ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ನವದೆಹಲಿ, ನವೆಂಬರ್ 9: ಏಳು ದಶಕದಷ್ಟು ಹಳೆಯದಾದ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಒಮ್ಮತದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ಪ್ರಕಟಿಸಿದ ತೀರ್ಪಿನಲ್ಲಿ ಇರುವ ಪ್ರಮುಖ ಅಂಶಗಳೇನು? ಇಲ್ಲಿವೆ ಓದಿ.
* ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆ ಮಾಡಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಪರ್ಯಾಯವಾಗಿ ಸುನ್ನಿ ವಕ್ಫ್ ಮಂಡಳಿಗೆ ಒದಗಿಸಬೇಕು ಎಂದು ಹೇಳಿದೆ.
* ವಿವಾದಿತ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟಿಗಳನ್ನು ಒಳಗೊಂಡ ಮಂಡಳಿ ರಚನೆಗೆ ಮೂರು ತಿಂಗಳಲ್ಲಿ ಯೋಜನೆಯೊಂದನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಮಂದಿರ ನಿರ್ಮಾಣಕ್ಕೆ ಜತೆಯಾಗಿ ಕೆಲಸ ಮಾಡೋಣ: ಮೋಹನ್ ಭಾಗ್ವತ್
* ಮಂದಿರ ನಿರ್ಮಾಣಕ್ಕಾಗಿ ಸಂಪೂರ್ಣ 2.77 ಎಕರೆ ವಿವಾದಿತ ಭೂಮಿಯನ್ನು ಸುಪ್ರೀಂಕೋರ್ಟ್ ನೀಡಿದೆ.
* ಮಸೀದಿ ನಿರ್ಮಾಣಕ್ಕೆ ಸೂಕ್ತ ಪರ್ಯಾಯ ಭೂಮಿಯನ್ನು ಆಯ್ದು ಐದು ಎಕರೆಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ನಿರ್ಮೋಹಿ ಅಖಾರಕ್ಕೆ ಪ್ರಾತಿನಿಧ್ಯ
* ಈ ಪ್ರಕರಣದಲ್ಲಿ ವಿವಾದಿತ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸುವ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ್ದ ತೀರ್ಪು ತಪ್ಪಾಗಿತ್ತು ಎಂದು ಕೋರ್ಟ್ ಹೇಳಿತು.
* ನಿರ್ಮೋಹಿ ಅಖಾರ ಸಲ್ಲಿಸಿದ್ದ ದಾವೆ ಪರಿಗಣಿಸುವಂತಹದ್ದಲ್ಲ ಮತ್ತು ಅದಕ್ಕೆ ಪೂಜೆ ಸಲ್ಲಿಸುವ ಹಕ್ಕು ಇಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್, ಟ್ರಸ್ಟಿಗಳ ಮಂಡಳಿ ಸ್ಥಾಪನೆ ಮಾಡಿದ ವೇಳೆ ನಿರ್ಮೋಹಿ ಅಖಾರಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಸೂಚಿಸಿತು.
ರಾಮಮಂದಿರಕ್ಕೆ ಪ್ರತ್ಯೇಕ ಟ್ರಸ್ಟ್
* ಬಾಬ್ರಿ ಮಸೀದಿ ಸಂಬಂಧ ಸುನ್ನಿ ಮಂಡಳಿಗೆ ವಿರುದ್ಧವಾಗಿ ಹಕ್ಕು ಪ್ರತಿದಿಸಿದ್ದ ಶಿಯಾ ವಕ್ಫ್ ಮಂಡಳಿಯ ವಾದವನ್ನು ತಿರಸ್ಕರಿಸಿತು.
* ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನವು ರಾಮಮಂದಿರ ನಿರ್ಮಾಣದ ಚಟುವಟಿಕೆಗಳಿಂದ ವಿಎಚ್ಪಿ ಬೆಂಬಲಿತ ರಾಮ ಜನ್ಮಸ್ಥಾನ ನ್ಯಾಸ್ ಸಂಘಟನೆ ಹೊರಬರುವಂತೆ ಮಾಡಿದೆ.
ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡ್ತೀವಿ ಎಂದ ಕಾಂಗ್ರೆಸ್
ಪುರತತ್ವ ಸಮೀಕ್ಷೆ ಪುರಾವೆ
* ಭಾರತೀಯ ಪುರತತ್ವ ಇಲಾಖೆ ನೀಡಿರುವ ಪುರಾವೆಯನ್ನು ಕಾಲ್ಪನಿಕ ಅಥವಾ ಅಭಿಪ್ರಾಯ ಎಂದು ಪಕ್ಕಕ್ಕೆ ಇಡಲು ಸಾಧ್ಯವಿಲ್ಲ. ಬಾಬ್ರಿ ಮಸೀದಿಯು ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ಅದನ್ನು ಹಿಂದೂ ಕಲಾಕೃತಿಯ ಮೇಲೆ ನಿರ್ಮಿಸಲಾಗಿತ್ತು ಎಂಬ ವಾದವನ್ನು ಪುರತತ್ವ ಇಲಾಖೆ ಪುಷ್ಟೀಕರಿಸಿದೆ. ಆದರೆ ಪುರತತ್ವ ಸಮೀಕ್ಷೆಯು ಮಸೀದಿ ನಿರ್ಮಾಣಕ್ಕೆ ಹಿಂದೂ ದೇವಸ್ಥಾನವನ್ನು ಕೆಡವಲಾಗಿತ್ತೇ ಎಂದು ಹೇಳಿಲ್ಲ.
ಮಸೀದಿ ಧ್ವಂಸ ಆದೇಶ ಉಲ್ಲಂಘನೆ
* 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಸುಪ್ರೀಂಕೋರ್ಟ್ ಆದೇಶಗಳ ಉಲ್ಲಂಘನೆಯಾಗಿದೆ. 1949ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇರಿಸಿ ಅದನ್ನು ಅಪವಿತ್ರಗೊಳಿಸಿದ್ದು ಹಾಗೂ ಅದನ್ನು ನಾಶಗೊಳಿಸಿದ್ದು ಕಾನೂನಿಗೆ ವಿರುದ್ಧ.