ರೈತರ ಪ್ರತಿಭಟನೆ ಅಂತ್ಯ: ಹಲವು ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ
ಬೆಂಗಳೂರು, ಜೂನ್ 11: ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ, ಬೆಂಬಲ ಬೆಲೆ ನೀಡುವುದು, ರೈತರ ಸಾಲ ಮನ್ನಾ ಸೇರಿದಂತೆ ಇನ್ನಿತರೆ ಬೇಡಿಕೆ ಮುಂದಿಟ್ಟುಕೊಂಡು ದೇಶಾದ್ಯಂತ ಕರೆ ನೀಡಿದ್ದ 10 ದಿನಗಳ ಪ್ರತಿಭಟನೆ ಅಂತ್ಯಗೊಂಡಿದೆ.
ಜೂ.1ರಿಂದ ಗ್ರಾಮ್ ಬಂದ್ ಆಚರಿಸುವ ಮೂಲಕ ನಗರಗಳಿಗೆ ಕೃಷಿ ಉತ್ಪನ್ನ ಸರಬರಾಜು ಸ್ಥಗಿತಗೊಳಿಸಿ ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ರೈತರು ಪ್ರತಿಭಟನೆ ಕೈಗೊಂಡಿದ್ದರು. ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘದ ಅಧ್ಯಕ್ಷ ಶಿವಕುಮಾರ್ ಶರ್ಮಾ , ಮುಷ್ಕರ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ರೈತರ ಮುಷ್ಕರ: ಹಾಲು, ತರಕಾರಿ ಮಾರಾಟದಲ್ಲಿ ವ್ಯತ್ಯಯ
ರಾಜ್ಯ ಸರ್ಕಾರ ಆಡಳಿತ ಯಂತ್ರ ಹಾಗೂ ಪೊಲೀಸರನ್ನು ಬಳಸಿಕೊಂಡು ಮುಷ್ಕರವನ್ನು ಹತ್ತಿಕ್ಕಲು ಯತ್ನಿಸಿತ್ತು ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮಧ್ಯ ಪ್ರದೇಶ ಬಿಜೆಪಿ ಸರ್ಕಾರ 10 ದಿನಗಳ ಮುಷ್ಕರ ವಿಫಲವಾಗಿದ್ದು, ರೈತರು ಸ್ವಯಂ ಪ್ರೇರಿತವಾಗಿ ಮುಷ್ಕರದಲ್ಲಿ ಪಾಲ್ಗೊಂಡಿರಲಿಲ್ಲ, ಅವರನ್ನು ಬಲವಂತವಾಗಿ ಪ್ರತಿಭಟನೆಗೆ ಕರೆತರಲಾಗಿತ್ತು ಎಂದು ಹೇಳಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರತಿಭಟನೆ ಫಲಕೊಟ್ಟಿಲ್ಲ, ಹಲವಾರು ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ.
ಒಟ್ಟಿನಲ್ಲಿ ರೈತರ ಸಮಸ್ಯೆ ಎಂದಿಗೂ ಬಗೆಹರಿಯುವುದಿಲ್ಲವೇನೋ ಅನಿಸುತ್ತಿದೆ, ಅವರ ಕೆಲವು ಬೇಡಿಕೆಗಳು ಸರಿಯಾಗಿವೆ, 10 ದಿನಗಟ್ಟಲೆ ಅವರು ತಮ್ಮ ನಷ್ಟವನ್ನು ನೋಡದೆ ಎಲ್ಲ ರೈತರಿಗೂ ನ್ಯಾಯ ಸಿಗಬೇಕು ಎಂದು ಹೋರಾಡಿದ್ದಾರೆ ಆದರೆ ನಿರೀಕ್ಷಿತ ಯಶಸ್ಸನ್ನು ಅವರು ಗಳಿಸಿಲ್ಲ ಎಂದೇ ಹೇಳಬಹುದು.