NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!
ಪಠಾಣ್ ಕೋಟ್ ವಾಯುನೆಲೆಯಲ್ಲಿ ಸೂಕ್ಷ್ಮ ವಿಚಾರಗಳನ್ನು ಸುದ್ದಿ ಬಿತ್ತರಿಸಿದ ಆರೋಪದಡಿ ಎನ್ ಡಿಟಿವಿಗೆ 1ದಿನ ಯಾವುದೇ ಸುದ್ದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಆದೇಶಿಸಿದೆ.
ನವದೆಹಲಿ, ನವೆಂಬರ್. 04 : ಇಲ್ಲದನ್ನು ಮೈಮೇಲೆ ಎಳೆದುಕೊಂಡರು ಎನ್ನುವಂತೆ. ಎನ್ ಡಿಟಿವಿ ಸುದ್ದಿ ವಾಹಿನಿಯು ಇಲ್ಲದನ್ನು ಮೈಮೇಲೆ ಎಳೆದುಕೊಂಡು ಕೇಂದ್ರ ಸರಕಾರದ ಶಿಕ್ಷೆಗೆ ಗುರಿಯಾಗಬೇಕಾದ ಇಕ್ಕಟ್ಟಿಗೆ ಸಿಲುಕಿದೆ.
ಇತ್ತೀಚೆಗೆ ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿ ಪ್ರಸಾರ ನಿಯಮ ಉಲ್ಲಂಘಿಸಿದೆ. ಈ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿ ಒಟ್ಟು 24 ಗಂಟೆ ವರೆಗೆ ಯಾವುದೇ ರೀತಿಯ ಕಾರ್ಯಾಕ್ರಮಗಳು ಹಾಗೂ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿ ಎನ್ ಡಿಟಿವಿಗೆ ಆದೇಶಿಸಿದೆ.
ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಲಾಗುವ ಮೊದಲ ಆದೇಶ ಇದಾಗಲಿದ್ದು, ಜನವರಿಯಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು.
ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಮಿಗ್, ಯುದ್ಧ ವಿಮಾನಗಳು, ರಾಕೆಟ್ ಉಡಾವಕಗಳು, ಮಾರ್ಟರ್ ಗಳು ಹೆಲಿಕಾಪ್ಟರ್ ಗಳು, ಇಂದನ್ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ವಾಹಿನಿ ಪ್ರಸಾರ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ವಾಹಿನಿ ವಿರುದ್ದ ಸಮಿತಿ ಕ್ರಮಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಶೋಕಾಸ್ ನೋಟಿಸ್ ನ್ನು ವಾಹಿನಿಗೆ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.