ಚಿತ್ರಗಳು : ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ
ಹಾವೇರಿ, ಅಕ್ಟೋಬರ್ 22 : ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ದೀಪಾವಳಿಯ ಹೋರಿ ಬೆದರಿಸುವ ಸ್ಪರ್ಧೆ ಎಲ್ಲರ ಮೈ ಜುಮ್ಮೆನ್ನುವಂತೆ ಮಾಡುತ್ತದೆ. ಹಾವೇರಿ ಜಿಲ್ಲೆಯ ರೈತರು ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆಯನ್ನು ಆಯೋಜಿಸಿದ್ದರು. ನೂರಾರು ಜನರು ಇದರಲ್ಲಿ ಪಾಲ್ಗೊಂಡಿದ್ದರು.
ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಬಳಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಖಾಡದಲ್ಲಿ ಹೋರಿ ಓಡುವಾಗ ಅಡ್ಡಬಂದ ಓರ್ವ ಯುವಕನಿಗೆ ಗಾಯವಾಗಿದೆ. ಹೋರಿಯ ಬಾಲವನ್ನು ಹಿಡಿದು ಓಡುವ ದೃಶ್ಯ ನೋಡಿದ ಜನರು ಅಯ್ಯೋ ಪಾಪಾ ಎಂದರು.
ಶಿವಮೊಗ್ಗದಲ್ಲಿ ಈ ಬಾರಿ ಹೋರಿ ಬೆದರಿಸುವ ಸ್ಪರ್ಧೆ ನಿಷೇಧ
ಈ ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಗ್ರಾಮದ ನೂರಾರು ಹೋರಿಗಳು ಭಾಗವಹಿಸಿದ್ದವು. ರೈತರು ಎತ್ತುಳಿಗೆ ರಿಬ್ಬನ್, ಬಲೂನ್ ಹಾಗೂ ಕೊಬ್ಬರಿ ಕಟ್ಟಿ ಅಕಾಡದಲ್ಲಿ ಓಡಲು ಬಿಡುತ್ತಾರೆ. ಯುವಕರ ದಂಡು ಜಿಂಕೆಯಂತೆ ಓಡುವ ಹೋರಿಗಳನ್ನ ಹಿಡಿಯಲು ಮುಂದಾಗುತ್ತದೆ.
ಕೆಲವು ಹೋರಿಗಳನ್ನು ಹಿಡಿದ ಯುವಕರು ಕೊಬ್ಬರಿಯನ್ನ ಕಿತ್ತುಕೊಳ್ಳತ್ತಾರೆ. ಕೆಲವು ಎತ್ತುಗಳು ಯಾರ ಕೈಗೂ ಸಿಗದೇ ಓಡಿ ಬಹುಮಾನ ಪಡೆಯುತ್ತವೆ. ಈ ಹೋರಿ ಓಡಿಸುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಸ್ಪರ್ಧೆಯ ನಿಯಮ : ಗೊತ್ತು ಪಡಿಸಿದ ಜಾಗದಲ್ಲಿ ಒಂದೆಡೆ ಎಲ್ಲ ಹೋರಿಗಳನ್ನು ಸಾಲು ಗಟ್ಟಿ ನಿಲ್ಲಿಸುತ್ತಾರೆ. ಬಳಿಕೆ ಹೋರಿಗಳ ಕೋಡು ಮತ್ತು ಕೊರಳಲ್ಲಿ ವಿವಿಧ ರೀತಿಯ ರಿಬ್ಬನ್ ಕಟ್ಟುತ್ತಾರೆ. ಕೊರಳಲ್ಲಿ ಕೊಬ್ಬರಿಯನ್ನು ಕಟ್ಟಿ, ಹೋರಿಗಳನ್ನು ಓಡಿಸುತ್ತಾರೆ.
ವೇಗವಾಗಿ ಓಡಿ ಬರುವ ಹೋರಿಯ ಕೊರಳಲ್ಲಿ ಕಟ್ಟಿರುವ ಕೊಬ್ಬರಿಯನ್ನು ಯುವಕರು ಕಿತ್ತು ಕೊಳ್ಳುಲು ಪ್ರಯತ್ನಿಸುತ್ತಾರೆ. ಯಾರ ಕೈಗೂ ಸಿಗದೆ ಓಡುವ ಹೋರಿ ತನ್ನ ಕೊರಳಲ್ಲಿ ಕಟ್ಟಿರುವ ಕೊಬ್ಬರಿ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡು ಓಡಿ ಗುರಿ ಮುಟ್ಟುತ್ತದೆ.