಾ ಲಸಿಕಾಕರಣ ಟೀಕಾಕಾರರ ಬಾಯ್ಮುಚ್ಚಿಸಿದೆ: ಮೋದಿ
ನವದೆಹಲಿ, ಅಕ್ಟೋಬರ್ 22: ಕೊರೊನಾ ಸೋಂಕು ದೇಶ ವ್ಯಾಪಿಸುತ್ತಿದ್ದಂತೆ ಹಲವರು ಟೀಕೆ ಮಾಡಿದ್ದರು ಅವರೆಲ್ಲರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೊರೊನಾ ಸೋಂಕು ಹಬ್ಬುತ್ತಿದ್ದಂತೆ, ದೇಶವನ್ನು ಕೊರೊನಾವನ್ನು ಹಿಮ್ಮೆಟ್ಟಿಸಲು ಸಾಧ್ಯವೇ, ಲಸಿಕೆಯನ್ನು ಎಲ್ಲಿಂದ ತರುತ್ತಾರೆ, ಲಸಿಕೆಯನ್ನು ಆಮದು ಮಾಡಿಕೊಳ್ಳಲು ದೇಶ ಅಷ್ಟೊಂದು ಹಣ ಖರ್ಚು ಮಾಡಲಿದೆಯೇ, ಲಸಿಕೆ ಬಂದರೂ ಎಲ್ಲರಿಗೂ ಸಿಗುವುದೇ ಹೀಗೆ ಹತ್ತು ಹಲವಾರು ಟೀಕೆಗಳು ವ್ಯಕ್ತವಾಗಿದ್ದವು, ಆದರೆ 100 ಕೋಟಿ ಕೊರೊನಾ ಲಸಿಕೆಯ ಡೋಸ್ ಗುರಿ ತಲುಪಿದ ಬಳಿಕ ಈ ಟೀಕಾಕಾರರಿಗೆ ಉತ್ತರ ದೊರೆತಿರಬಹುದು ಎಂದು ಭಾವಿಸುತ್ತೇನೆ ಎಂದರು.
ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ: ನರೇಂದ್ರ ಮೋದಿ
ಮೇಡ್ ಇನ್ ಇಂಡಿಯಾದ ಶಕ್ತಿ ಬಹಳ ದೊಡ್ಡದಾಗಿದೆ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಕಾರಾತ್ಮಕ ವಾತಾವರಣ ಇದೆ. ವ್ಯವಹಾರದಲ್ಲಿ ವೋಕಲ್ ಫಾರ್ ಲೋಕಲ್ ಜಾರಿಗೆ ತರಬೇಕು. ಕಳೆದ ವರ್ಷ ದೀಪಾವಳಿ ವೇಳೆ ಆತಂಕದ ಕಾರ್ಮೋಡ ಇತ್ತು. ಆದರೆ ಈ ಬಾರಿ 100 ಕೋಟಿ ಡೋಸ್ ನೀಡಿಕೆ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಬೇರೆ ದೇಶಗಳ ಲಸಿಕಾ ಅಭಿಯಾನವನ್ನು ಪ್ರಸ್ತಾಪಿಸಿದ ಮೋದಿ, ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳಿಗೆ ಪರಿಣಿತಿ ಇತ್ತು. ಭಾರತ ಸಹ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಭಾರತ ಲಸಿಕೆ ಯಾವಾಗ ತರುತ್ತೆ, ಹಣ ಎಲ್ಲಿಂದ ತರುತ್ತೆ ಎಂಬ ಪ್ರಶ್ನೆ ಇತ್ತು. 100 ಕೋಟಿ ಡೋಸ್ ಲಸಿಕೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ ಎಂದು ಭಾರತದ ಸಾಮರ್ಥ್ಯವನ್ನು ಅವರು ಹೊಗಳಿದ್ದಾರೆ.
ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರ ದೇಶವನ್ನು ಕಾಪಾಡಿದೆ. ಭಾರತೀಯರು ಉತ್ಪಾದಿಸುವ ವಸ್ತುಗಳನ್ನು ಖರೀದಿಸಿ. ದೀಪಾವಳಿ ವೇಳೆ ಜನರಲ್ಲಿ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ.
ಯುದ್ಧ ನಡೆಯುವಾಗ ಶಸ್ತ್ರಾಸ್ತ್ರವನ್ನು ತ್ಯಜಿಸಬಾರದು. ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಬ್ಬಗಳನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಆಚರಿಸಬೇಕು. ಮುಂಬರುವ ಹಬ್ಬಗಳಿಗೆ ದೇಶದ ಜನರಿಗೆ ಶುಭಾಶಯಗಳು. ಮಾಸ್ಕ್ ಸಹಜವಾಗಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಮೋದಿ ಸಲಹೆ ನೀಡಿದ್ದಾರೆ.
ಭಾರತದಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವ ಭಾರತದ ಈ ಸಾಮರ್ಥ್ಯವನ್ನು ನೋಡುತ್ತಿದೆ. 100 ಕೋಟಿ ಡೋಸ್ ಲಸಿಕೆ ಕೇವಲ ಅಂಕಿಸಂಖ್ಯೆಯಲ್ಲ. 100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ತೋರಿಸಿದೆ. ಸಾಂಕ್ರಾಮಿಕ ರೋಗ ಯಾವುದೇ ತಾರತಮ್ಯ ಮಾಡಲ್ಲ.
ಅದೇ ರೀತಿ ಲಸಿಕೆಯಲ್ಲೂ ತಾರತಮ್ಯ ಮಾಡಬಾರದು. ವಿಐಪಿಗಳಿಗೂ ಸಾಮಾನ್ಯರಂತೆಯೇ ಲಸಿಕೆಯನ್ನು ನೀಡಲಾಗಿದೆ. ಭಾರತದಲ್ಲಿ ಜನರ ಪಾಲುದಾರಿಕೆಯನ್ನು ನಮ್ಮ ಶಕ್ತಿಯಾಗಿ ಬಳಸಿದ್ದೇವೆ ಎಂದು ಪ್ರಧಾನಿ ನುಡಿದಿದ್ದಾರೆ.
ಕಡಿಮೆ ಸಮಯದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಭಾರತದ ಲಸಿಕೆ ನೀಡಿಕೆ ವೈಜ್ಞಾನಿಕ ಆಧಾರದಲ್ಲಿ ನಡೆದಿದೆ ಎಂದು ನುಡಿದಿದ್ದಾರೆ. ಸವಾಲುಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ.
ದಾಖಲೆ ಸಂಖ್ಯೆಯಲ್ಲಿ ಯುನಿಕಾರ್ನ್ಗಳು ಆರಂಭವಾಗಿವೆ. ದೇಶದಲ್ಲಿ ವಿಶ್ವಾಸ, ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಸ್ಟಾರ್ಟ್ ಅಪ್ನಲ್ಲಿ ದಾಖಲೆ ಮಟ್ಟದಲ್ಲಿ ಹೂಡಿಕೆ ಆಗುತ್ತಿದೆ. ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ ಎಂದು ಅವರು ನುಡಿದಿದ್ದಾರೆ.
ಇಷ್ಟು ವರ್ಷ ಮೇಡ್ ಇನ್ ಮುಂದೆ ಬೇರೆ ದೇಶಗಳ ಹೆಸರನ್ನು ಕೇಳುತ್ತಿದ್ದೆವು ಆದರೆ ಇದೀಗ ಮೇಡ್ ಇನ್ ಇಂಡಿಯಾ ಶಬ್ದವನ್ನು ಕೇಳುತ್ತಿದ್ದೇವೆ, ಅದು ಲಸಿಕೆಯಿಂದಲೇ ಶುರುವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಮೇಡ್ ಇನ್ ಇಂಡಿಯಾ ವಸ್ತುಗಳ ಬಳಕೆಯನ್ನು ಶುರು ಮಾಡಿ ಎಂದು ಸಲಹೆ ನೀಡಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ಗೆ ಜೀವಂತ ಉದಾಹರಣೆ: ಆರಂಭದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮದ ಬಗ್ಗೆ ಆತಂಕವಿತ್ತು. ಇಲ್ಲಿ ಶಿಸ್ತು ಹೇಗೆ ಕೆಲಸ ಮಾಡುತ್ತದೆ ಸಹ ತೋರಿಸಲಾಗಿದೆ. ನಮ್ಮ ಸರ್ಕಾರದ 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಘೋಷಣೆಗೆ ಜೀವಂತ ಉದಾಹರಣೆ ಈ ಲಸಿಕೆ ಅಭಿಯಾನ ಎಂದರು.
ಕೋವಿಡ್ ಲಸಿಕೆ ಪೂರೈಕೆಯಲ್ಲಿ ನಾವು ವಿಐಪಿ ಸಂಸ್ಕೃತಿ, ಶ್ರೀಮಂತರು, ಉಳ್ಳವರಿಗೆ ಆದ್ಯತೆ ಎಂದು ನೋಡಲಿಲ್ಲ. ಅದರ ನೆರಳೂ ಕೂಡ ಸೋಂಕಲಿಲ್ಲ. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸಲಾಗಿದೆ ಎಂದು ಯಶಸ್ಸಿನ ಶ್ರಮವನ್ನು ಮುಂದಿಟ್ಟರು.
ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನದಿಂದ ಹುಟ್ಟಿಕೊಂಡಿದ್ದು, ವಿಜ್ಞಾನ ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದರು.